ಮೈಸೂರು: ರೈತರು ಡಿಎಪಿಗೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳ ಬಳಸಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಮಳೆ ಹಿನ್ನೆಲೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುಂಬರುವ ಮುಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಸಮರ್ಪಕವಾಗಿದೆ. ಮುಂಗಾರು ಹಂಗಾಮಿಗೆ ಸುಮಾರು 91586 ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇದೆ. ಈಗಾಗಲೇ ನಮ್ಮಲ್ಲಿ ಸುಮಾರು 61000 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಉಳಿದ ರಸಗೊಬ್ಬರದ ದಾಸ್ತಾನು ಶೀಘ್ರದಲ್ಲೇ ಮಾಡಲಿದ್ದೇವೆ. ಸದ್ಯಕ್ಕೆ 8400 ಟನ್ ಡಿಎಪಿ, 36000 ಟನ್ ಯೂರಿಯಾ, 31000 ಟನ್ ಕಾಂಪ್ಲೆಕ್ಸ್ ಮತ್ತು 5000 ಟನ್ ಪೊಟಾಸ್ ದಾಸ್ತಾನು ಇದೆ ಎಂದರು.
ಮುಂದಿನ ದಿನಗಳಲ್ಲಿ ಡಿಎಪಿ ಅಭಾವದ ಸಾಧ್ಯತೆ ಇದೆ. ಡಿಎಪಿ ಉತ್ಪಾದನೆಗೆ ಬೇಕಾದರೆ ಮೂಲ ವಸ್ತು ರಂಜಕವನ್ನು ನಾವು ಅಮೇರಿಕಾ, ರಷ್ಯಾ, ಚೀನಾ ದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಈಗ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಹಾಗಾಗಿ ರಂಜಕ ರಪ್ತು ಮಾಡುವುದನ್ನ ಕಡಿಮೆ ಮಾಡಿದೆ. ಪಾಕ್ ಬೆಂಬಲಿತ ಚೀನಾದಿಂದಲೂ ಆಮದಿಗೆ ಒಪ್ಪದ ಭಾರತ, ಖಾರೀಫ್ ಬೆಳೆಯ ಸಂಧರ್ಭದಲ್ಲಿ ಡಿಎಪಿಗೆ ಸಮಸ್ಯೆ ಉಂಟಾಗಬಹುದು ಎಂದು ಹೇಳಿದರು.ಇದನ್ನು ಓದಿ –ಶೀಘ್ರದಲ್ಲೇ 402 PSI ನೇಮಕಾತಿ ಅಧಿಸೂಚನೆ: ಗೃಹ ಸಚಿವ ಡಾ.ಜಿ. ಪರಮೇಶ್ವರ್
ಕಳೆದ ವರ್ಷ ಮೇ ಮಾಹೆಯಲ್ಲಿ 102 ಮಿ.ಮಿ ಮಳೆಯಾಗಿದ್ದರೆ ಈ ಸಾಲಿಗೆ 158 ಮಳೆ ಆಗಿದೆ. ಈ ಸಾಲಿನಲ್ಲಿ ಶೇ.54 ಹೆಚ್ಚುವರಿ ಮಳೆಯಾಗಿದೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ ಉದ್ದು 4500 ಹೆಕ್ಟೇರ್, ಹೆಸರು 2000 ಹೆಕ್ಟೇರ್, ಅಲಸಂದೆ ಸುಮಾರು 6500 ಹೆಕ್ಟೇರ್ ಬಿತ್ತನೆಯಾಗಿದೆ. ಇದರಲ್ಲಿ ಪ್ರಮುಖವಾಗಿ 51000 ಹೆಕ್ಟೇರ್ ತಂಬಾಕು ಬಿತ್ತನೆ ಆಗಿದೆ. ಮುಂಗಾರು ಮಳೆ ಇದೇ ರೀತಿ ಮುಂದುವರಿದರೆ ತಂಬಾಕು ಬೆಳೆಗೆ ಮತ್ತು ದ್ವಿದಳ ಬೆಳೆಗಳಿಗೆ ಹೊಡೆತ ಬೀಳಲಿದೆ. ಸದ್ಯಕ್ಕೆ ಮಳೆ ತಗ್ಗಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅತಿ ಶೀತ ಹವಾಗುಣದಿಂದ ಬೆಳೆಗಳಿಗೆ ಕೇದಿಗೆ ರೋಗ ಹರಡುವ ಸಾಧ್ಯತೆ ಇದೆ ರೈತ ಸಂಪರ್ಕ ಕೇಂದ್ರದಲ್ಲಿ ಔಷಧಿಗಳಿವೆ ಅವುಗಳ ಬಳಸಿ ನಿಯಂತ್ರಣ ಮಾಡಬಹುದೆಂದರು.