- ಕೊಲಂಬೊ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ
ಚೆನ್ನೈ/ಕೊಲಂಬೊ: ಕಾಶ್ಮೀರದ ಪಹಲ್ಗಾಮ್ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭೀಕರ ಉಗ್ರ ದಾಳಿಯ ನಂತರ, ದಾಳಿ ನಡೆಸಿದ ಉಗ್ರರು ಚೆನ್ನೈ ಮೂಲಕ ಶ್ರೀಲಂಕಾಕ್ಕೆ ಪರಾರಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ಲಂಕಾದ ಭದ್ರತಾ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಕೊಲಂಬೊ ಬಂಡರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಮೇ 3ರಂದು ಬೆಳಿಗ್ಗೆ 9:55ಕ್ಕೆ ಚೆನ್ನೈನಿಂದ ಹೊರಟ ಶ್ರೀಲಂಕಾ ಏರ್ಲೈನ್ಸ್ನ UL-122 ವಿಮಾನವು 11:32ಕ್ಕೆ ಕೊಲಂಬೊಗೆ ಲ್ಯಾಂಡ್ ಆದ ಬಳಿಕ, ಭದ್ರತಾ ಪಡೆಗಳು ಎಲ್ಲಾ ಪ್ರಯಾಣಿಕರ ಪರಿಶೀಲನೆ ನಡೆಸಿದವು.
ಈ ಸಮಯದಲ್ಲಿ ಕೊಲಂಬೊ ಪೊಲೀಸರು ಮತ್ತು ವಿಶೇಷ ಭದ್ರತಾ ದಳಗಳು ವಿಮಾನ ನಿಲ್ದಾಣದಾದ್ಯಂತ ಜಾಗೃತ ತಪಾಸಣೆ ನಡೆಸಿದವು. ಇದರಿಂದಾಗಿ ಸಿಂಗಾಪುರಕ್ಕೆ ಹೊರಡಬೇಕಿದ್ದ ವಿಮಾನಗಳ ವೇಳಾಪಟ್ಟಿಯಲ್ಲಿ ಕೆಲವು ವ್ಯತ್ಯಯ ಉಂಟಾಗಿದ್ದುದಾಗಿ ಶ್ರೀಲಂಕಾ ಏರ್ಲೈನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪರಿಶೀಲನೆಯ ಹಿಂದಿನ ಕಾರಣ ಏ.22 ರಂದು ಜಮ್ಮು-ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಭೀಕರ ಉಗ್ರ ದಾಳಿ.
ಈ ದಾಳಿಯಲ್ಲಿ ಇಸ್ರೇಲ್ ಹಾಗೂ ಇಟಲಿ ಪ್ರಜೆಗಳು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 26 ಮಂದಿ ಬಲಿಯಾಗಿದ್ದರು. 2019 ರ ಪುಲ್ವಾಮಾ ದಾಳಿಯ ಬಳಿಕ ಇದು ಉಗ್ರರು ನಡೆಸಿದ ಅತಿ ಭೀಕರ ದಾಳಿಯಾಗಿದೆ. ಈ ಬಾರಿ ಉಗ್ರರು ಭದ್ರತಾ ಪಡೆಗಳನ್ನುವಲ್ಲ, ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡಿದ್ದರು.ಇದನ್ನು ಓದಿ –ಕನ್ನಡಿಗರ ವಿರುದ್ಧ ವಿವಾದಿತ ಹೇಳಿಕೆ: ಗಾಯಕ ಸೋನು ನಿಗಮ್ ವಿರುದ್ಧ ದೂರು ದಾಖಲು
ಈ ಘಟನೆ ಭಾರತ ಮತ್ತು ಪಾಕಿಸ್ತಾನ ನಡುವೆ ಈಗಾಗಲೇ ಇರುವ ಉದ್ವಿಗ್ನತೆಯನ್ನು ಇನ್ನಷ್ಟು ಗಂಭೀರಗೊಳಿಸಿದೆ.