ಆಧುನಿಕ ಭಗವದ್ಗೀತೆ ಎಂದೇ ಖ್ಯಾತಿ ಪಡೆದಿರುವ ಮಂಕುತಿಮ್ಮನ ಕಗ್ಗದ ಡಿವಿಜಿ,ಜೀವನ ಧರ್ಮ ಯೋಗ, ಶ್ರೀ ಮದ್ಭಗವದ್ಗೀತಾ ತಾತ್ಪರ್ಗಳಂತ ಶ್ರೇಷ್ಠ ಕೊಡುಗೆಗಳನ್ನು ಕೊಡುವುದರ ಜೊತೆಗೆ ಪತ್ರಿಕಾ ರಂಗದಲ್ಲಿ ಅನನ್ಯ ಸೇವೆಯನ್ನು ಸಲ್ಲಿಸಿದ್ದಾರೆ. ಸಾಕಷ್ಟು ಪತ್ರಿಕೆಗಳಿಗೆ ಅಂಕಣ ಬರಹಗಳನ್ನು ನೀಡುವುದರೊಂದಿಗೆ ಕೆಲವು ಪತ್ರಿಕೆಗಳ ಸಂಪಾದಕತ್ವದ ಹೊಣೆಯೂ ಹೊತ್ತಿದ್ದರು. ಪತ್ರಿಕೆೋದ್ಯಮದ ಏಳು ಬೀಳುಗಳನ್ನು ಬಹಳ ಹತ್ತಿರದಿಂದ ಕಂಡಿದ್ದರು.
ಪತ್ರಕರ್ತ ಗುಂಡಪ್ಪ ಸೂರ್ಯೋದಯ ಪ್ರಕಾಶಿಕೆ ಎಂಬ ಪತ್ರಿಕೆಗೆ ಕೆಲಕಾಲ ಡಿವಿಜಿ ಅಂಕಣಗಳನ್ನು ಬರೆಯುತ್ತಿದ್ದರು. ಬೆಂಗಳೂರಿನ ಕಂಟೋನ್ಮೆಂಟ್ ನಲ್ಲಿ ಪ್ರಕಟವಾಗುತ್ತಿದ್ದ ಈವನಿಂಗ್ ಮೆಯಿಲ್ ಪತ್ರಿಕೆಗೂ ಪ್ರತೀ ವಾರ ಲೇಖನಗಳನ್ನು ಬರೆಯುತ್ತಿದ್ದರು. ಭಾರತಿ ಎಂಬ ದಿನ ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ದಿ ಮೈಸೂರ್ ಸ್ಟಾಂಡರ್ಡ್ ಎಂಬ ಇಂಗ್ಲಿಷ್ ಮತ್ತು ನಡೆಗನ್ನಡಿ ಎಂಬ ಕನ್ನಡ ಸಾಪ್ತಾಹಿಕ ಪುರವಣಿಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು.
ಡಿವಿಜಿ ಕೆಲಕಾಲ ಮದರಾಸಿನಲ್ಲಿದ್ದರು. ಈ ಸಂದರ್ಭದಲ್ಲಿ ದಿ ಹಿಂದೂ ಮತ್ತು ಇಂಡಿಯನ್ ಪೇಟ್ರಿಯೆಟ್ ಎಂಬ ಇಂಗ್ಲಿಷ್ ಪತ್ರಿಕೆಗಳಿಗೂ ಲೇಖನಗಳನ್ನು ಬರೆದರು. ಮದರಾಸಿನಿಂದ ಬೆಂಗಳೂರಿಗೆ ಹಿಂತಿರುಗಿದ ನಂತರ ಅವರು 1909ರಲ್ಲಿ ಸುಮತಿ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಇದಕ್ಕೆ ಸಾಕಷ್ಟು ಮೆಚ್ಚುಗೆಯೂ ಪ್ರೋತ್ಸಾಹವೂ ದೊರೆಯಿತು.
1910ರಲ್ಲಿ ಪ್ರಾರಂಭವಾದ ಮೈಸೂರ್ ಟೈಮ್ಸ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಕೆಲ ಕಾರಣದಿಂದಾಗಿ ಬೇಸರಗೊಂಡು ತಮ್ಮ ಸಂಪಾದಕ ವೃತ್ತಿಗೆ ರಾಜೀನಾಮೆ ನೀಡಿದರು.

