- ಸಮರ್ಥನೆಯಲ್ಲ… ನೇರ ನುಡಿ..!
ಪಕ್ಕದಲ್ಲಿ ನಿಂತಿದ್ದ ಒಬ್ಬ ವ್ಯೆಕ್ತಿ ನೀಟಾಗಿ ಪ್ಯಾಂಟು ಶರ್ಟು ಶೂ ಹಾಕ್ಕೋಂಡು ಒಂದು ಬ್ಯಾಗ್ ಬೆನ್ನಿಗೆ ಹಾಕ್ಕೋಂಡು ನಿಂತಿದ್ದ. ನೋಡ್ತಿದ್ದಾಂಗೆ ತಿಳಿಯಿತು ಇವನು ಕೆಲಸ ಹರಸಿಕೊಂಡು ಬಂದಿದ್ದಾನೆ ಯಾವುದೋ ಇಂಟರ್ವ್ಯೂವ್ ಗೆ ಹೋಗಿಬಂದಿರಬೇಕು ಅಂತ. ಫೋನ್ ನಲ್ಲಿ ಯಾರೊಂದಿಗೋ ಮಾತಾಡ್ತಿದ್ದ. ಸಿಗ್ನಲ್ ಇತ್ತು ಹಾಗಾಗಿ ರೋಡ್ ಕ್ರಾಸ್ ಮಾಡೋಕೆ ಅಂತ ನಿಂತಿದ್ದರಿಂದ ನಾನೂ ಕೂಡ ಅವನ ಪಕ್ಕದಲ್ಲಿಯೇ ನಿಂತುಕೊಂಡಿದ್ದೆ. ಅದೇನೇನೋ ಮಾತಾಡ್ತಿದ್ದ ಆದರೆ ಎರೆಡು ವಿಚಾರ ನನ್ನ ಕಿವಿಗೆ ಬಿದ್ದಿದ್ದು “ಅವರು ಕಾಲ್ ಬ್ಯಾಕ್ ಮಾಡ್ತೀನಿ ಅಂದ್ರು” ಅಂತ ಇನ್ನೊಂದು “ಇಲ್ಲಪ್ಪ ಇನ್ನೂ ಆಗಿಲ್ಲ ಊಟ ಮಾಡೋಕೆ ದುಡ್ಡೇ ಇಲ್ಲ, ಇದ್ದಿದ್ 80ರೂಪಾಯಿ ಪಾಸಿಗೇ ಆಯ್ತು” ಎಂಬುದು.
ಈ ಎರೆಡು ಮಾತು ನನ್ನ ಜೀವನದಲ್ಲಿಯೂ ಆದಂತಹ ಅನುಭವ. ಬೆಂಗಳೂರಿನಲ್ಲಿ ಇಂಟರ್ವ್ಯೂವ್ ಅಟೇಂಡ್ ಮಾಡಿ ಅವತೇನಾದ್ರು ಕಾಲ್ ಬ್ಯಾಕ್ ಮಾಡ್ತೀನಿ ಅಂದ್ರೆ ರಿಜೆಕ್ಟ್ ಆಗಿದ್ದಾನೆ ಎಂದರ್ಥ. ಅವನು ಮಾತಿಂದ ಆ ಹುಡುಗ ರಿಜೆಕ್ಟ್ ಆಗಿದ್ದಾನೆ ಎಂಬುದು ನನಗೆ ಸ್ಪಷ್ಟವಾಯಿತು ಆದರೆ ಅವನಿಗೆ ಏನು ಅನ್ನಿಸಿದೆಯೋ ಗೊತ್ತಿಲ್ಲ. ಒಂದ್ಸಲ ಹೇಳೋಣ ಎಂದು ಬಾಯಿ ತೆಗೆದೆ ಮತ್ತೊಂದ್ ಸಲ ಒಂದು ವೇಳೆ ಅವನು ಸೆಲೆಕ್ಟ್ ಆಗುತ್ತಾನೇನೋ ಎನ್ನುವ ಆಸೆ ಅವನಲ್ಲಿದ್ದು ಅವನಿಗೆ ನಾ ಹೇಳಿ ಮತ್ತೆ ರಿಜೆಕ್ಟ್ ಆಗಿದ್ದಾನೆಂದು ತಿಳಿದು ನನ್ನ ಮೇಲೆ ಇಡಿ ಶಾಪ ಹಾಕಬಹುದು ಎಂದು ಯೋಚಿಸುತ್ತಿದ್ದೆ..ಅಷ್ಟರಲ್ಲಿ ಸಿಗ್ನಲ್ ಬೀಡ್ತು. ಅವನು ಅವನ ಪಾಡಿಗೆ ಮುಂದುವರೆದೆರೆ ನಾನು ನನ್ನ ಪಾಡಿಗೆ ಯೋಚಿಸುತ್ತಾ ಮುಂದುವರೆದೆ. ಆದರೂ ಇವನಿಗೆ ನನ್ನಿಂದೇನಾದರೂ ಸಹಾಯವಾಗಬಹುದ ಎಂದು ಯೋಚಿಸಿದೆ ಆದ್ರೆ ಅವನು ಅಷ್ಟೊತ್ತಿಗಾಗಲೆ ಮರೆಯಾಗಿಬಿಟ್ಟಿದ್ದ. ಬೆಂಗಳೂರಿನಲ್ಲಿ ಕೆಲಸ ಪಡೆಯಲು ಇಂಟರ್ವ್ಯೂವ್ ಗೆ ಅಲೆಯುವುದರ ಕಷ್ಟ ಮತ್ತು ನರಕಯಾತನೆ ನನಗೂ ಅಭ್ಯಾಸವಾಗಿತ್ತು. ಮೂರು ತಿಂಗಳುಗಳ ಕಾಲ ನಾನೂ ಇದೇ ರೀತಿ ಅಲೆದಿದ್ದೆ.
