ಇಂದಿನ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸ್ಕಂದ ಶಿಲೆ ಅಥವಾ ಕಂದಗಲ್ಲು ಎಂಬ ಗ್ರಾಮದಲ್ಲಿ ಇರುವ ಶಂಕರ ಲಿಂಗ ದೇವಸ್ಥಾನದ ಬೀದಿಯಲ್ಲಿ ಇರುವ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಗೋವಿಂದ ಭಟ್ಟ ಎಂಬವರೇ ಸಾಕ್ಷಾತ್ ಶಿವನಿಂದ ಲಿಂಗ ದೀಕ್ಷೆ ಪಡೆದು ಶಂಕರ ದಾಸಿಮಯ್ಯ ಎಂಬ ಹೆಸರಿನಿಂದ ಶರಣರಲ್ಲಿ ಗುರುತಿಸಿಕೊಂಡವರು.
11 12ರ ಶತಮಾನದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಗೋವಿಂದ ಭಟ್ಟರು ಊರಿನ ಆರಾಧ್ಯ ದೈವ ಶಂಕರಲಿಂಗ ದೇವರ ಆರಾಧಕರಾಗಿದ್ದರು. ಇದರ ಜೊತೆಗೆ ನವಿಲೆಯ ಜಡೆ ಶಂಕರ ದೇವರನ್ನು ಆರಾಧಿಸುತ್ತಿದ್ದರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಅಳವಡಿಸಿಕೊಂಡಿದ್ದವರು.
ಇವರ ಹಣೆಯ ಮೇಲೆ ಕಣ್ಣಿನಂತಹ ಹುಬ್ಬು ಗಂಟು ಇದ್ದ ಕಾರಣ ಇವರನ್ನು ತ್ರಿನೇತ್ರನೆಂದು, ಮುಕ್ಕಣ್ಣನೆಂದು ಕರೆಯುತ್ತಿದ್ದರು. ಇದರ ಜೊತೆಗೆ ಇವರು ಬಸವಣ್ಣನ ಕಟ್ಟಿಗೆಯಿಂದ ತಯಾರಿಸಿದ ಮೊಗವನ್ನು ಧರಿಸಿ ಜಾತ್ರೆ, ಉತ್ಸವಗಳ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಾರಣ ಇವರನ್ನು ಮೊಗವಾಡದಯ್ಯ ಎಂದು ಕೂಡ ಕರೆಯುತ್ತಿದ್ದರು ಎಂದು ಹೇಳಲಾಗುತ್ತದೆ. ಇವರ ಕುರಿತು ತೆಲುಗು ಹಾಗೂ ಕನ್ನಡದಲ್ಲಿ ರಚಿಸಿದ ಬಸವ ಪುರಾಣ ಶಂಕರ ದಾಸಿಮಯ್ಯನ ರಗಳೆ, ದಾಸಿಮಯ್ಯ ನಾ ಪುರಾಣ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಎಂಬ ಗ್ರಂಥಗಳಲ್ಲಿ ನಮಗೆ ಉಲ್ಲೇಖಗಳು ದೊರೆಯುತ್ತವೆ.
ಮುಂದೆ ಶಿವದಾಸಿಮಯ್ಯ ಎಂಬ ಹೆಸರಿನಿಂದ ಜಗತ್ತಿಗೆ ಪರಿಚಯವಾದ ತಮ್ಮ ಸಹೋದರನೊಂದಿಗೆ ಬಟ್ಟೆಗಳಿಗೆ ಹೊಲಿಗೆ ಹಾಕುವ ಹಾಗೂ ಬಣ್ಣ ಹಾಕುವ ವೃತ್ತಿಯಲ್ಲಿ ಅವರು ತೊಡಗಿಕೊಂಡಿದ್ದರು. ಅವರು ಊರಿನ ಜನರಿಗೆ ಸದ್ಭಕ್ತಿಯ ಮಾರ್ಗದಲ್ಲಿ ಸಾಗಲು ಬೇಕಾದ ಎಲ್ಲ ವಿಷಯಗಳನ್ನು ತಿಳಿಹೇಳುತ್ತಿದ್ದರು.
ಅದೊಂದು ದಿನ ರಾತ್ರಿ ಮಲಗಿಕೊಳ್ಳುವ ಮುನ್ನ ಪತ್ನಿ ಕಾಶಿಗೆ ಒಮ್ಮೆ ಹೋಗಿ ಬರಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.ಇದಕ್ಕೆ ಪತ್ನಿಯು ತನ್ನ ಸಹಮತವನ್ನು ನೀಡಿದಳು. ಅಂದಿನ ದುರ್ಗಮ ಕಾಲಘಟ್ಟದಲ್ಲಿ ಕಾಶಿಯಾತ್ರೆಗೆ ಹೋದರೆ ಮರಳಿ ಬರಲು ಸಾಧ್ಯವಾಗುವುದಿಲ್ಲ ಎಂಬ ಭಾವವಿದ್ದ ಕಾರಣ ಕಾಶಿಗೆ ಹೋಗುವ ಮುನ್ನ ತಮ್ಮ ಮನೆಯ ಸಮಸ್ತ ಸ್ಥಿರ ಮತ್ತು ಚರ ಆಸ್ತಿಗಳನ್ನು ಸತ್ಪಾತ್ರರಿಗೆ ದಾನ ಮಾಡಿದರು.ನಂತರ ಮುಕ್ತವಾದ ಮನಸ್ಥಿತಿಯನ್ನು ಹೊಂದಿ ಭಕ್ತಿ ಭಾವವನ್ನು ಹೊತ್ತು ಕಾಶಿಯತ್ತ ಮುಖ ಮಾಡಿದರು.
