ಸ್ಥಳೀಯ ವಿದ್ಯಾನಗರದ ಮುಖ್ಯರಸ್ತೆ ಬದಿಯಲ್ಲಿ ಇಬ್ಬರು ವಯಸ್ಸಾದ ಹಿರಿಯ ದಂಪತಿಗಳು ಆರಾಮಾಗಿರಬೇಕಾದ ಈ ವಯಸ್ಸಿನಲ್ಲೂ ಪ್ರತಿದಿನ ಬೆಳಗಿನಿಂದ ರಾತ್ರಿಯವರೆಗೂ ಎಲ್ಲಾ ಬಗೆಯ ಸೊಪ್ಪುಗಳನ್ನು ಒಂದು ತಳ್ಳುವ ಗಾಡಿಯಲ್ಲಿಟ್ಟು ವ್ಯಾಪಾರ ಮಾಡುತ್ತಾರೆ. ನನ್ನ ಮನೆಯಿಂದ ಅವರಲ್ಲಿಗೆ ಹೋಗುವ ಮುನ್ನ ನಾಲ್ಕಾರು ತರಕಾರಿ -ಸೊಪ್ಪಿನ ಇತರೆ ವ್ಯಾಪಾರಿಗಳ ಅಂಗಡಿಗಳಿದ್ದರೂ ಸೊಪ್ಪು ತರಲು ಈ ವೃದ್ಧ ದಂಪತಿಗಳ ಬಳಿಗೇ ಬೇಕಾಗಿಯೇ ಹೋಗುತ್ತೇನೆ .ಜೀವನಚಕ್ರದ ಈ ಹಂತದಲ್ಲೂ ದುಡಿದು ತಿನ್ನಬೇಕೆನ್ನುವ ಅವರ ಸ್ವಾಭಿಮಾನದ ಬದುಕಿಗೆ ಒಂದು ಅಳಿಲು ಸೇವೆಯಂತಹ ಸಾಥ್ ಕೊಡುವ ಸಣ್ಣ ಆಸೆಯಿಂದ ಮನೆಯಿಂದ ತುಸು ದೂರವಾದರೂ ಅವರಲ್ಲಿಗೇ ಹೋಗುತ್ತೇನೆ.
ನಿನ್ನೆ ಭಾನುವಾರ ಬೆಳಿಗ್ಗೆ ಸೊಪ್ಪು ತರಲು ಅವರಲ್ಲಿಗೆ ಹೋಗಿದ್ದೆ. ಆಗಲೇ ನಾಲ್ಕಾರು ಜನ ಅಲ್ಲಿ ಸೊಪ್ಪು ಕೊಳ್ಳುತ್ತಿದ್ದರು. ನನಗಿಂತ ಮುಂಚಿತವಾಗಿ ಅಲ್ಲಿದ್ದ ನೋಡಲು ವಿದ್ಯಾವಂತರಂತಿದ್ದ ಒಬ್ಬ ಮಹಿಳೆ ಐದಾರು ಕಟ್ಟು ಕೊತ್ತಂಬರಿ ಪುದೀನ ಮೆಂತ್ಯ ಸೊಪ್ಪು ತೆಗೆದುಕೊಂಡು ಅಜ್ಜ ಹೇಳಿದ ₹ 50 ರೂಪಾಯಿಯನ್ನು ಫೋನ್ ಪೇ ಮಾಡುತ್ತೇನೆಂದು ಹೇಳಿ ಗಾಡಿಯ ಒಂದು ಬದಿಗೆ ಸಿಗಿಸಿದ್ದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರು. ಆಕೆ ತನ್ನ ಮೊಬೈಲ್ ತೆಗೆದು ಕೋಡ್ ಸ್ಕ್ಯಾನ್ ಮಾಡಿ ಒಂದೆರಡು ನಿಮಿಷಗಳ ನಂತರ ಅವರಷ್ಟಕ್ಕೇ ಅಲ್ಲಿಂದ ಅವಸರದಲ್ಲಿ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಹಾಗೆಯೇ ಹೊರಟೇಬಿಟ್ಟರು. ಅವರು ಹಣ ಸಂದಾಯ ಮಾಡಿದ ನಂತರ ಕಿಚ್ಚ ಸುದೀಪನ ಧ್ವನಿಯಲ್ಲಿ ಬರುವ ರೆಕಾರ್ಡೆಡ್ ವಾಯ್ಸ್ ಬಂದಂತೆ ತೋರಲಿಲ್ಲ. ವ್ಯವಹಾರದ ಗಡಿಬಿಡಿಯಲ್ಲಿ ಯಾರೂ ಅದನ್ನು ಗಮನಿಸಲೂ ಇಲ್ಲ.