ಅದಿರಲಿ ಅವನು ಊಟ ಮಾಡೋಕೆ ದುಡ್ಡಿಲ್ಲ ಅಂತ ಬೇರೆ ಹೇಳುತ್ತಿದ್ದ. ಅನ್ನದ ಬೆಲೆ ಮತ್ತು ಹಸಿದ ಹೊಟ್ಟೆ ಇವೆರೆಡು ಒಂದು ರೀತಿಯ ಆತ್ಮೀಯರಿದ್ದಂತೆ. ಹೊಟ್ಟೆ ಹಸಿದವನಿಗೆ ಅನ್ನದ ಬೆಲೆ ಚೆನ್ನಾಗಿಯೇ ಗೊತ್ತಿರುತ್ತದೆ. ಕೆಲ ವರ್ಷಗಳ ಹಿಂದೆ ಹೊಸದಾಗಿ ಕೆಲಸ ಸಿಕ್ಕಾಗ ತಿಂಗಳ ಕೊನೆಯಲ್ಲಿ ನಾನೂ ಮತ್ತು ನನ್ನ ಗೆಳೆಯ ಊಟ ಮಾಡಲು ದುಡ್ಡಿಲ್ಲದೆ ಮಧ್ಯಾಹ್ನದ ಸಮಯ ಇಬ್ಬರು ಒಂದೊಂದು ರೂಪಾಯಿ ಕೂಡಿಸಿ ಒಂದು ಬಾಳೆ ಹಣ್ಣನ್ನು ಕೊಂಡು ಇಬ್ಬರೂ ಪಾಲುದಾರರಾಗಿ ತಿಂದದ್ದು ನೆನಪಾಯಿತು. ಕೆಲಸ ಸಿಗುವುದಕ್ಕೆ ಮುಂಚೆ ಎಷ್ಟೋ ಸಲ ತಿನ್ನದೆ ತಿರುಗಿದ್ದೂ ಇದೆ ಬಿಡಿ. ಇದು ಸಾಮಾನ್ಯವಾಗಿ ಬೇರೆ ಊರುಗಳಿಂದ ಕೆಲಸ ಹರಸಿ ಬೆಂಗಳೂರಿಗೆ ಬಂದವರಿಗೆ ಚೆನ್ನಾಗಿಯೇ ಅನುಭವವಾಗಿರುತ್ತೆ.
ನೋಡುನೋಡುತ್ತಿದ್ದಂತೆ ಆ ಹುಡುಗ ಮತ್ತೆ ನಾನು ಬರುತ್ತಿದ್ದ ದಾರಿಯಲ್ಲಿ ಎದುರಾದ. ನೋಡೋಣ ಏನಾದರು ಆಗಲಿ ಒಮ್ಮೆ ಕೇಳಿಯೇ ಬಿಡೋಣ ಎಂದು ಕೇಳಿಯೇಬಿಟ್ಟೆ..”ಹಾಯ್ ಬ್ರದರ್ ನಿಮ್ಮ ಹೆಸರೇನು?”
ಒಮ್ಮೆಲೆ ನನ್ನನ್ನು ಚಕಿತನಾದಂತೆ ನೋಡಿದ. ಅವನಿಗನಿಸಿರಬೇಕು ಇವನ್ಯಾವನಪ್ಪ ಯಾರು ಅಂತಾನೆ ಗೊತ್ತಿಲ್ಲ ಮಾತಾಡಿಸ್ತಿದ್ದಾನೆ ಅಂತ.. ಮತ್ತೊಮ್ಮೆ ಕೇಳಿದೆ “ಏನು ಕೆಲಸ ಹುಡುಕುತ್ತಿದ್ದೀರಾ.?”
ಅದಕ್ಕವನು ಜೀವ ಬಂದಂತಾಗಿ “ಹೌದು ಹೌದು ಸರ್.. ಯಾವುದಾದರು ಕೆಲಸ ಇದ್ದರೆ ಹೇಳಿ ಡಿಗ್ರಿ ಮುಗಿಸಿದ್ದೇನೆ” ಅವನನ್ನು ನೋಡುತ್ತಲೇ ತಿಳಿದಿದ್ದರಿಂದ ಅವನ ಹಳೇ ಇತಿಹಾಸವೇನು ನಾನು ಕೇಳಲಿಲ್ಲ. ನನಗೆ ತಿಳಿದ ಕೆಲವರ ನಂಬರ್ ಕೊಟ್ಟೆ “ಈ ನಂಬರಿಗೆ ಕಾಲ್ ಮಾಡಿ ನೋಡಿ, ಅಶ್ವಾಕ್ ನಿಮ್ಮ ನಂಬರ್ ಕೊಟ್ಟಿದ್ದು ಅಂತ ಹೇಳಿ ಅಂತಂದೆ”.. ಅವನಿಗೆ ಖುಷಿಯಾಯಿತು ಮತ್ತೆ ನಾನು “ಊಟ ಮಾಡ್ತೀರ” ಎಂದು ಕೇಳಿದೆ..ಅವನು ಕಷ್ಟದಲ್ಲಿದ್ದರೂ ಹೊಟ್ಟೆ ಹಸಿದಿದ್ದರೂ ಕೂಡ ದೊಡ್ಡ ಸ್ವಾಭಿಮಾನಿ ಅನ್ಸುತ್ತೆ.. “ಅಯ್ಯೊ ಬೇಡ ಸರ್ ಇಷ್ಟು ಕೇಳಿದ್ರಲ್ಲ ಅಷ್ಟೇ ಸಾಕು..ತುಂಬಾ ತುಂಬಾ ಥ್ಯಾಂಕ್ಸ್ ಸರ್ ” ಅಂದ.
ಅದಕ್ಕೆ ನಾನು “ಸರಿ ನಿಮ್ಮ ಹೆಸರೇನು ? ಯಾವ ಊರು”
“ಅಭೀಷೇಕ್ ಅಂತ, ಬೇಲೂರು ಸರ್” ಅಂತಂದ.
“ಓಕೆ..ಕ್ಯಾರಿ ಆನ್” ಅಂತ ಹೇಳಿ ನಡೆದೆ. ಕನಿಷ್ಟ ಪಕ್ಷ ನಾನು ಅಷ್ಟಾದರು ಮಾತನಾಡಿಸಿದೆನಲ್ಲಾ ಎಂಬುದು ಸಾರ್ಥಕತೆ ನನ್ನಲ್ಲಿತ್ತು.
ನೋಡಿ ಎಂತ ವಿಪರ್ಯಾಸ ಅಲ್ವ?.. ಮನುಷ್ಯ ಮನುಷ್ಯನಿಗೆ ಆಗಲಿಲ್ಲವೆಂದರೆ ಏನು ಪ್ರಯೋಜನ ಹೇಳಿ. ಕೊಡೋದೇನು ಬೇಡ ಅಟ್ಲೀಸ್ಟ್ ಸಮಧಾನಕ್ಕಾದರು ಒಂದೆರೆಡು ಮಾತು ಒಂದು ದೊಡ್ಡ ಪ್ರೋತ್ಸಾಹವಿದ್ದಂತೆ. ಹಾಗೆಯೇ ಅನ್ನವನ್ನು ನಮಗೆ ಎಷ್ಟು ಬೇಕೋ ಅಷ್ಟೆ ಹಾಕೋಂಡು ತಿನ್ನಬೇಕು, ಯಾಕೆಂದರೆ ಅನ್ನ ಎಸೆಯುವ ಮುನ್ನ ನಾವು ನಡೆದು ಬಂದ ದಾರಿಯನ್ನು ಮರೆಯಬಾರದು. ಹಸಿದವರಿಗೆ ಒಂದು ಹೊತ್ತಿನ ಅನ್ನ ನೀಡುವ ಪುಣ್ಯ ನಮಗೆ ಬಹುಶಃ ಯಾವುದರಲ್ಲಿಯೂ ಸಿಗುವುದಿಲ್ಲ. ಪ್ರಾರ್ಥನಾಲಯಗಳಲ್ಲಿ ಶ್ರದ್ದೆಯಿಂದ ನಾವು ಮಾಡುವ ಪ್ರಾಥನೆಗಿಂತ ಮಿಗಿಲು ಹಸಿದವರಿಗೆ ಅನ್ನ ಕೊಡುವುದಾಗಿದೆ. ಮಾನವೀಯನ್ನು ಬೆಳಗಿಸುವಲ್ಲಿ ನೆರವಾಗೋಣ ಎನ್ನುವ ಆಶಯ.

ಪ್ರೀತಿಯಿಂದ..
ಅಶ್ವಾಕ್ ಶಾಹ್ ಕನ್ನಡಿಗ