ಮಾರ್ಗ ಮಧ್ಯದಲ್ಲಿ ಜಂಗಮ ಸ್ವರೂಪಿಯಾಗಿ ಶಿವನು ಬಂದು ಇವರನ್ನು ಭೇಟಿಯಾದನು, ನಾನಾ ವಿಧದಲ್ಲಿ ಇವರನ್ನು ಪರೀಕ್ಷಿಸಿದ ಶಿವನು ಅಂತಿಮವಾಗಿ ಸಂಪ್ರೀತನಾಗಿ ಇವರಿಗೆ ಶಿವ ದೀಕ್ಷೆಯನ್ನು ನೀಡಿದನು. ಆಗ ಬ್ರಾಹ್ಮಣನಾದ ಗೋವಿಂದ ಭಟ್ಟರು ಶಂಕರ ದಾಸಿಮಯ್ಯ ಎಂಬ ಹೆಸರಿನಿಂದ ಕರೆಯಲ್ಪಟ್ಟರು.
ಇವರು ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಮುಂತಾದ ಶರಣರ ಕಾಲದವರಾಗಿದ್ದು ಆ ಸಮಯದಲ್ಲಿ ಸಾಕಷ್ಟು ಜನ ಇದ್ದ ಕಾರಣ ಇವರನ್ನು ಶಂಕರ ದಾಸಿಮಯ್ಯ ಎಂದು ಕರೆದರು.
ಅಂತರಂಗದ ಶುದ್ಧತೆ ಮತ್ತು ಶಿವನಿಗೆ ನಿಷ್ಠೆಯ ನಿಷ್ಠೆಯುಳ್ಳ ಭಕ್ತಿಯನ್ನು ಅರ್ಪಿಸುವುದರ ಕುರಿತು ಹೆಚ್ಚು ನೀಡುತ್ತಿದ್ದ ಅವರು ತಮ್ಮ ವಚನ ಮತ್ತು ಮಾತಿನ ಮೂಲಕ ಸಮಾಜದಲ್ಲಿ ತಪ್ಪು ದಾರಿ ತುಳಿಯುವವರನ್ನು ಸರಿಯಾದ ಹಾದಿಯನ್ನು ತೋರುತ್ತಿದ್ದರು. ಸಾಮಾಜಿಕ ಏಕತೆ ಮತ್ತು ಭಾವೈಕ್ಯತೆ ಅವರ ವಚನಗಳ ಸ್ಪಷ್ಟ ಸಂದೇಶವಾಗಿತ್ತು.
ಬಹುಶಹ ತಮಗಿಂತ ತಾವು ಬಯಸುವ ವ್ಯಕ್ತಿ ಹೆಚ್ಚಿನದನ್ನು ಸಾಧಿಸಿದ್ದಾನೆ ಎಂಬ ಭಾವವು ಜನರಲ್ಲಿ ಸ್ಫುರಿಸುವ ಕಾರಣದಿಂದಾಗಿ ಪವಾಡಗಳನ್ನು ನಂಬುತ್ತಿದ್ದ ಅಂದಿನ ಜನರು ಶಂಕರ ದಾಸಿಮಯ್ಯನವರು ಜೇಡರ ದಾಸಿಮಯ್ಯನವರ ಅಹಂಕಾರವನ್ನು ಮುರಿದ ಕಥೆಯನ್ನು ಕೂಡ ಪವಾಡವನ್ನಾಗಿಸಿದರು. ಸತತವಾಗಿ ಅನ್ನ ಮತ್ತು ವಸ್ತ್ರದಾನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಜೇಡರ ದಾಸಿಮಯ್ಯನವರಿಗೆ ಒಂದು ಹಂತದಲ್ಲಿ ತಾನು ಸಾಕಷ್ಟು ಜನರಿಗೆ ಅನ್ನದಾಸೋಹ ಹಾಗೂ ವಸ್ತ್ರದಾಸೋಹವನ್ನು ನಡೆಸುತ್ತಿರುವೆ ಎಂಬ ಅಹಂಭಾವ ತೋರಿತು. ಹರ ಕೊಟ್ಟುದ್ದನ್ನು ನರನಿಗೆ ನೀಡುವುದರಲ್ಲಿ ಅಹಂಭಾವ ಸಲ್ಲದು ಎಂಬ ಭಾವದಿಂದ ಜೇಡರ ದಾಸಿಮಯ್ಯನವರು ವಾಸವಾಗಿದ್ದ ಮುದೇನೂರು ಗ್ರಾಮಕ್ಕೆ ಹೋದ ಶಂಕರ ದಾಸಿಮಯ್ಯನವರು ಅವರ ಅಹಂಭಾವವನ್ನು ಅಳಿಸಿ ಹಾಕಿದ ಘಟನೆಯನ್ನು ಕೂಡ ನಾವು ಶರಣರ ಚರಿತ್ರೆಯಲ್ಲಿ ಕಾಣಬಹುದು. ನಿಜಗುಣ ಶಂಕರ ದೇವ ಎಂಬ ಅಂಕಿತ ನಾಮದಲ್ಲಿ ಅವರು 5 ವಚನಗಳನ್ನು ರಚಿಸಿದ್ದಾರೆ.