ಇದಾದ ನಂತರ ನಾನೂ ಸಹಾ ನನಗೆ ಬೇಕಾದ ಸೊಪ್ಪು ಪಡೆದು ಹಣವನ್ನು ಫೋನ್ ಪೇ ಮಾಡಿ ಆ ತಾತನಿಗೆ ಹಣ ಸಂದಾಯವಾಗಿರುವುದನ್ನು ಮನವರಿಕೆ ಮಾಡಿಕೊಟ್ಟೆ. ಹಾಗೆಯೇ ಕುತೂಹಲಕ್ಕಾಗಿ ನನಗಿಂತ ಹಿಂದಿನವರು ಮಾಡಿರಬಹುದಾದ ಪೇಮೆಂಟ್ ಯಾವುದಿರಬಹುದೆಂದು ಚೆಕ್ ಮಾಡಲಾಗಿ ಅದರಲ್ಲಿ ನನಗಿಂತ ಹಿಂದಿನ ಫೋನ್ ಪೇ ಮಾಡಿದ್ದ ಮಹಿಳೆಯ ಹಣ ಐವತ್ತು ರೂಪಾಯಿ ಪಾವತಿಯಾಗಿರದೇ ಬೇರೇಯದೇ ಹಳೆಯ ಪಾವತಿ ಕಂಡುಬಂದಿತ್ತು.
ಇದನ್ನು ಗಮನಿಸುತ್ತಿದ್ದ ನನಗೆ ” ತಾತಾ… ಈಗ ಸೊಪ್ಪು ಖರೀದಿಸಿ ಸ್ಕೂಟರ್ ನಲ್ಲಿ ಹೋದ ಮೇಡಂ ರವರ ಐವತ್ತು ರೂಪಾಯಿ ನಿಮಗೆ ಸಂದಾಯವಾಗಿಲ್ಲ. ಅವರು ಮತ್ತೊಮ್ಮೆ ಬಂದಾಗ ನೆನಪು ಮಾಡಿ ಕೇಳಿ ಪಡೆಯಿರಿ. ಅವರಿಗೆ ಎಲ್ಲೋ ಗೊಂದಲವಾಗಿ ಪೇಮೆಂಟ್ ಆಗಿದೆ ಎಂದುಕೊಂಡು ಹಾಗೇ ಅವಸರದಲ್ಲಿ ಹೋಗಿದ್ದಿರಬಹುದು ” ಎಂದೆ.
