ಫೆಬ್ರುವರಿ ತಿಂಗಳು ಬಂತೆಂದರೆ ಸಾಕು ಎಲ್ಲರ ಮನೆಗಳಲ್ಲೂ ಒಂದು ರೀತಿಯ ಗಂಭೀರ ಆತಂಕದ ವಾತಾವರಣ. ಮಕ್ಕಳಿಂದ ಹಿಡಿದು ಮನೆಯ ಹಿರಿಯರವರೆಗೆ ಎಲ್ಲರಲ್ಲೂ ಒಂದು ರೀತಿಯ ಮೌನ. ಇಡೀ ಮನೆಯಲ್ಲಿ ಕರ್ಫ್ಯೂ ವಿಧಿಸಿದ ಹಾಗೆ ತೋರುವ ಭಾವ. ಮನೆಯಲ್ಲಿ ಮಕ್ಕಳು ಯಾವ ಯಾವ ಸಮಯಕ್ಕೆ ಏನೇನು ಮಾಡಬೇಕು ಎಂಬುದರ ಕುರಿತಾದ ಟೈಮ್ ಟೇಬಲ್ ಗಳು ಮಕ್ಕಳ ಕೊಠಡಿಯ ಬಾಗಿಲುಗಳ ಹಿಂದೆ ಮಾತ್ರವಲ್ಲ ಬದಲಾಗಿ ಮನೆಯ ಊಟದ ಮೇಜಿನ ಬಳಿ, ಫ್ರಿಜ್ಜಿನ ಬಾಗಿಲ ಬಳಿ ಮತ್ತು ಹಲವೆಡೆ ಅಂಟಿಸಲ್ಪಡುತ್ತದೆ. ಪದೇ ಪದೇ ಮಕ್ಕಳಿಗೆ ಬೋರ್ಡ್ ಎಕ್ಸಾಮ್ ಹತ್ತಿರ ಬರುತ್ತಿರುವ ಕುರಿತು ನೆನಪಿಸುತ್ತ ಪಾಲಕರು ಒಂದು ವಿಧವಾದ ಅಶಾಂತತೆಯನ್ನು ತಾವು ಅನುಭವಿಸುವ ಮೂಲಕ ಮಕ್ಕಳಲ್ಲೂ ಭಯವನ್ನು ಬಿತ್ತುವಂತಹ ವಾತಾವರಣ.
ಇನ್ನು ಸಂಬಂಧಿಗಳು ಯಾವುದಾದರೂ ಮದುವೆ, ಮುಂಜಿ, ಗೃಹಪ್ರವೇಶದಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ನೋಡಿದಾಗ ಅರೆ ಬೋರ್ಡ್ ಎಕ್ಸಾಮ್ ಇದೆ. ಸಮಾರಂಭಕ್ಕೆ ಕರೆದುಕೊಂಡು ಬಂದಿದ್ದೀರಲ್ಲ ಎಂದು ಪಾಲಕರ ಮೇಲೆ ಗೂಬೆ ಕೂರಿಸುವ, ಬೇಜವಾಬ್ದಾರಿ ಪಾಲಕರು ಎಂದು ಶರಾ ಬರೆಯುವ, ಸೀರಿಯಸ ನೆಸ್ ಇಲ್ಲ ಎಂದು ಮಕ್ಕಳನ್ನು ಹೀಯಾಳಿಸುವ ಮೂಲಕ ತಮ್ಮ ವಿಪರೀತ ಕಳಕಳಿಯನ್ನು ತೋರುತ್ತಾರೆ. ಅವರ ವ್ಯಂಗ್ಯದ ಮಾತುಗಳ ಮೊನಚು ಬಾಣಗಳು ತಾಕಿದ ಪಾಲಕರು ಮತ್ತು ಮಕ್ಕಳು ತಾವೇನೋ ಮಹಾಪರಾಧ ಮಾಡಿದ್ದೇವೆ ಎಂಬಂತೆ ತಲೆತಗ್ಗಿಸುತ್ತಾರೆ.
ಮತ್ತೆ ಕೆಲ ಪಾಲಕರು ತಮ್ಮ ಸಂಭಾಷಣೆಯನ್ನು ಬದಲಿಸಿ ಈ ಹಿಂದಿನ ಪರೀಕ್ಷೆಗಳಲ್ಲಿ ಎಷ್ಟು ಅಂಕಗಳನ್ನು ಗಳಿಸಿದೆ ಎಂದು ಕೇಳುವ ಬದಲಾಗಿ ಈ ಹಿಂದೆ ಮಾಡಿದ ತಪ್ಪುಗಳು ಯಾವುದು ಎಂದು ನಿನಗೆ ಗೊತ್ತಾಗಿದೆಯಷ್ಟೇ… ಮುಂದೆ ಅವುಗಳು ಪುನರಾವರ್ತನೆಯಾಗದಂತೆ ನೋಡಿಕೋ ಎಂದು ಹೇಳುತ್ತಾರೆ.