ಎನ್ನ ಕಾಯಕ್ಕೆ ಗುರುವಾದನಯ್ಯ ಬಸವಣ್ಣನು
ಎನ್ನ ಜೀವಕ್ಕೆ ಗುರುವಾದನಯ್ಯ ಚನ್ನಬಸವಣ್ಣನು
ಎನ್ನ ಪ್ರಾಣಕ್ಕೆ ಪ್ರಸಾದವಾದನಯ್ಯ ಮರುಳ ಶಂಕರ ದೇವರು
ಎನ್ನ ಜ್ಞಾನಕ್ಕೆ ಜಂಗಮವಾದರಯ್ಯಾ ಪ್ರಭುದೇವರು
ಇಂತಿವರ ಕರುಣದಿಂದಲಾನು ಬದುಕಿದೆನಯ್ಯ
ನಿಜ ಗುರು ಶಂಕರದೇವ
ಎಂದು ತಮ್ಮ ವಚನದಲ್ಲಿ ಬಸವಣ್ಣ ಚನ್ನಬಸವಣ್ಣ ಮರುಳ ಶಂಕರ ದೇವರು ಪ್ರಭುದೇವರನ್ನು ನೆನೆದಿದ್ದಾರೆ.
ಹರನ ನಿರೂಪದಿಂದ ಧರೆಗೆ ಬಸವಣ್ಣನವತರಿಸಿದ ಕಾರಣ,
ಶಿವಾಚಾರ ಸದಾಚಾರವೆಂಬುದು ಧರೆಗೆ ವಿಖ್ಯಾತವಾಯಿತ್ತು.
ಶಿವಗಣ ಪ್ರಮಥಗಣಂಗಳೆಂಬ ಮಹಾಮಹಿಮರ ಸುಳುಹು,
ಧರೆಯ ಮೇಲೆ ಕಾಣಬಂದಿತ್ತು ನೋಡಯ್ಯಾ.
ಪರುಷವ ಸಾಧಿಸಿದಂತಾಯಿತ್ತು, ನಿಮ್ಮ ಶರ ಸಂಗದಿಂದ.
ಎನ್ನ ನಂದಿಯ ಮೊಗವಾಡ, ನೊಸಲಕಣ್ಣುಂಟೆಂಬ
ಅಹಂಕಾರವ ಮುಂದುಗೊಂಡಿದ್ದೆನಯ್ಯಾ.
ಎನ್ನ ಮದ ಉಡುಗಿ, ಸಂಗನಬಸವಣ್ಣನ ಕರುಣದಿಂದ
ಪ್ರಭುದೇವರೆಂಬ ನಿರಾಳವ ಕಂಡು ಬದುಕಿದೆನು ಕಾಣಾ,
ನಿಜಗುರು ಶಂಕರದೇವಾ.
ಎರಳೆ ಯತಿಯಂತೆ, ಕಾಕ ಪಿಕದಂತಿರಬೇಡವೆ ?
ತಿಟ್ಟನೆ ತಿರುಗಿ, ತೊಟ್ಟನೆ ತೊಳಲಿ ಬಳಲುವರ ಕಳ ಹೇಸಿಕೆಯ ನೋಡಾ!
ಇರುಳು ಹಗಲೆನ್ನದೆ ತಿರುಗುವವರ ಕಂಡು ಹೇಸಿದೆ.
ಅರಿದಡೆ ಶರಣ, ಮರೆದಡೆ ಮಾನವ.
ಸತ್ತ ಕಸನ ಹೊತ್ತುಕೊಂಡು ಊರೂರಿಗೆ ಮಾರುವ
ಕಾಶಾಂಬರಧಾರಿಗಳನೊಲ್ಲ, ನಿಜಗುರು ಶಂಕರದೇವ..
ಇಂತಹ ನಿಜ ಮಹಿಮ ಘನ ಶರಣ ಶಂಕರ ದಾಸಿಮಯ್ಯನವರಿಗೆ ನಮೋ ನಮ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್