ಅದಕ್ಕೆ ಆ ಮುದುಕಪ್ಪ ” ಅದೇನೋ ನಮಗೆ ಗೊತ್ತಾಗೋಲ್ಲಪ್ಪ…ಸಾಕಷ್ಟು ಜನ ಹೀಗೆ ಬಂದು ಸೊಪ್ಪು ಖರೀದಿಸಿ ಮೊಬೈಲ್ ತೋರಿಸಿ “ಹಣ ಹಾಕಾಯ್ತು” ಎಂದು ಹೇಳಿ ಹೋಗುತ್ತಾರೆ ಅವನ್ನೆಲ್ಲಾ ಚೆಕ್ ಮಾಡಿ ನೋಡೋಕೆ ನಮಗೆ ಬರೋಲ್ಲ , ಎಲ್ಲ ಧರ್ಮ ಕರ್ಮ ಅವರಿಗೇ ಸೇರಿದ್ದು”….ಎಂದು ಬೇಸರದಿಂದ ಹೇಳಿದರು. ಆನಂತರ ಅವರಿಗೆ ಕಡೆಯ ಪೇಮೆಂಟ್ ಎಷ್ಟು ಆಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳುವ ವಿಧಾನ ತೋರಿಸಿ ಫೋನ್ ಪೇ ಮಾಡಿದ ನಂತರ ಅದು ಪಾವತಿ ಆಗಿರುವುದರ ಧ್ವನಿ ಖಚಿತಪಡಿಸಿಕೊಳ್ಳಿ, ಹಾಗೂ ಅನುಮಾನ ಬಂದಾಗ ಒಮ್ಮೆ ಹೀಗೆ ಚೆಕ್ ಮಾಡಿ…. ಎಂದು ಕೆಲವೊಂದು ಬೇಸಿಕ್ ಅಂಶಗಳನ್ನು ತೋರಿಸಿಕೊಟ್ಟು ಅಲ್ಲಿಂದ ಬಂದೆ.
ಈ ಸನ್ನಿವೇಶದಲ್ಲಿ ಬಹುಶಃ ಆ ಮಹಿಳೆ ತಾನು ಪೇಮೆಂಟ್ ಮಾಡಿದ್ದೇನೆಂಬ ಭಾವನೆಯಲ್ಲೇ ಹೋಗಿದ್ದಿರಬಹುದೋ ಏನೋ ಗೊತ್ತಿಲ್ಲ. ಆದರೆ ಇನ್ನೂ ಕೆಲವು ಮಹಾನುಭಾವರೂ ಇರುತ್ತಾರೆ. ವಸ್ತು ಖರೀದಿಸಿ, ಸೇವೆ ಪಡೆದು ಮೊಬೈಲ್ ನಿಂದ ಹಣ ಪಾವತಿಸುವಂತೆ ನಟಿಸಿ ಉದ್ದೇಶಪೂರ್ವಕವಾಗಿ ಹಣ ಕೊಡದೇ ಹಾಗೇ ಹೊರಟುಬಿಡುತ್ತಾರೆ. ಇದನ್ನು ಹೇಳಲು ಕೇಳಲು ಅಚ್ಚರಿಯೆನಿಸಿದರೂ ಸತ್ಯ. ಅದರಲ್ಲೂ ಸಣ್ಣ ಹೋಟೆಲ್ ಗಳು, ಬೀದಿಬದಿಯ ಸಣ್ಣ ಪುಟ್ಟ ವ್ಯಾಪಾರಿಗಳನ್ನೇ ಇವರು ಗುರಿಯಾಗಿಸಿಕೊಂಡಿರ ಬಲ್ಲರು. ಈ ತರಹದ ಅನೇಕ ಘಟನೆಗಳೂ ನಿತ್ಯವೂ ನಡೆಯುತ್ತಿರಲೂ ಬಹುದು.
ಈ ಹಿನ್ನೆಲೆಯಲ್ಲಿ ಇದು ಸಿಂಪಲ್ ಅನಿಸಿದರೂ ಒಂದೆರಡು ಮಾತು.
