ಇಂದು ಶಿವರಾತ್ರಿ, ಕೈಲಾಸವಾಸಿಯಾದ ದಿಗಂದರ, ಗಂಗಾಧರ,ಗೌರಿ ವರ, ಮಹಾಕಾಯ ಮಹಾಯೋಗಿ, ಮಹೇಶ್ವರ, ಇನ್ನು ಮುಂತಾದ ನಾಮಾಂಕಿತಗಳಿಂದ ಲೋಕವನ್ನ ರಕ್ಷಿಸುತ್ತಿರುವ ಪರಮೇಶ್ವರನ ಆರಾಧನೆಯ ಸಮಯ.
ಭೂಲೋಕದಲ್ಲಿ ಇಂದು ಭೋಲೆನಾಥನಿಗೆ ನೃತ್ಯ ಸಂಗೀತ, ಹಾಡು, ಕೀರ್ತನೆ, ಜಪ- ತಪ, ಜಾಗರಣೆ, ಅಲಂಕಾರ, ದೂಪ ದೀಪ, ಅಭಿಷೇಕ,ಹೂ ಹಣ್ಣು ಫಲಹಾರಗಳಿಂದ ವೈಭವದಿಂದ ವಿಜೃಂಭಣೆಯಿಂದ ವಿಭೂತಿಯೊಂದಿಗೆ ಆಚರಣೆ ಮಾಡುತ್ತಿದ್ದೇವೆ ಇದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯವೇ ಸರಿ.
ಲೋಕಕಲ್ಯಾಣಕಾರಿಯಾದ ಶಿವನಿಗೆ ವಿಭಿನ್ನ ರೀತಿಯಲ್ಲಿ ಅಲಂಕರಿಸಿ ಬಾಹ್ಯ ರೂಪವನ್ನು ನೋಡಿ ಕಣ್ತುಂಬಿ ಕೊಳ್ಳುವುದರ ಜೊತೆಗೆ ಶಿವನ ಆಂತರಿಕ ರೂಪವನ್ನ ನಮ್ಮ ಅಂತರ್ ಕಣ್ಣಿನಿಂದ ನಮ್ಮ ಅಂತರ್ ಪ್ರಜ್ಞೆಯನ್ನು ಜಾಗೃತಗೊಳಿಸುವುದರ ಮೂಲಕ ಶಿವನ ಅಂತರಿಕ ರೂಪವನ್ನು ಸಹ ನಾವು ಅಲಂಕರಿಸಿ ವಿಜೃಂಭಿಸೋಣ.
ಬ್ರಹ್ಮಾಂಡದ ಸತ್ಯವನ್ನ ನೋಡುತ್ತಿರುವ ಮಹೇಶ್ವರನ ಮೂರನೇ ಕಣ್ಣು ನಮ್ಮ ಒಳಗಣ್ಣನ್ನು ಸೂಚಿಸುತ್ತದೆ, ಈ ಹೊಳಗಣ್ಣಿನಿಂದ ನಮ್ಮ ಜೀವನದ ಆಳವಾದ ತಿಳುವಳಿಕೆಯನ್ನು ಅನುಭವಿಸುವ ಸತ್ಯದ ದಾರಿಯನ್ನು ಹುಡುಕೋಣ.
ತನ್ನ ಜಟೆ ಮೇಲೆ ಇರುವ ಗಂಗೆಯು ಅಮೃತದ ಧಾರೆಯಾಗಿ ನಮ್ಮ ಎಲ್ಲಾ ಚಿಂತೆ, ಒತ್ತಡ,ನೋವು, ದುಃಖ ದುಮ್ಮಾನಗಳನ್ನೆಲ್ಲ ಸರಾಗವಾಗಿ ತೊಳೆಯುತ್ತಾ ನಮ್ಮ ಜೀವನದ ದಾರಿಯನ್ನ ಸುಗಮವಾಗಿ ಸಾಗಿಸುವ ಸಾಮರ್ಥ್ಯವನ್ನು ದಯಪಾಲಿಸಿದೆ ಎಂದು ಅನುಭವಿಸೋಣ.