ಕಿರಿಯ ಸಂಪಾದಕ
1913ರಲ್ಲಿ ದಿವಾನ್ ಸರ್ ಎಂ ವಿಶ್ವೇಶ್ವರಯ್ಯನವರ ಅನುಮತಿಯೊಂದಿಗೆ ದಿ ಕರ್ನಾಟಕ ಪತ್ರಿಕೆ ಪ್ರಾರಂಭವಾಯಿತು. ಇದಕ್ಕೆ ಡಿವಿಜಿಯವರೇ ಮಾಲೀಕರು, ಸಂಪಾದಕರು ಆಗಿದ್ದರು. ಡಿವಿಜಿಯವರು ತಮ್ಮ 26ನೇ ವಯಸ್ಸಿನಲ್ಲಿ ಒಂದು ಪತ್ರಿಕೆಯ ಮಾಲೀಕ ಮತ್ತು ಸಂಪಾದಕತ್ವದ ಹೊಣೆ ಹೊತ್ತಿದ್ದರು. ದಿ ಕರ್ನಾಟಕ ಪತ್ರಿಕೆ ಪ್ರಕಟಿಸಲು ಅನುಮತಿಗಾಗಿ ಗುಂಡಪ್ಪನವರು ಅರ್ಜಿ ಹಾಕಿದಾಗ ಆ ಕಾಲದ ಬೆಂಗಳೂರಿನ ಡೆಪ್ಯೂಟಿ ಕಮೀಷನರ್ ಆಗಿದ್ದ ಕುಮಾರಸ್ವಾಮಿಯವರು ಡಿವಿಜಿಯನ್ನು ಕಂಡು ಹೀಗೆ ಹೇಳಿದ್ದರಂತೆ ” ಈತ ಇನ್ನೂ ಹುಡುಗ, ಟೋಪಿ ಹಾಕಿಕೊಂಡಿದ್ದಾನೆ, ಪತ್ರಿಕೆ ನಡೆಸುವಂಥ ದೊಡ್ಡ ಜವಾಬ್ದಾರಿಯನ್ನು ಹೊರತಕ್ಕವನಲ್ಲ”. ಆದರೆ ಪೊಲೀಸ್ ಇಲಾಖೆಯ ಮುಖ್ಯಸ್ಥರು ಅನುಮತಿ ದೊರಕಿಸಿದ್ದರು. ದಿ ಕರ್ನಾಟಕ ಪತ್ರಿಕೆ ಎಲ್ಲಾ ರೀತಿಯಲ್ಲೂ ಮಾದರಿ ಪತ್ರಿಕೆಯಾಗಿತ್ತು. ಒಂದು ವರ್ಷದ ನಂತರ ಈ ಪತ್ರಿಕೆ ಕನ್ನಡ ಲೇಖನಗಳನ್ನು ಪ್ರಕಟಿಸಿತ್ತು. 1921ರಲ್ಲಿ ಈ ಪತ್ರಿಕೆ ನಿಂತು ಹೋಯಿತು. ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್, ವಸಂತ ಕುಸುಮಾಂಜಲಿ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. 1923ರಲ್ಲಿ ಕರ್ನಾಟಕ ಜನಜೀವನ ಅರ್ಥಸಾಧಕ ಪತ್ರಿಕೆಯ ಸಂಪಾದನಾ ಕಾರ್ಯವನ್ನೂ ನಿರ್ವಹಿಸಿದ್ದರು. 1928ರಲ್ಲಿ ಬಾಗಲಕೋಟೆಯಲ್ಲಿ ನಡೆದ ಪ್ರಥಮ ಕರ್ನಾಟಕ ಪತ್ರಕರ್ತ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
ಪತ್ರಿಕಾ ರಂಗದಲ್ಲಿ ಗುಂಡಪ್ಪನವರು ಪಡೆದ ಕೀರ್ತಿ, ಸಾರ್ವಜನಿಕ ಗೌರವ, ಸರ್ಕಾರ ಮತ್ತು ಹಿರಿಯರ ಮೆಚ್ಚುಗೆಗಳಿಂದ, ಅನುಭವಗಳಿಂದ ಮುಂದೆ ತಮ್ಮ ಸಾರ್ವಜನಿಕ ಕಾರ್ಯಗಳಿಗಲ್ಲಿ ದೊಡ್ಡ ಪ್ರಮಾಣದ ಅನುಕೂಲವಾಯಿತು.
ಗುಂಡಪ್ಪವನರು ತಮ್ಮನ್ನು ಪತ್ರಿಕೋದ್ಯೋಗಿಯಾಗಿಯೇ ಗುರುತಿಸಿಕೊಂಡಿದ್ದರು. ಅಧಿಕಾರಿಗಳು, ವಕೀಲರು, ವೇದಾಧ್ಯಯನ ಸಂಪನ್ನರು, ಪುರೋಹಿತರು, ವರ್ತಕರು, ಪೌರ ಸಮಿತಿ ಸದಸ್ಯರು ಮತ್ತು ಸಂಗೀತಗಾರರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಅವರಿಗೆ ಸ್ನೇಹ, ಸಂಪರ್ಕವಿತ್ತು. ಸಾಹಿತ್ಯ, ಸಂಗೀತ, ನಾಟ್ಯ, ಚಿತ್ರಕಲೆ ಮತ್ತು ವಾಸ್ತುಶಿಲ್ಪಗಳಲ್ಲಿ ಅವರಿಗೆ ಆಸಕ್ತಿ ಮತ್ತು ಆಳವಾದ ತಿಳಿವಳಿಕೆ ಇತ್ತು. ಅವರದು ವಾತ್ಸಲ್ಯಮಯ ವ್ಯಕ್ತಿತ್ವ.
ಪತ್ರಿಕಾ ವೃತ್ತಿ ಜನಬೋಧನೆಯ ಉದ್ದೇಶವುಳ್ಳದ್ದು, ಜನಬೋಧನೆ ಚೆನ್ನಾಗಿ ನಡೆಯಬೇಕಿದ್ದರೆ ಬೋಧಕರು ಸ್ವಲ್ಪ ಸಿದ್ಧರಾಗಬೇಕು. ಪ್ರತಿಯೊಬ್ಬ ಪತ್ರಕರ್ತನೂ ಯತ್ಕಿಂಚಿತ್ತಾದರೂ ಸಾಹಿತ್ಯ ವ್ಯಾಸಂಗ ಮಾಡಬೇಕು. ನಾವು ಎತ್ತರಕ್ಕೆ ಹೋದಷ್ಟೂ ಕೆಳಗಿನ ತಗ್ಗುದಿಣ್ಣೆಗಳು, ಏರುಪೇರುಗಳು ಕಾಣುವುದಿಲ್ಲ. ಇದಕ್ಕೆ ಹೆಚ್ಚಿನ ಅಧ್ಯಯನ ಮಾಡಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.

ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ, ಡಿವಿಜಿ ಎಂದೇ ಖ್ಯಾತಿ ಪಡೆದಿರುವ ಒಂದು ವಿಶೇಷ ಸಮಾಜಮುಖಿ ವ್ಯಕ್ತಿತ್ವ. ಜೀವನ ಚರಿತ್ರೆ, ಸಾಹಿತ್ಯದ ಸದಭಿರುಚಿ, ಪತ್ರಿಕೋದ್ಯಮ, ಸಂಶೋಧನೆ, ಕಾವ್ಯ, ಗದ್ಯ,ನಾಟಕಗಳ ರಚನೆ, ಕಾವ್ಯಮೀಮಾಂಸೆ ಮತ್ತು ವಿಮರ್ಶೆ,ಸಾರ್ವಜನಿಕ ಬದುಕು ಹೀಗೆ ನಾನಾ ಕ್ಷೇತ್ರಗಳಲ್ಲಿ ತಮ್ಮ ಕಾರ್ಯ ತತ್ಪರತೆಯಿಂದ ಸಾಹಿತ್ಯ ಲೋಕದ ಹಿರಿಯ ದಿಗ್ಗಜರಾಗಿದ್ದಾರೆ.