ಡಿಜಿಟಲ್ ಪೇಮೆಂಟ್ ಪದ್ದತಿ ಬಂದ ನಂತರ ಇಂದು ರಸ್ತೆ ಬದಿಯಲ್ಲಿನ ಹತ್ತು ರೂಪಾಯಿ ಗೂ UPI ಮುಖಾಂತರ ಹಣ ಸಂದಾಯ ಮಾಡುವ ಅಭ್ಯಾಸವಿದೆ. ರಸ್ತೆ ಬದಿಯಲ್ಲಿ ಹೂವು, ಹಣ್ಣು, ತರಕಾರಿ ,ಸೊಪ್ಪು ಕಡಲೇಕಾಯಿ , ತೆಂಗಿನಕಾಯಿ ಮುಂತಾದ ಸಣ್ಣ ಪುಟ್ಟ ವ್ಯಾಪಾರ ಮಾಡುವ ಅಸಂಖ್ಯಾತರಲ್ಲಿ ಬಹುತೇಕರು ಅವಿದ್ಯಾವಂತರು ಅಥವಾ ಅವರಲ್ಲಿ ಕೆಲವರಿಗೆ ಡಿಜಿಟಲ್ ಪೇಮೆಂಟ್ ಕುರಿತಾದ ತಿಳಿವಳಿಕೆ ಕಡಿಮೆ. ಮಳೆ ಬಿಸಿಲು ಗಾಳಿಯೆನ್ನದೇ ಕೇವಲ ನೂರಾರು ರೂಪಾಯಿಯ ವ್ಯಾಪಾರಕ್ಕಾಗಿ ದಿನವಿಡೀ ರಸ್ತೆ ಬದಿಯಲ್ಲಿ ಕಷ್ಟಪಟ್ಟು ದುಡಿಯುತ್ತಾರೆ. ಮೇಲಾಗಿ ದಿನದ ವ್ಯಾಪಾರ ಮುಗಿದಾಗ ಅವರಿಗೆ ಸಿಗುವ ಲಾಭವೂ ಅಂತಹ ಹೆಚ್ಚೇನಿಲ್ಲವಾದ್ದರಿಂದ ಪ್ರತೀ ರೂಪಾಯಿಯೂ ಅವರ ಪಾಲಿಗೆ ಅತಿ ಮುಖ್ಯ.
ಹೀಗಾಗಿ ಅವರ ಬಳಿ ಖರೀದಿ ಮಾಡಿದ ನಂತರ ಫೋನ್ ಪೇ, ಗೂಗಲ್ ಪೇ, ಪೇಟಿಎಂ ..ಮೂಲಕ ಹಣ ಪಾವತಿಸುವವರು ಒಮ್ಮೆ ತಾವೇ ಖುದ್ದಾಗಿ ಪೇಮೆಂಟ್ ಸರಿಯಾಗಿ ಆಗಿದೆಯೇ ಎಂಬುದನ್ನು ಪರೀಕ್ಷಿಸಿ ಅವರಿಗೆ ಹೇಳುವುದು ಒಳ್ಳೆಯದು. ಆಗ ಅವರಿಗೆ ಹಣ ಸಂದಾಯವಾಗಿರುವ ಭರವಸೆ ಬರುತ್ತದೆ. ನಮ್ಮ ಅವಸರದಲ್ಲಿ ವಸ್ತು ಖರೀದಿಸಿ ಹಾಗೇ ಸುಮ್ಮನೇ ಪಾವತಿ ಆಗಿದೆ ಎಂಬ ಭಾವನೆಯಿಂದ ಹೊರಟರೆ ವ್ಯಾಪಾರಿಗಳಿಗೆ ಸಿಗುವ ಅಲ್ಪ ಸ್ವಲ್ಪ ಲಾಭದ ಮೇಲೂ ಹೊಡೆದಂತಾಗುತ್ತದೆ. ಹೀಗಾದಲ್ಲಿ ಅವರಿಗೆ ಡಿಜಿಟಲ್ ಪೇಮೆಂಟ್ ಬಗೆಗೂ ಭರವಸೆ ಮೂಡಲಾರದು.
