ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ಹತ್ಯಾಕಾಂಡದ ಪ್ರಮುಖ ಮಾಸ್ಟರ್ಮೈಂಡ್ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರ ಹಾಗೂ ಟಾಪ್ ಕಮಾಂಡರ್ ಸೈಫುಲ್ಲಾ ಖಾಲಿದ್ ಎಂಬುದು ಖಚಿತವಾಗಿದೆ.
ಈ ಹಲ್ಲೆಗೆ ‘ದಿ ರೆಸಿಸ್ಟೆನ್ಸ್ ಫ್ರಂಟ್ (TRF)’ ಎಂಬ ಭಯೋತ್ಪಾದಕ ಸಂಘಟನೆ ಹೊಣೆ ಹೊತ್ತಿದ್ದು, ಇದು ಲಷ್ಕರ್-ಎ-ತೊಯ್ಬಾ (LeT) ನೊಂದಿಗೆ ನಿಕಟ ಸಂಬಂಧ ಹೊಂದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಬಂದಿದ್ದ ಇಬ್ಬರು ಉಗ್ರರು ಕೂಡಈ ದಾಳಿಗೆ ಕಾರಣರಾಗಿದ್ದು, ಅವರ ಹೆಸರನ್ನು ಈಗಾಗಲೇ ಭದ್ರತಾ ಮೂಲಗಳು ಗುರುತಿಸಿವೆ.
ಸೈಫುಲ್ಲಾ ಖಾಲಿದ್, ಲಷ್ಕರ್ ಉಪ ಮುಖ್ಯಸ್ಥನಾಗಿದ್ದು, ಮುಂಬೈ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ನ ಆಪ್ತ ಸಹಾಯಕನೆಂದು ಹೇಳಲಾಗುತ್ತಿದೆ. ಈತ ಐಷಾರಾಮಿ ಜೀವನ ಶೈಲಿಯಲ್ಲಿ ತಿರುಗಾಡುತ್ತಾ, ಅತ್ಯಾಧುನಿಕ ಶಸ್ತ್ರಾಸ್ತ್ರಧಾರಿ ಉಗ್ರರ ಭದ್ರತೆಯಲ್ಲಿ ಇರುತ್ತಿದ್ದ. ಭಾರತದ ವಿರುದ್ಧ ದ್ವೇಷಪೂರ್ವಕ ಚಟುವಟಿಕೆಗಳಲ್ಲಿ ನಿರಂತರ ತೊಡಗಿದ್ದ ಈತನಿಗೆ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ನಿಕಟ ಸಂಬಂಧವಿದೆ.
ಸೈಫುಲ್ಲಾ ಕೆಲ ತಿಂಗಳುಗಳ ಹಿಂದೆ ಪಂಜಾಬ್ನ ಕಂಗನ್ಪುರಕ್ಕೆ ಭೇಟಿ ನೀಡಿದ್ದ. ಅಲ್ಲಿನ ಪಾಕಿಸ್ತಾನ ಸೇನೆಯ ಬೃಹತ್ ಬೆಟಾಲಿಯನ್ ಆವರಣದಲ್ಲಿ ಕರ್ನಲ್ ಜಾಹಿದ್ ಜರೀನ್ ನಡೆಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈತ, ಭಾರತ ವಿರೋಧಿ ಜಿಹಾದಿ ಭಾಷಣ ಮಾಡಿದ. “ಫೆಬ್ರವರಿ 2, 2025. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. 2026ರೊಳಗೆ ಕಾಶ್ಮೀರ ಸ್ವತಂತ್ರವಾಗಲಿದೆ” ಎಂಬ ಭರವಸೆ ಈ ವೇಳೆ ಈತ ನೀಡಿದ್ದ.
ಈ ಸಭೆಯನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಪಾಕಿಸ್ತಾನ ಸೇನೆ ಜಂಟಿಯಾಗಿ ಆಯೋಜಿಸಿದ್ದವು. ಸಭೆಯಲ್ಲಿ ಪಾಕಿಸ್ತಾನಿ ಶಸ್ತ್ರಾಸ್ತ್ರಧಾರಿ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಗುಪ್ತಚರ ವರದಿಗಳ ಪ್ರಕಾರ, ಕಳೆದ ವರ್ಷ ಅಬೋಟಾಬಾದ್ ಕಾಡಿನಲ್ಲಿ ನಡೆದ ಭಯೋತ್ಪಾದಕ ಶಿಬಿರದಲ್ಲಿ ನೂರಾರು ಪಾಕಿಸ್ತಾನಿ ಯುವಕರು ಭಾಗವಹಿಸಿದ್ದರು. ಲಷ್ಕರ್ ಸಂಘಟನೆಯ ರಾಜಕೀಯ ವಿಭಾಗ ಪಿಎಂಎಂಎಲ್ ಮತ್ತು ಎಸ್ಎಂಎಲ್ ಈ ಶಿಬಿರವನ್ನು ಆಯೋಜಿಸಿತ್ತು. ಶಿಬಿರದಲ್ಲಿ ಸೈಫುಲ್ಲಾ ಯುವಕರಲ್ಲಿ ಭಾರತ ವಿರೋಧಿ ಭಾವನೆ ಬೆಳೆಸುವಂತೆ ಪ್ರಚೋದಕ ಭಾಷಣ ನೀಡಿದ್ದನು.
ಶಿಬಿರದ ಬಳಿಕ ಈ ಯುವಕರಿಗೆ ಭಯೋತ್ಪಾದಕ ತರಬೇತಿ ನೀಡಲಾಗಿದ್ದು, ನಂತರ ಪಾಕಿಸ್ತಾನ ಸೇನೆಯ ಸಹಾಯದಿಂದ ಅವರನ್ನು ಭಾರತದೊಳಗೆ ಕಳಿಸಲಾಗಿತ್ತು ಎಂದು ವರದಿಯಾಗಿದೆ.ಇದನ್ನು ಓದಿ –ಪಹಲ್ಗಾಮ್ ದಾಳಿ ; ಸೌದಿ ಅರೇಬಿಯಾ ಪ್ರವಾಸ ತೊರೆದು ಇಂದು ರಾತ್ರಿಯೇ ಪ್ರಧಾನಿ ಭಾರತಕ್ಕೆ ವಾಪಸ್
ಆಗಸ್ಟ್ 5, 2019 ರಂದು ಸಂವಿಧಾನ ತಿದ್ದುಪಡಿ ಮೂಲಕ ಜಮ್ಮು ಮತ್ತು ಕಾಶ್ಮೀರದಿಂದ ವಿಧಿ 370 ಮತ್ತು 35A ತೆಗೆದು ಹಾಕಿದ ನಂತರ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಹೆಚ್ಚು ಸಕ್ರಿಯವಾಗಿದ್ದು, ಐಎಸ್ಐ ಯು ಟಿಆರ್ಎಫ್ ಅನ್ನು ರಚಿಸಿ ದಾಳಿಗಳಿಗೆ ಮುಂದಾಗಿವೆ.