ಮಕ್ಕಳ ಬಾಲ್ಯ ಹೇಗಿದ್ದರೆ ಚೆನ್ನ
ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತನ್ನ ಬಾಲ್ಯದ ದಿನಗಳು ಅತಿ ಮುಖ್ಯವಾಗುತ್ತವೆ, ಅದು ಒಂದು ರೀತಿ ಒಂದು ಮನೆಗೆ ಬುನಾದಿ ಹೇಗೋ ಹಾಗೆ ಅನ್ನಬಹುದು.. ಬಾಲ್ಯ ಎಂದರೆ ಕೇವಲ ಸಿಹಿ ಅನುಭವಗಳು,ಸುಖದ ದಿನಗಳು, ಎಲ್ಲರಿಂದ ಪ್ರೀತಿ ಪಾತ್ರರಾಗುವುದು,, ಉತ್ತಮ ಓದು, ಅಂಕಗಳಿಸುವಿಕೆ,ಇಷ್ಟೇ ಅಲ್ಲ ಅದು ಸಿಹಿ ಕಹಿ ಎರಡರ ಸಮ್ಮಿಲನವಾಗಿರಬೇಕು ಏಕೆಂದರೆ ನಾವು ಚಿಕ್ಕವರಿದ್ದಾಗ ಏನು ಕಲಿಯುತ್ತೇವೆಯೋ ದೊಡ್ಡವರಾದ ಮೇಲೆ ಕೂಡ ಅದರ ಪರಿಣಾಮ ವಿರುತ್ತದೆ..
ಕೇವಲ ಸುಖವನ್ನ ಅಷ್ಟೇ ನೋಡಿಕೊಂಡು ಬೆಳೆದರೆ ಮುಂದೆ ಸಣ್ಣ ಪುಟ್ಟ ಕಷ್ಟಗಳಿಗೂ ಕೂಡ ತುಂಬಾ ದುಃಖ ಅನುಭವಿಸಬೇಕಾಗುತ್ತದೆ, ಮನೆಯಲ್ಲಿ ಕಷ್ಟ ಇದ್ದಾಗ ಅಪ್ಪ ಅಮ್ಮ ಅಥವಾ ಹಿರಿಯರು ಹೇಗೆ ಅದನ್ನು ನಿಭಾಯಿಸಿದರು ಎಂಬುದನ್ನು ನೋಡಿ ಬೆಳೆದರೆ ಮಾತ್ರ ತಾವು ಕೂಡ ಅಂತ ಸಂದರ್ಭವನ್ನು ನಿಭಾಯಿಸಬಲ್ಲರು ಮಕ್ಕಳು.
ಶಾಲೆಯಲ್ಲಿ ಕೂಡ ಮಕ್ಕಳ ಮೇಲಿನ ಓದುವ ಬಾರ ಸ್ವಲ್ಪ ಕಡಿಮೆಯಾಗಬೇಕು, ಸದಾ ಓದು ಬರಹ ಇಷ್ಟರಲ್ಲೇ ಇರದೇ ಅವರಿಗೆ ಆಸಕ್ತಿ ಇರುವ ವಿಷಯಗಳನ್ನು ತಿಳಿದು ಅದರ ಮೇಲೆ ಮುಂದೆ ಏನಾದರೂ ಮಾಡುವಂತ ದಾರಿಯನ್ನು ತೋರಿಸುವಂತಹ ಕೋರ್ಸ್ಗಳು ಬರಬೇಕು ಹಾಗೂ ಅದರ ಮಾಹಿತಿಯನ್ನು ಯಾವಾಗಲೂ ತಿಳಿಸುತ್ತಿರಬೇಕು .
ಮೊದಲಿನಂತೆ ಕೊಕ್ಕೋ, ಕಬಡ್ಡಿ, ಕ್ರಿಕೆಟ್ ಎಲ್ಲಾ ಆಟಗಳನ್ನು ಆಟದ ಮೈದಾನದಲ್ಲಿ ತುಂಬಾ ಸಮಯದವರೆಗೂ ಆಡುವಂತಹ, ಇಂಟರ್ನೆಟ್ ರಹಿತ ಪರಿಸ್ಥಿತಿ ಮರುಕಳಿಸಬೇಕು,
ಓದುವುದು ತಪ್ಪಲ್ಲ ಹಾಗಂತ ಇನ್ನುಳಿದ ಸಾಂಸ್ಕೃತಿಕ ಅಥವಾ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗದೇ ಇರುವುದು ಮಾತ್ರ ತುಂಬಾ ತಪ್ಪು, ತಾವು ಚಿಕ್ಕವರಿದ್ದಾಗ ಕಲಿತ ರಂಗೋಲಿ, ಹಾಡುಗಳು, ಅಥವಾ ಡ್ರಾಯಿಂಗ್ ಮಾಡೋ ರೀತಿಯೋ, ಆಡಿದ ಆಟಗಳು, ಅಮ್ಮನಿಗೆ ಮಾಡಿದ ಚಿಕ್ಕ ಪುಟ್ಟ ಸಹಾಯ ಅಪ್ಪನೊಂದಿಗೆ ಬ್ಯಾಂಕಿಗೆ ಹೋದ ಅನುಭವ ಇವೆಲ್ಲವೂ ಸಣ್ಣ ವಿಚಾರಗಳ ಆದರೂ ಕೂಡ ಮಧುರ ಅನುಭವಗಳು. ಹೀಗೆ ಕಲಿತ ಹಾಡುಗಳು ಮುಂದೆ ಅವರ ಕಾಲೇಜಿನ ದಿನಗಳಲ್ಲಿ ಪ್ರಾರ್ಥನೆ ಹಾಡಲು ಅಥವಾ ರಂಗೋಲಿ ಹಾಕಲು ಉಪಯೋಗವಾಗುತ್ತದೆ .