ಒಟ್ಟಾರೆಯಾಗಿ, ದಿನವಿಡೀ ಮೈಮುರಿದು ಬೆವರು ಸುರಿಸಿ ದುಡಿದು ಉಣ್ಣುವ ಜನರಿಗೆ ನಮ್ಮಿಂದ ಆಕಸ್ಮಿಕವಾಗಿ ಆಗಲೀ ಅಥವಾ ಕಣ್ತಪ್ಪಿನಿಂದಾಗಲೀ ಇಲ್ಲವೇ ಉದ್ದೇಶಪೂರ್ವಕವಾಗಿಯೇ ಆಗಲೀ ಅನ್ಯಾಯವಾಗದಂತೆ ಸಣ್ಣ ಎಚ್ಚರವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಅದರಲ್ಲೂ ವಯಸ್ಸಾದವರು ತಮ್ಮ ವೃದ್ಧಾಪ್ಯದಲ್ಲಿ ಹೊರಗೆ ಬಂದು ಹತ್ತಾರು ರೂಪಾಯಿಗಳಿಗಾಗಿ ದುಡಿಯುತ್ತಿದ್ದಾರೆಂದರೆ ಅದು ಅವರ ಸ್ವಾಭಿಮಾನದ ಸಂಕೇತವಾಗಿರಬಹುದು ಅಥವಾ ಮನೆ ಮಕ್ಕಳು ಬಂಧುಗಳು ಎಲ್ಲರೂ ಇದ್ದೂ ಅವರನ್ನು ನೋಡಿಕೊಳ್ಳುವವರು ಇಲ್ಲದೇ ಇರಬಹುದು . ಹೀಗಾಗಿ ಸಾಧ್ಯವಾದಷ್ಟು ಅಂತಹವರಿಂದ ಹೆಚ್ಚು ಖರೀದಿಸಿ ಅವರ ಬದುಕಿಗೆ ಪರೋಕ್ಷವಾಗಿ ಆಸರೆಯಾಗುವ ಜೊತೆಗೆ, ವಸ್ತು ಖರೀದಿಸಿದ ಬಳಿಕ ಅವರಿಗೆ ಹಣದ ವಿಚಾರದಲ್ಲಿ ನಷ್ಟವಾಗದಂತೆ ಎಚ್ಚರ ವಹಿಸುವುದು ಸಹಾ ನಮ್ಮ ಜವಾಬ್ದಾರಿ.
ಮರೆಯುವ ಮುನ್ನ
ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾರಿಗಾದರೂ ವ್ಯಾಪಾರದಲ್ಲಿ ವ್ಯವಹಾರದಲ್ಲಿ ಯಾಮಾರಿಸಿ ಒಂದಷ್ಟು ಹಣ ಉಳಿಸಿಕೊಂಡಲ್ಲಿ ಕೆಲವರ ಮನಕ್ಕೆ ಅನಿರ್ವಚನೀಯ ಸಂತೋಷ ಸಿಗಬಹುದೇನೋ ! ಆದರೆ ಅದೇ ಸಮಯದಲ್ಲಿ ಅದರಿಂದ ಇತರರಿಗೆ ಆಗಬಹುದಾದ ನೋವನ್ನು , ಆರ್ಥಿಕ ನಷ್ಟವನ್ನೂ ಸಹಾ ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ನಾಳೆ ಅದೇ ತರಹದ ಘಟನೆ ನಮ್ಮ ವಿಚಾರದಲ್ಲೇ ಉಲ್ಟಾ ಹೊಡೆದರೂ ಹೊಡೆಯಬಹುದು.
ಒಂದೊಮ್ಮೆ ಉದ್ದೇಶಪೂರ್ವಕದಿಂದ ಅಲ್ಲದಿದ್ದರೂ ನಮ್ಮ ಕಣ್ತಪ್ಪಿನಿಂದಾದ ಮಿಸ್ಟೇಕ್ ಅಂತ ಗೊತ್ತಾದ ನಂತರವಾದರೂ ತಪ್ಪನ್ನು ತಿದ್ದಿಕೊಳ್ಳುವುದು ವಿಹಿತ.
ನೆನಪಿಡಿ…ಯಾರಿಗೋ ನ್ಯಾಯವಾಗಿ ಸೇರಬೇಕಾದ ಹಣವನ್ನು ನಮ್ಮಲ್ಲೇ ಉಳಿಸಿಕೊಂಡರೆ , ಅದರ ಹತ್ತರಷ್ಟು ಕಕ್ಕಬೇಕಾದ ಸಂದರ್ಭ ಮುಂದೆ ನಮಗೆದುರಾದರೂ ಆಗಬಹುದು.

ಹಿರಿಯೂರು ಪ್ರಕಾಶ್.








