ಮೈಸೂರು,ಜೂ.೨೧- ಸಾಂಸ್ಕೃತಿಕ ನಗರಿ ಐತಿಹಾಸಿಕ ಅರಮನೆ ಮುಂಭಾಗ ಸಾಮೂಹಿಕ ಯೋಗ ಪ್ರದರ್ಶನ ಮಾತ್ರವಲ್ಲದೆ ನೂರಕ್ಕೂ ಹೆಚ್ಚು ಕಡೆಗಳಲ್ಲಿ ಯೋಗ ಪ್ರದರ್ಶನ ಮಾಡುವ ಮೂಲಕ ಎಲ್ಲೆಡೆ ಯೋಗಕ್ಕೆ ತಲೆ ಬಾಗುವ ಮೂಲಕ ೧೧ನೇ ಅಂತರಾಷ್ಟ್ರೀಯ ಯೋಗವನ್ನು ಸಂಭ್ರಮಿಸಲಾಯಿತು.
ಯೋಗ ಎಂಬುದು ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಒಂದಾಗಿರುವುದರಿoದ ದೈಹಿಕ ಮತ್ತು ಭಾವನೆಗಳ ಸಮತೋಲನ ನಿಯಂತ್ರಣಗಳ ಬಗ್ಗೆ ಜನ ಜಾಗೃತಿ ಮಾಡಿಕೊಟ್ಟಿದೆ. ಪ್ರತಿ ನಿತ್ಯ ಮನುಷ್ಯ ಯೋಗ ಮಾಡುವುದರಿಂದ ಉತ್ತಮವಾದ ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ತಿಳಿಸಿದರು.
ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಅರಮನೆ ಮುಂಭಾಗ ಆಯೋಜಿಸಿದ್ದ ಯೋಗ ಪ್ರದರ್ಶನದಲ್ಲಿ ಸಾವಿರಾರು ಮಂದಿ ಮುಂಜಾನೆಯೇ ಅರಮನೆ ಆವರಣ ಸೇರಿದ್ದರು. ಬೆಳಿಗ್ಗೆ ೬.೩೦ಕ್ಕೆ ಆರಂಭಗೊಂಡ ಯೋಗ ಪ್ರದರ್ಶನದಲ್ಲಿ 4 ನಿಮಿಷಗಳ ಕಾಲ ಚಲನಕ್ರಿಯೆ, 25 ನಿಮಿಷಗಳ ಕಾಲ ಯೋಗಾಸನ, 14 ನಿಮಿಷಗಳ ಕಾಲ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ ಮಾಡಲಾಯಿತು. ಯೋಗಾಸಕ್ತರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಆಯುಷ್ ಇಲಾಖೆಯ ಅಧಿಕಾರಿಗಳಾದ ಡಾ.ರೇಣುಕಾ ದೇವಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.ಇದನ್ನು ಓದಿ –ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ಡ್ರೈಫ್ರೂಟ್ಸ್ ಪಾಕೆಟ್, ಬಾದಾಮಿ ಹಾಲು ವಿತರಣೆಗೆ ನಿರ್ಧಾರ
ಎಲ್ಲೆಡೆ ಆಚರಣೆ: ಮೈಸೂರು ವಿಶ್ವ ವಿದ್ಯಾನಿಲಯ, ಸಂಗೀತ ಪ್ರದರ್ಶಕಗಳ ವಿಶ್ವವಿದ್ಯಾನಿಲಯ, ಪ್ರಾಕೃತಿಕ ಚಿಕಿತ್ಸಾ ಕೇಂದ್ರ, ಪಯಣ ಕಾರು ಮ್ಯೂಸಿಯಂ, ಬಿಜೆಪಿ ಕಚೇರಿ, ಬಿಕೆಜಿ ಆಸ್ಪತ್ರೆ ಸೇರಿ ೫೦ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನದ ಮೂಲಕ ಯೋಗದ ಮಹತ್ವ ಸಾರಿದ್ದು ವಿಶೇಷವಾಗಿತ್ತು.