ನಾವು ಚಿಕ್ಕವರಿದ್ದಾಗ ಮಣ್ಣಿನಲ್ಲಿ ಆಟ ಆಡುವಾಗ ಅದರಿಂದ ಬರುತ್ತಿದ್ದ ಸುವಾಸನೆಯು ಈಗ ಮಳೆ ಬಂದರೆ ನಮ್ಮ ಬಾಲ್ಯವನ್ನು ನೆನಪಿಸುತ್ತದೆ, ಬಿದ್ದಾಗ ಆಗಿದ್ದ ಗಾಯಗಳು, ಒಂದು ಅಥವಾ ಎರಡು ರೂಪಾಯಿ ಕೊಟ್ಟು,ಕೊಂಡು ತಿನ್ನುತ್ತಿದ್ದ ಹಣ್ಣುಗಳು, ಚಾಕ್ಲೇಟ್ಗಳು ಹುಣಸೆಹಣ್ಣಿನ ಕುಟ್ಟುಂಡಿ, ನಿಂಬೆಹುಳಿ ಪೆಪ್ಪರ್ ಮೆಂಟ್, ದಾರಿಯಲ್ಲಿ ಬರುತ್ತಿದ್ದ ಅಜ್ಜಿ ಕೂದಲು, ಹೀಗೆ ಎಲ್ಲವೂ ಚಿಕ್ಕ ಖುಷಿಗಳೇ ಆದರೆ ದೊಡ್ಡ ನೆನಪು. ಹೀಗೆ ಬೀದಿಯಲ್ಲಿ ಬೆಳೆದು,ದಾರಿಯಲ್ಲಿ ಬರುತ್ತಿದ್ದ ದಿನಸುಗಳನ್ನು ತಿಂದರೂ ಕೂಡ ನಮ್ಮ ರೋಗ ನಿರೋಧಕ ಶಕ್ತಿ ಜಾಸ್ತಿ ಇತ್ತು, ಈ ರೀತಿಯಾಗಿ ನಮ್ಮ ಮಕ್ಕಳು ಬೆಳೆದರೆ ಎಷ್ಟು ಸಂತೋಷ ಅಲ್ಲವೇ. ಆದರೆ ಈಗ ಯಾರನ್ನು ನಂಬದಂತಹ, ಗೊತ್ತಿರುವವರ ಮನೆಗೂ ಕೂಡ ಮಕ್ಕಳನ್ನು ಕಳಿಸದಂತಹ ಸ್ಥಿತಿ ಉಂಟಾಗಿದೆ..
ಮನೆಯಲ್ಲಿ ಅಪ್ಪ ಅಮ್ಮ ಕಷ್ಟ ಪಡುವುದನ್ನು ಮಕ್ಕಳಿಗೆ ತಿಳಿಸುವುದೇ ಬೇಡ ಅಂದುಕೊಳ್ಳುವುದು ಕೂಡ ನನ್ನ ಪ್ರಕಾರ ತಪ್ಪು ಅನಿಸುತ್ತದೆ, ಕಷ್ಟದ ಅನುಭವ ತಿಳಿಯದಿದ್ದರೆ ಅವರಿಗೆ ದುಡ್ಡಿನ ಬೆಲೆ ಗೊತ್ತಾಗುವುದಿಲ್ಲ, ಬೆಲೆ ಗೊತ್ತಿದ್ದರೆ ಖರ್ಚು ಮಾಡುವಾಗ ಹಿಡಿತವಿರುತ್ತದೆ. ಅವರ ಮೇಲಿರುವ ಗೌರವೂ ಕೂಡ ದುಪ್ಪಟ್ಟಾಗುತ್ತದೆ ಅವರ ಕಷ್ಟಪಡುವುದು ನಮಗಾಗಿ ಅಲ್ಲವೇ ಎನ್ನುವ ಪ್ರೀತಿ ಹೆಚ್ಚುತ್ತೆ,ಜವಾಬ್ದಾರಿ ಕೂಡ ಇರುತ್ತದೆ.
ಜೀವನವು ಯಾಂತ್ರಿಕವಾಗದೆ ಮಕ್ಕಳು ಕೂಡ ತಮ್ಮ ಜೀವನವನ್ನು ಜೀವಿಸುವಂತೆ ಇರಲಿ, ಹಾಡು ಕುಣಿತ ಮಕ್ಕಳೊಂದಿಗೆ ಜಗಳ ಮತ್ತೆ ಒಂದಾಗುವಿಕೆ .. ಹೀಗೆ ಪ್ರತಿಯೊಂದನ್ನು ಮಕ್ಕಳು ಸಂತೋಷದಿಂದ ಅನುಭವಿಸಬೇಕು.

ನಂದಿನಿ ವಿವೇಕ್.
ಹೊಸದುರ್ಗ








