ಟೆಹ್ರಾನ್, ಜೂನ್ 13 – ಇರಾನ್ನ ಪರಮಾಣು ಶಸ್ತ್ರಾಸ್ತ್ರ ಹಾಗೂ ಸೈನಿಕ ನೆಲೆಗಳ ಮೇಲೆ ಇಸ್ರೇಲ್ ಭೀಕರ ವಾಯುದಾಳಿ ನಡೆಸಿದ್ದು, ಈ ದಾಳಿಯಲ್ಲಿ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಜನರಲ್ ಹುಸೇನ್ ಸಲಾಮಿ ಹಾಗೂ ಇಬ್ಬರು ಪರಮಾಣು ವಿಜ್ಞಾನಿಗಳು ಸಾವನ್ನಪ್ಪಿದ್ದಾರೆ.
“ಆಪರೇಷನ್ ರೈಸಿಂಗ್ ಲಯನ್” ಎಂಬ ಹೆಸರಿನಲ್ಲಿ ನಡೆದ ಈ ದಾಳಿಯಲ್ಲಿ ಇಸ್ರೇಲ್ ಡಜನ್ಗಟ್ಟಲೆ ಫೈಟರ್ ಜೆಟ್ಗಳನ್ನು ಬಳಸಿದ್ದು, ಟೆಹ್ರಾನ್ನ ಅಣುಶಕ್ತಿ ಸೌಕರ್ಯಗಳು ಹಾಗೂ ಕ್ಷಿಪಣಿ ತಯಾರಿ ಕೇಂದ್ರಗಳು ಗಂಭೀರ ಹಾನಿಗೆ ಒಳಗಾಗಿವೆ. ಇರಾನ್ ಈ ದಾಳಿಯನ್ನು ದೃಢಪಡಿಸಿದ್ದು, ಯುರೇನಿಯಂ ಸಂಗ್ರಹಣಾ ಘಟಕಗಳಿಗೂ ನಾಶವುಂಟಾಗಿದೆ ಎಂದು ವರದಿಯಾಗಿದೆ.
ಇಸ್ರೇಲ್ ಮಿಲಿಟರಿ ಮೂಲಗಳ ಪ್ರಕಾರ, ಇರಾನ್ ಸುಮಾರು 15 ಪರಮಾಣು ಬಾಂಬ್ಗಳನ್ನು ತಯಾರಿಸಲು ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿದ್ದಂತೆ. ಈ ಹಿನ್ನೆಲೆಯಲ್ಲೇ ಇಸ್ರೇಲ್ ಈ ದಾಳಿಯನ್ನು ನಡೆಸಿದೆ. ಈ ಕಾರ್ಯಾಚರಣೆಯು ಇರಾನ್ನ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಯನ್ನು ತಡೆಗಟ್ಟುವ ಉದ್ದೇಶದಿಂದ ನಡೆದದ್ದು.
ಈ ದಾಳಿಯಲ್ಲಿ ಪ್ಯಾರಾಮಿಲಿಟರಿ ಮುಖ್ಯಸ್ಥ ಹೊಸೇನ್ ಸಲಾಮಿ ಜತೆಗೂಡಾಗಿ, ಪರಮಾಣು ಸಂಶೋಧನೆಗೆ ಪ್ರಮುಖ ಪಾತ್ರವಹಿಸಿದ್ದ ಇಬ್ಬರು ವಿಜ್ಞಾನಿಗಳೂ ಸಾವಿಗೀಡಾಗಿರುವ ಸಾಧ್ಯತೆ ಇದೆ.ಇದನ್ನು ಓದಿ –ಅಹಮದಾಬಾದ್ ವಿಮಾನ ದುರಂತ: ಅಪಘಾತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ
ಭಾರತೀಯರಿಗೆ ಎಚ್ಚರಿಕೆ ಸೂಚನೆ
ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿದ್ದು, ಇರಾನ್ ಹಾಗೂ ಇರಾಕ್ನಲ್ಲಿರುವ ಭಾರತೀಯರಿಗೆ ಭಾರತ ರಾಯಭಾರಿ ಕಚೇರಿಗಳು ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಿವೆ. ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಹೋಗಬಾರದು ಮತ್ತು ಸದಾ ರಾಯಭಾರಿ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂಬ ಸಲಹೆ ನೀಡಲಾಗಿದೆ.