ವಿರಕ್ತರಾಷ್ಟ್ರಕ, ಬ್ರಹ್ಮಪುರಿಯ ಅಲೆಮಾರಿ ಎಂದೆನ್ನುವ ಗುಂಡಪ್ಪನವರ ಹುಟ್ಟಿದ ದಿನ ಇಂದು. ಇಂತಹ ಕರ್ನಾಟಕ ಕಂಡ ಬಹುದೊಡ್ಡ ವ್ಯಕ್ತಿತ್ವ ಬಡತನದಲ್ಲೇ ತಮ್ಮ ಇಡೀ ಬದುಕನ್ನು ಪೂರ್ಣಗೊಳಿಸಿದರು. ರಾಜಕೀಯ, ಸಾಹಿತ್ಯ, ಸಮಾಜಕ್ಕೆ ಅವರು ನೀಡಿರುವ ಕೊಡುಗೆಯನ್ನು ತಿಳಿಯುವುದು ಒಂದೆರೆಡು ದಿನದ ಅಧ್ಯಯನವಲ್ಲ. ಅವರ ಕುರಿತು ಓದುವುದು, ಬರೆಯುವುದು ಒಂದು ದೊಡ್ಢ ಸಂಶೋಧನೆಯೇ ಸರಿ.
ಪತ್ರಿಕಾರಂಗದ ಬಗ್ಗೆ ಡಿವಿಜಿಯವರ ಅಭಿಪ್ರಾಯ ಹೀಗಿದೆ. “ಅದು ನಾನು ಆರಿಸಿಕೊಂಡ ವೃತ್ತಿಯಲ್ಲ, ನನ್ನ ಕುಲವೃತ್ತಿಯೂ ಅಲ್ಲ, ಅದು ನನ್ನ ಒದ್ದಾಟಕ್ಕೆ ತಕ್ಕ ರಂಗಸ್ಥಳವೆಂದು ದೈವ ಏರ್ಪಡಿಸಿದಂತೆ ತೋರುತ್ತದೆ. ನಾನು ಬರೆದಿರುವ ತತ್ತ್ವಶಾಸ್ತ್ರ, ರಾಜಕೀಯ, ಸಂಗೀತ, ಸಾಹಿತ್ಯಗಳು ಮತ್ತು ಭಾಷಣಗಳು ಇದೆಲ್ಲಾ ಪತ್ರಿಕೋದ್ಯೋಗದ ಒಂದೊಂದು ಪ್ರಕಾರಗಳೇ ಹೊರತು ಬೇರೆಯಲ್ಲ.”
ಸಮಾಜಮುಖಿಯಾಗಿದ್ದ ಗುಂಡಪ್ಪನವರು ಅತೀ ಸರಳ ಜೀವನದಲ್ಲೇ ತಮ್ಮ ಬದುಕಿನ ಯಾತ್ರೆಯನ್ನು ಮುಗಿಸಿದರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು. ತಮ್ಮ ಜೀವಿತಾವಧಿಯಲ್ಲಿ ಬೆರಳೆಣಿಕೆಗೆ ಸಿಗದಷ್ಟು ಸಾಹಿತ್ಯ ಕೃಷಿ ನಡೆಸಿರುವ ಇವರು ಎಲ್ಲಾ ಕಾಲಕ್ಕೂ ಅನುಕರಣೀಯ ಶ್ರೇಷ್ಠವಾದ ಮಂಕುತಿಮ್ಮನ ಕಗ್ಗವನ್ನು ನೀಡಿದ್ದಾರೆ. ತಮ್ಮ ಜ್ಞಾಪಕಚಿತ್ರ ಶಾಲೆಯಲ್ಲಿ ಅವರ ಜೀವಿತಾವಧಿಯಲ್ಲಿದ್ದ ಎಲ್ಲಾ ವರ್ಗದ ಜನರ ಕುರಿತು ಆದರಣೀಯವಾಗಿ ದಾಖಲಿಸಿದ್ದಾರೆ.
ಕಾವೇರಿ ಭಾರದ್ವಾಜ್