ತ್ರಿಲೋಕ ಜ್ಞಾನಿಯಾದ ಶಿವನ ಕೈಯಲ್ಲಿ ಹಿಡಿದಿರುವ ಜೀವನದ ಮೂರು ಶಕ್ತಿಯನ್ನ ಪ್ರತಿಬಿಂಬಿಸುವ ತ್ರಿಶೂಲವು ಸೃಷ್ಟಿ ಸ್ಥಿತಿ ಲಯಗಳ ರಹಸ್ಯವನ್ನು ಹೇಗೆ ಸೃಷ್ಟಿಗೆ ತಿಳಿಸುತ್ತಿದೆಯೋ ಹಾಗೆಯೇ ನಮ್ಮ ಎಲ್ಲಾ ಶಕ್ತಿಗಳು ನಮ್ಮೊಳಗೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆಯನ್ನು ಮೂಡಿಸಿಕೊಳ್ಳೋಣ.
ಶಿವನನ್ನ ಆವರಿಸಿರುವ ಸರ್ಪವು ನಮ್ಮೊಳಗಿನ ಆಧ್ಯಾತ್ಮಿಕ ಶಕ್ತಿಯನ್ನು ಪ್ರತಿಬಿಂಬಿಸುವುದರ ಮೂಲಕ ನಮ್ಮಲ್ಲಿ ಇನ್ನು ಹೆಚ್ಚು ಆಳವಾದ ಶಾಂತಿಯನ್ನು ನೆಲೆಗೊಳಿಸಿದೆ ಹಾಗೆ ನಮ್ಮ ಎಲ್ಲಾ ಕಷ್ಟ ಸಂದರ್ಭದಲ್ಲೂ ಹೇಗೆ ಸರ್ಪವು ಶಿವನನ್ನ ಆವರಿಸಿದೆಯೋ ಹಾಗೆ ಪ್ರತಿಯೊಂದು ಸಂದರ್ಭದಲ್ಲಿ ಇವನು ನಮ್ಮನ್ನು ರಕ್ಷಿಸುತ್ತಿದ್ದಾನೆ ಅವನ ರಕ್ಷಣೆಯು ನಮ್ಮನ್ನು ಆವರಿಸಿದೆ ಎಂದು ಮುಂದೆ ಸಾಗೋಣ.
ನಟರಾಜನಾದ ಶಂಕರನ ನೃತ್ಯ ಭಂಗಿಯನ್ನು ನೋಡುತ್ತಾ ನಮ್ಮ ಜೀವನವೆಂಬ ವೇದಿಕೆಯ ಮೇಲೆ ಯಾವುದೇ ಅಡೆತಡೆಗಳು ಬಂದರೂ ನಿರಂತರವಾಗಿ ಪರಮಾನಂದದ ನೃತ್ಯವನ್ನು ನಮ್ಮ ಆತ್ಮ ಆನಂದಿಸಬೇಕು ಎನ್ನುವ ಪರಮ ಸತ್ಯವನ್ನ ಅರಿತುಕೊಳ್ಳೋಣ .
ನಾವು ಜೀವಿಸುವ ಸೃಷ್ಟಿಯ ಅನಂತ ಶಕ್ತಿಗಳ ಜೊತೆ ಶಿವನ ಶಕ್ತಿಯನ್ನು ಎಳೆಯಾಗಿ ಅನಾವರಣಗೊಳಿಸುತ್ತಾ ಈ ಶಿವರಾತ್ರಿಯನ್ನ ಅಂತರ್ ಪ್ರಜ್ಞೆಯಿಂದ ಇಂದ ಆಚರಿಸೋಣ ಎಲ್ಲರಿಗೂ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು.








