ರಾಜಸ್ಥಾನ: ರಾಜಧಾನಿ ಜೈಪುರದ ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ (SMS) ಆಸ್ಪತ್ರೆಯ ಆಘಾತ ಕೇಂದ್ರದ ತೀವ್ರ ನಿಗಾ ಘಟಕದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಈ ಘಟನೆದಲ್ಲಿ ಕನಿಷ್ಠ 8 ಮಂದಿ ರೋಗಿಗಳು ಜೀವಂತವಾಗಿ ಸುಟ್ಟು ಸಾವನ್ನಪ್ಪಿದ್ದಾರೆ.
ಭಾನುವಾರ ರಾತ್ರಿ ಈ ದುರಂತ ಸಂಭವಿಸಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಬೆಂಕಿ ಕಟ್ಟಡದ ಎರಡನೇ ಮಹಡಿಯಲ್ಲಿ ಪ್ರಾರಂಭವಾಗಿ ತೀವ್ರವಾಗಿ ಹಬ್ಬಿದೆ.
ಘಟನೆಯ ಸಮಯದಲ್ಲಿ ಆಸ್ಪತ್ರೆ ಸಿಬ್ಬಂದಿ ಮತ್ತು ಕೆಲವು ರೋಗಿ ಸಹಾಯಕರು ತುರ್ತು ಕ್ರಮ ಕೈಗೊಂಡು ಹಲವಾರು ರೋಗಿಗಳನ್ನು ಹೊರಗೆ ಸ್ಥಳಾಂತರಿಸಿದರು. ಕೆಲವರನ್ನು ಕಟ್ಟಡದ ಹೊರಭಾಗದಲ್ಲಿ ಹಾಸಿಗೆಯೊಡನೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
ಸಾಕ್ಷಿಗಳ ಪ್ರಕಾರ, ಬೆಂಕಿ ಹೊತ್ತಿಕೊಂಡ ಕ್ಷಣದಲ್ಲೇ ಕೆಲ ಆಸ್ಪತ್ರೆ ಸಿಬ್ಬಂದಿ ಸ್ಥಳ ತೊರೆದಿದ್ದಾರೆ ಎಂಬ ಆರೋಪ ಕುಟುಂಬಗಳಿಂದ ಕೇಳಿಬಂದಿದೆ. ಆದಾಗ್ಯೂ, ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ ಸುಮಾರು ಎರಡು ಗಂಟೆಗಳ ಕಾಲ ಹೋರಾಟ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ಇದನ್ನು ಓದಿ –ಅನರ್ಹ ಬಿಪಿಎಲ್ ಕಾರ್ಡ್ಗಳ ರದ್ದು
ಅವಘಡದ ನಂತರ ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳನ್ನು ಸುರಕ್ಷಿತ ವಿಭಾಗಗಳಿಗೆ ಸ್ಥಳಾಂತರಿಸಲಾಗಿದೆ. ಘಟನೆಯ ಕುರಿತು ರಾಜ್ಯ ಸರ್ಕಾರ ತನಿಖೆ ಆರಂಭಿಸಿದ್ದು, ಅವಘಡಕ್ಕೆ ಕಾರಣವಾದ ನಿರ್ಲಕ್ಷ್ಯ ಮತ್ತು ತುರ್ತು ನಿರ್ವಹಣೆಯ ವೈಫಲ್ಯದ ಬಗ್ಗೆ ವರದಿ ಕೋರಲಾಗಿದೆ.