ಈಗಾಗಲೇ ಬೋರ್ಡ್ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಅಂಕಗಳನ್ನು ಗಳಿಸಿರುವ ಪಾಲಕರು ತಲೆಯ ಮೇಲೆ ಹೆಮ್ಮೆಯ ಕೋಡುಗಳನ್ನು ಹೊಂದಿದ್ದು ಅಯ್ಯೋ ನನ್ನ ಮಗನನ್ನು / ಮಗಳನ್ನು ಈ ಹಂತಕ್ಕೆ ತರಲು ನಾವು ಕಳೆದ ಮೂರು ವರ್ಷಗಳಿಂದ ನಿದ್ರೆ ಆಹಾರಗಳನ್ನು ತೊರೆದಿದ್ದೇವೆ. ಅವರ ಟೈಮ್ ಟೇಬಲ್ ನ ಪ್ರಕಾರ ಅವರನ್ನು ಎಬ್ಬಿಸಿ ಅವರ ಓದಿಗೆ ಸಹಾಯವಾಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಅನುಕೂಲಗಳನ್ನು ಮಾಡಿಕೊಡುವುದರಲ್ಲಿ ನಾವು ಗಂಟೆಗಟ್ಟಲೆ ಪರಿಶ್ರಮ ಪಟ್ಟಿದ್ದೇವೆ. ಅದರಲ್ಲೂ ನಮ್ಮ ಮನೆಯಲ್ಲಿ ಟಿವಿ ಕೂಡ ಇಲ್ಲ ಮೊಬೈಲ್ಗೆ ನೆಟ್ ಹಾಕಿಸುವುದನ್ನು ಕೂಡ ಬಿಟ್ಟಿದ್ದೇವೆ ಎಂದು ಹೇಳುವ ಪಾಲಕರು ನಮ್ಮ ಮಕ್ಕಳು ಯಾವುದೇ ರೀತಿಯ ಆಟಗಳಲ್ಲಿ ಭಾಗವಹಿಸಲ್ಲ…. ಭಾಗವಹಿಸಲು ಸಮಯವಾದರೂ ಎಲ್ಲಿದೆ ಅವರ ಎಲ್ಲಾ ಸಮಯ ಗಣಿತದ ಲೆಕ್ಕವನ್ನು ಬಿಡಿಸಲು ವಿಜ್ಞಾನದ ಹೇಳಿಕೆಗಳನ್ನು ಕಲಿಯಲು, ಇತಿಹಾಸ ಪೌರ ನೀತಿಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಪರೀಕ್ಷೆಗೆ ಬೇಕಾಗುವ ಅತ್ಯವಶ್ಯಕವಾದ ವಿಷಯಗಳನ್ನು ಅರಿತುಕೊಳ್ಳಲು ಅವರ ಎಲ್ಲ ಸಮಯ ವ್ಯಯವಾಗುತ್ತದೆ ಇನ್ನು ಹಾಡು ನೃತ್ಯ ಕುಣಿತಗಳಿಗೆ ಎಲ್ಲಿಂದ ಸಮಯವನ್ನು ಹೊಂದಿಸೋಕೆ ಆಗುತ್ತೆ….
ನಮ್ಮ ಮಗು ಎಲ್ ಕೆ ಜಿ ಇಂದ ಹಿಡಿದು ಇಲ್ಲಿಯವರೆಗೂ ಒಂದೇ ಒಂದು ತರಗತಿಯಲ್ಲಿಯೂ ತನ್ನ ಫಸ್ಟ್ ರಾಂಕ್ ಅನ್ನು ಬಿಟ್ಟು ಕೊಟ್ಟಿಲ್ಲ ಎಂದು ಹೇಳುತ್ತಾರೆ.
