ಬೆಂಗಳೂರು, ಜೂನ್ 4: ಮುಂಗಾರು ಮಳೆ ಮತ್ತೆ ಚುರುಕಾಗುವ ಸೂಚನೆ ನೀಡಿದ್ದು, ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ವರದಿ ಮಾಡಿದೆ.
ಇತ್ತೀಚೆಗೆ ರಾಜ್ಯದ ಹಲವೆಡೆ ಸಾಧಾರಣದಿಂದ ಭಾರೀ ಮಳೆ ಆಗಿದ್ದರೂ, ಕೆಲವು ದಿನಗಳಿಂದ ಮಳೆ ತಗ್ಗಿದ್ದು, ಇದೀಗ ಜೂನ್ 5ರಿಂದ 9ರವರೆಗೆ ಮಳೆ ಹಂತ ಹಂತವಾಗಿ ಹೆಚ್ಚಾಗಲಿದೆ. ನಾಳೆ ಗುರುವಾರ ಮತ್ತು ನಾಡಿದ್ದು ಶುಕ್ರವಾರದಂದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಗಂಟೆಗೆ 40–50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆಯೂ ಇದೆ.
ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಎಚ್ಚರಿಕೆ:
ಜೂನ್ 7 ಮತ್ತು 8ರಂದು ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದ ಕರಾವಳಿ ಭಾಗವನ್ನೊಳಗೊಂಡು 28 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾಧಾರಣದಿಂದ ಹಗುರ ಮಳೆ ಆಗಲಿದ್ದು, ಕರಾವಳಿಯಲ್ಲಿ ಜೋರು ಗಾಳಿಯೊಂದಿಗೆ ತಂತುರು ಮಳೆಯ ಸಾಧ್ಯತೆ ಇದೆ. ಆದರೆ ಭಾರೀ ಮಳೆ ಸುರಿಯುವ ಲಕ್ಷಣಗಳು ಇಲ್ಲವೆಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಜೂನ್ 9ರಂದು ಮಳೆಯಾಗುವ ಜಿಲ್ಲೆಗಳ ವಿವರ:
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ತುಮಕೂರು, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಜೋರು ಮಳೆ ಹಾಗೂ ಕೆಲವೆಡೆ ಸಾಧಾರಣ ಮಳೆ ಬರಲಿದೆ.ಇದನ್ನು ಓದಿ –ತೆರೆದ ವಾಹನ ಮೆರವಣಿಗೆ ಇರಲ್ಲ:ಆರ್ಸಿಬಿ ವಿಜೇತರಿಗೆ ವಿಧಾನಸೌಧದಲ್ಲಿ ಮಾತ್ರ ಅಭಿನಂದನೆ
ಬೆಂಗಳೂರು ನಗರದ ಹವಾಮಾನ ಮುನ್ಸೂಚನೆ:
ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಬಿಸಿಲು ಮತ್ತು ಮಬ್ಬು ವಾತಾವರಣ ಕಂಡುಬರುವ ಸಾಧ್ಯತೆ ಇದೆ. ತಂಪು ಗಾಳಿಯ ಜೊತೆಗೆ ಕೆಲವು ಕಡೆ ಲಘು ಮಳೆಯಾಗಬಹುದು. ಗರಿಷ್ಠ ತಾಪಮಾನ 30° ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20° ಸೆಲ್ಸಿಯಸ್ ಆಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚಿಸಿದೆ.