- ಸುಭ್ಮನ್ ಗಿಲ್ ಏಕದಿನ ತಂಡದ ನಾಯಕ
ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ 15 ಸದಸ್ಯರ ತಂಡವನ್ನು ಟೀಂ ಇಂಡಿಯಾ ಆಯ್ಕೆ ಸಮಿತಿ ಘೋಷಣೆ ಮಾಡಿದೆ. ಅಚ್ಚರಿ ಎಂಬಂತೆ ಏಕದಿನ ತಂಡದ ನಾಯಕರಾಗಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಅವರ ಜಾಗಕ್ಕೆ ಯುವ ಆಟಗಾರ ಶುಭಮನ್ ಗಿಲ್ ಅವರನ್ನು ನೇಮಕ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಪಷ್ಟನೆ ನೀಡಿದ್ದಾರೆ.
‘ಮೂರು ಮಾದರಿಗಳಿಗೆ ಮೂವರು ನಾಯಕರನ್ನು ಹೊಂದುವುದು ಕಷ್ಟ. ಸದ್ಯಕ್ಕೆ ಏಕದಿನ ಮಾದರಿಯ ಪಂದ್ಯಗಳು ಕೂಡ ಕಡಿಮೆ ಇವೆ. ನಮ್ಮ ಸಂಪೂರ್ಣ ಗಮನ ಮುಂಬರುವ ವಿಶ್ವಕಪ್ ಮೇಲಿದೆ. ಹೀಗಾಗಿ, ಭವಿಷ್ಯದ ನಾಯಕನನ್ನು ರೂಪಿಸುವ ನಿಟ್ಟಿನಲ್ಲಿ ಶುಭಮನ್ ಗಿಲ್ಗೆ ಜವಾಬ್ದಾರಿ ನೀಡಿ, ಅವರಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ನೀಡುವುದು ನಮ್ಮ ಉದ್ದೇಶ‘ – ಅಜಿತ್ ಅಗರ್ಕರ್, ಆಯ್ಕೆ ಸಮಿತಿ ಅಧ್ಯಕ್ಷ ನಾಯಕತ್ವ ಬದಲಾವಣೆಯ ಬಗ್ಗೆ ರೋಹಿತ್ ಅವರಿಗೆ ತಿಳಿಸಲಾಗಿದೆ ಎಂದು ಅಗರ್ಕರ್ ಸ್ಪಷ್ಟಪಡಿಸಿದರು. ಕೊಹ್ಲಿ ಮತ್ತು ರೋಹಿತ್ ಇಬ್ಬರೂ 2027ರ ಏಕದಿನ ವಿಶ್ವಕಪ್ನಲ್ಲಿ ಆಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೌದು. ನನ್ನ ಪ್ರಕಾರ 2027ರ ಏಕದಿನ ವಿಶ್ವಕಪ್ ಆಡುತ್ತಾರೆ. ಅದೇ ಕಾರಣಕ್ಕೆ ಅವರನ್ನು ಅಯ್ಕೆ ಮಾಡಲಾಗಿದೆ. ಆದರೆ, ನಾವು ಇಂದು ಅದರ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದರು.
ಇಂದಿನ ಆಯ್ಕೆ 2027ರ ವಿಶ್ವಕಪ್ ಯೋಜನೆಯ ಒಂದು ದೊಡ್ಡ ಭಾಗವಾಗಿದೆ ಮತ್ತು ಗಿಲ್ ಅವರಿಗೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಸಮಯ ನೀಡಬೇಕು. ಹಾಗಾಗಿ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಅಗರ್ಕರ್ ಸ್ಪಷ್ಟಪಡಿಸಿದರು.ಇದನ್ನು ಓದಿ –ನ. 15ರಿಂದ ಫಾಸ್ಟ್ಟ್ಯಾಗ್ ಇಲ್ಲದವರಿಗೆ ಹೊಸ ಟೋಲ್ ನಿಯಮ
ನಾಯಕತ್ವದ ದಾಖಲೆ
ರೋಹಿತ್ ಶರ್ಮಾ 56 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ 42 ಪಂದ್ಯಗಳನ್ನು ಗೆದ್ದಿದ್ದು, ಕೇವಲ 12 ಪಂದ್ಯಗಳಲ್ಲಿ ಮಾತ್ರ ಸೋತು, ಉಳಿದಂತೆ ಒಂದು ಪಂದ್ಯ ಟೈ ಆಗಿದ್ದು, ಇನ್ನೊಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ರೋಹಿತ್ ಶರ್ಮಾ ಎರಡು ಬಾರಿ ಏಷ್ಯಾಕಪ್ ಗೆದ್ದಿದ್ದಾರೆ. 2018 ಮತ್ತು 2023 ರ ಏಷ್ಯಾಕಪ್ ಪಂದ್ಯಗಳಲ್ಲಿ ಅವರು ತಂಡವನ್ನು ಚಾಂಪಿಯನ್ ಪಟ್ಟಕ್ಕೆ ತಂದುಕೊಟ್ಟಿದ್ದರು. 2025 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೂಡ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದರು. ಇದರಿಂದ 12 ವರ್ಷಗಳ ಬಳಿಕ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು.