ಇನ್ನು ಸಭೆ ಸಮಾರಂಭಗಳಿಗಂತೂ ಅಯ್ಯೋ! ಅಮ್ಮ ಅಲ್ಲಿಗೆಲ್ಲಾ ಕರೆದು ನನ್ನ ಟೈಮ್ ವೇಸ್ಟ್ ಮಾಡಬೇಡಿ ಅಂತ ಖಂಡಿತವಾಗಿ ಹೇಳಿಬಿಡುತ್ತಾರೆ ನಿಜ ಸೋಶಲೈಸಿಂಗ್ ನಲ್ಲಿ ತುಂಬಾ ಸಮಯ ಹೋಗಿಬಿಡುತ್ತದೆ…… ಎಂದು ಅವರು ತಮ್ಮ ಹೆಗ್ಗಳಿಕೆಯನ್ನು ಹೇಳಿಕೊಳ್ಳುತ್ತಾ ಸಮಾರಂಭಗಳಿಗೆ ಮಕ್ಕಳನ್ನು ಕರೆದುಕೊಂಡು ಬಂದ ಪಾಲಕರಿಗೆ ಜವಾಬ್ದಾರಿಯ ಅರಿವನ್ನು ಮೂಡಿಸುವ ರೀತಿಯಲ್ಲಿ ಬುದ್ಧಿ ಹೇಳುತ್ತ ಅವರ ಕೀಳರಿಮೆಯನ್ನು ಹೆಚ್ಚಿಸುತ್ತಾ ಹೋಗುತ್ತಾರೆ…. ಇವರು ಹೂಗುಟ್ಟುತ್ತಾ ಹೋದಷ್ಟು ಅವರ ವ್ಯರ್ಥ ಪ್ರಲಾಪ ಮುಂದುವರೆಯುತ್ತಲೇ ಸಾಗುತ್ತದೆ…. ಹಾಗೆಂದು ಅವರು ಅತಿಯಾದ ಕಾಳಜಿ ವಹಿಸಿ ಅವರ ಮಕ್ಕಳನ್ನು ಬೆಳೆಸಿದ್ದು ತಪ್ಪು ಎಂದು ಹೇಳಲು ನಾವು ಯಾರು?
ಶಿಲಾಯುಗದಿಂದ ಇಲ್ಲಿಯವರೆಗೂ ಮನುಷ್ಯ ಬೆಳೆದು ಬಂದಿರುವ ನಾಗರಿಕ ಇತಿಹಾಸವನ್ನು ನೋಡುತ್ತಾ ಹೋದರೆ ಮನುಷ್ಯ ಸಂಘ ಜೀವಿ. ಸಾಮಾಜಿಕ ವ್ಯವಸ್ಥೆಯ ಮಧ್ಯದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಾನೆ.
ಇಂತಹ ಸಮಯದಲ್ಲಿ ಮಕ್ಕಳಿಗೆ ಬೇಕಾಗುವುದು ಪಾಲಕರ ಆಸರೆ ಹಾಗೂ ಬೆಂಬಲಗಳು. ಎಂತದ್ದೇ ಪರಿಸ್ಥಿತಿಯಲ್ಲೂ ನಾವು ನಿಮ್ಮೊಂದಿಗಿರುತ್ತೇವೆ ಹೆದರಬೇಡ ಎಂಬ ಪ್ರೀತಿಯ, ಕಳಕಳಿಯ ಮಾತುಗಳು.
ಎಷ್ಟೋ ಬಾರಿ ಮಕ್ಕಳು ತಮ್ಮ ಸುತ್ತಲಿನ ಜನರ, ಸ್ನೇಹಿತರ, ಪಾಲಕರ ಮಾತುಗಳ ಒತ್ತಡದಿಂದ ಬಳಲಿ ಬೆಂಡಾಗುತ್ತಾರೆ ತಮಗೆ ಇರುವ ಕಲಿಕೆಯ ಸಾಮರ್ಥ್ಯವನ್ನು ಕೂಡ ಕಳೆದುಕೊಳ್ಳುವಷ್ಟು ಅವರ ಮೇಲಿನ ಒತ್ತಡ ತನ್ನ ಕರಾಮತ್ತನ್ನು ತೋರಿಸುತ್ತದೆ.
ಅಂಕಗಳು ಒಳ್ಳೆಯ ಕಾಲೇಜನ್ನು, ಉತ್ತಮ ಕೋರ್ಸ್ ಗಳನ್ನು ಆಯ್ದುಕೊಳ್ಳಲು ಅವಶ್ಯಕ ನಿಜ ಆದರೆ ಅದಕ್ಕಾಗಿ ಮಗುವಿನ ಬದುಕನ್ನೇ ಎರವಾಗಿಸುವಷ್ಟು ಅತ್ಯವಶ್ಯಕ ಅಲ್ಲ ಎಂಬ ಸತ್ಯವನ್ನು ಪಾಲಕರಾದಿಯಾಗಿ ಎಲ್ಲರೂ ಅರಿತುಕೊಳ್ಳಬೇಕಾಗುತ್ತದೆ.
ಇಲ್ಲಿ ಮಕ್ಕಳು ಎಲ್ಲರಿಗಿಂತ ತಮ್ಮ ಪಾಲಕರ ಮೇಲೆ ಹೆಚ್ಚು ಅವಲಂಬಿತರಾಗುವುದರಿಂದ ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕಾದದ್ದು ಅವರ ಕರ್ತವ್ಯ.
ಪಾಲಕರು ತಮ್ಮ ಮಕ್ಕಳಿಗೆ, ಅವರು ಓದುವ ಬರೆಯುವ ಅಭ್ಯಸಿಸಲು ಹಾಕುವ ಪ್ರಯತ್ನಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕೇ ಹೊರತು ಅವರು ಗಳಿಸುವ ಅಂಕಗಳಿಗಲ್ಲ.
ಮಕ್ಕಳು ಮಾಡುವ ತಪ್ಪುಗಳನ್ನು ಹೊಸ ಕಲಿಕೆಗೆ ತೆರೆದುಕೊಳ್ಳಲು ಇರುವ ಅವಕಾಶಗಳು ಎಂದು ಭಾವಿಸಿ ಆ ನಿಟ್ಟಿನಲ್ಲಿ ಅವರನ್ನು ಹೊಸ ಕಲಿಕೆಗೆ ಪ್ರೋತ್ಸಾಹಿಸಬೇಕು.
ಮಕ್ಕಳು ಅನವಶ್ಯಕ ಒತ್ತಡಕ್ಕೆ ಒಳಗಾಗದಂತೆ ಅವರನ್ನು ಮಾತಿನ ಮೂಲಕ ಸಾಂತ್ವನ ಹೇಳಬೇಕು. ಒಂದು ಪುಟ್ಟ ಭರವಸೆಯ ಮಾತು ಹೆಗಲ ಮೇಲೆ ಕೈ ಹಾಕಿ ನೀಡುವ ಸಾಂತ್ವನ, ಮೆದುವಾಗಿ ಕೈ ಕುಲುಕಿ ಕೈಗಳಿಗೆ ಬಲವನ್ನು ತುಂಬುವ ಮೂಲಕ ಅವರ ಭವಿಷ್ಯವನ್ನು ಭದ್ರವಾಗಿಸಬೇಕು… ಆ ಮೂಲಕ ಅವರು ತಮ್ಮ ಮನದ ಭಾವನೆಗಳನ್ನು ಮುಕ್ತವಾಗಿ ಪಾಲಕರೊಂದಿಗೆ ಹಂಚಿಕೊಳ್ಳುವಂತಹ ಪರಿಸ್ಥಿತಿಯನ್ನು ನಿರ್ಮಿಸಬೇಕು.
ಮಕ್ಕಳು ತಮ್ಮ ತಂದೆ ತಾಯಿಗಳ ಬಳಿಯಲ್ಲಿ ಸುರಕ್ಷಿತತೆಯನ್ನು ಅನುಭವಿಸಬೇಕು… ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸುವ ರೀತಿಯಲ್ಲಿ ಪಾಲಕರು ವರ್ತಿಸಬೇಕು.
ಅಂಕಗಳು ಉನ್ನತ ಶಿಕ್ಷಣವನ್ನು ಪಡೆಯಲು ಅತ್ಯವಶ್ಯಕ ನಿಜ…ಆದರೆ ಅದಕ್ಕಿಂತಲೂ ಮಹತ್ತರ ವಾದದ್ದು ಮಗುವಿನ ಭಾವನಾತ್ಮಕ ಮನಸ್ಥಿತಿ. ಅತ್ಯಂತ ಒತ್ತಡದ ವಿದ್ಯಾರ್ಥಿ ಜೀವನವನ್ನು ಕಳೆಯುವ ಮಕ್ಕಳು ತಮ್ಮ ಮುಂದಿನ ಬದುಕಿನಲ್ಲಿ ಯಶಸ್ಸನ್ನು ಸಾಧಿಸಿದರೂ ಕೂಡ ಅವರು ಸಾಮಾನ್ಯವಾದ ಬದುಕನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.
ಹಿಂದಿಯ ಅತ್ಯಂತ ಪ್ರಸಿದ್ಧ ಚಲನಚಿತ್ರ 3 ಈಡಿಯಟ್ಸ್ ನಲ್ಲಿ ತನ್ನ ಇಚ್ಛೆಯ ಕೋರ್ಸ್ ಅನ್ನು ಕಲಿಯುವ ಅವಕಾಶ ಬಂದಾಗ ಸ್ನೇಹಿತನ ಒತ್ತಾಸೆಯ ಮೇರೆಗೆ ಪಾಲಕರ ಬಳಿ ತೆರಳುವ ಚಿತ್ರದ ಕಲಾವಿದ ತನ್ನ ಪಾಲಕರಿಗೆ “ನಾನು ಕಲಿಯುವ ವಿದ್ಯೆಗೆ ಅವಕಾಶಗಳು ಕಡಿಮೆಯಾಗಿ ನನ್ನ ಸಂಬಳ ಕಡಿಮೆ ಬರಬಹುದು. ಕಾರಿನಲ್ಲಿ ಓಡಾಡುವಷ್ಟು ನನಗೆ ಸಂಬಳ ಬರದೆ ಹೋಗಬಹುದು ಆದರೆ ಸ್ಕೂಟರಿನಲ್ಲಿ ಓಡಾಡಿದರೂ ನನ್ನಿಷ್ಟದ ವೃತ್ತಿಯನ್ನು ಮಾಡುವ ಮೂಲಕ ಬದುಕಿನಲ್ಲಿ ಸಂತಸವನ್ನು ಹೊಂದುತ್ತೇನೆ ಅಲ್ಲವೇ ಅಬ್ಬ” ಎಂದು ತನ್ನ ಮನದ ಇಚ್ಛೆಯನ್ನು ತೋಡಿಕೊಂಡಾಗ ಅದನ್ನು ಅರಿತ ತಂದೆ ಆತನಿಗೆ ಆತನ ಇಚ್ಛೆಯ ಫೋಟೋಗ್ರಾಫಿ ಕಲಿಯಲು ಹಸಿರು ನಿಶಾನೆ ತೋರುತ್ತಾರೆ.
ಮಕ್ಕಳನ್ನು ಅರ್ಥೈಸಿಕೊಳ್ಳುವಲ್ಲಿ ಪಾಲಕರು ಎಡವಬಹುದು.. ಎಷ್ಟೋ ಬಾರಿ ಅವರಿಗೆ ಅವರ ಪ್ರತಿಷ್ಠೆಯೇ ಮುಖ್ಯ ಎಂದು ತೋರಬಹುದು ಆದರೆ ಒಂದೊಮ್ಮೆ ಮಕ್ಕಳ ಸಂತೋಷ ಮತ್ತು ನೆಮ್ಮದಿಯ ದೃಷ್ಟಿಯಿಂದ ಯೋಚಿಸತೊಡಗಿಸಿದಾಗ ಖಂಡಿತವಾಗಿಯೂ ಅವರು ಮಕ್ಕಳ ಮಾತಿಗೆ ಒಡಂಬಡುತ್ತಾರೆ.
ಎಲ್ಲಾದರೂ ಇರಲಿ ಹೇಗಾದರೂ ಇರಲಿ ತಮ್ಮ ಮಕ್ಕಳು ನೆಮ್ಮದಿಯ ಬದುಕನ್ನು ಬಾಳಲಿ ಎಂಬುದು ಎಲ್ಲ ಪಾಲಕರ ಸದಿಚ್ಛೆಯಾಗಿರುತ್ತದೆ .
ಯಾವಾಗ ಮನೆಯು ಭಾವನಾತ್ಮಕ ಬೆಂಬಲದ ಕೇಂದ್ರವಾಗುತ್ತದೆಯೋ , ಆಗ ಪರೀಕ್ಷೆಗಳು ಮಕ್ಕಳ ಬದುಕು ಹಾಗೂ ಭವಿಷ್ಯವನ್ನು ರೂಪಿಸುವುದಿಲ್ಲ. ಮಗುವಿನ ಬೆಳವಣಿಗೆ ಅದರ ಮನೋದೈಹಿಕ ಸಾಮರ್ಥ್ಯದ ಬೆಳವಣಿಗೆಯಾಗಿ ತೋರುತ್ತದೆ….. ಹಾಗೂ ಸರ್ವಾಂಗೀಣ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಕುತೂಹಲ, ಧೈರ್ಯ, ಆತ್ಮವಿಶ್ವಾಸಗಳು ತಂತಾನೆ ಮಗುವಿನಲ್ಲಿ ಪ್ರೇರೇಪಣೆಯನ್ನು ಉಂಟುಮಾಡುತ್ತವೆ ಹಾಗೂ ಅದು ಮಗುವಿನ ಸಕಾರಾತ್ಮಕ ಕಲಿಕೆಗೆ ದಾರಿ ಮಾಡಿಕೊಡುತ್ತದೆ.
ಹೌದಲ್ಲವೇ ಪಾಲಕರೇ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್








