ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ದುರಂತ ಕಾಲ್ತುಳಿತದಲ್ಲಿ ಜೀವಿಸಿದ 11 ಅಭಿಮಾನಿಗಳ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ನಿರ್ಧಾರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಆಡಳಿತ ಮಂಡಳಿ ಘೋಷಿಸಿದೆ. ಪ್ರತಿಯೊಬ್ಬ ಕುಟುಂಬಕ್ಕೂ RCB ₹10 ಲಕ್ಷ ಪರಿಹಾರ ಘೋಷಿಸಿದ್ದು, ಇದಕ್ಕೂ ಮೊದಲು ಕರ್ನಾಟಕ ಸರ್ಕಾರವು ಕೂಡ ₹10 ಲಕ್ಷ ಘೋಷಿಸಿತ್ತು. ಜೊತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ₹5 ಲಕ್ಷ ಪರಿಹಾರ ಘೋಷಿಸಿದ್ದು, ಒಟ್ಟು ₹25 ಲಕ್ಷ ಪರಿಹಾರ ಒದಗಿಸಲಾಗುತ್ತಿದೆ.
ಇದೇ ಜೊತೆಗೆ, ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಗಳಿಗೆ ಚಿಕಿತ್ಸಾ ವೆಚ್ಚವನ್ನು ಭರಿಸುವ ಭರವಸೆಯನ್ನು RCB ನೀಡಿದ್ದು, “RCB Cares” ಎಂಬ ವಿಶೇಷ ನಿಧಿಯನ್ನು ರಚಿಸುವ ಯೋಜನೆ ಕೂಡಾ ಆರಂಭಿಸಲಾಗಿದೆ. ಈ ಬಗ್ಗೆ RCB ತನ್ನ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಭಾವುಕ ಹೇಳಿಕೆಯನ್ನು ಹಂಚಿಕೊಂಡಿದ್ದು, “ಈ ದುಃಖದ ಕ್ಷಣದಲ್ಲಿ ನಾವು ಅಭಿಮಾನಿಗಳ ಜೊತೆ ಇದ್ದೇವೆ. ಅವರ ನಂಬಿಕೆ ಹಾಗೂ ಪ್ರೀತಿ ನಮ್ಮನ್ನು ಮುಂದೆ ಕರೆದೊಯ್ಯುತ್ತದೆ” ಎಂದು ಹೇಳಿದೆ.
ದುರಂತದ ಹಿನ್ನೆಲೆ ಏನು?
RCB ತಂಡವು 18 ವರ್ಷಗಳ ಬಳಿಕ ಐಪಿಎಲ್ ಫೈನಲ್ ತಲುಪಿ ಗೆದ್ದ ಹಿನ್ನೆಲೆಯಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಬೆಂಗಳೂರು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಉಚಿತ ಪ್ರವೇಶದ ಮಾಹಿತಿ ನೀಡಲಾಗಿದ್ದು, ಸಾವಿರಾರು ಅಭಿಮಾನಿಗಳು ಸ್ಥಳಕ್ಕೆ ಧಾವಿಸಿದರು. ಗೇಟ್ ನಂ. 12, 18, 19 ಮತ್ತು 20 ಬಳಿ ಅಪಾರ ಜನಸಂದಣಿ ಉಂಟಾಗಿ ನೂಕುನುಗ್ಗಲು ಸ್ಥಿತಿ ಉಂಟಾಯಿತು.ಇದನ್ನು ಓದಿ –ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ
ಪೊಲೀಸರು ಮತ್ತು ವ್ಯವಸ್ಥಾಪಕರ ನಿಯಂತ್ರಣಕ್ಕೆ ಮೀರಿ ಜನರು ಪ್ರವೇಶಿಸಲು ಯತ್ನಿಸಿದ ವೇಳೆ ಗೇಟ್ ತೆರೆಯುತ್ತಿದ್ದಂತೆಯೇ ಕಾಲ್ತುಳಿತ ಉಂಟಾಗಿ ಜನರು ಒಬ್ಬರ ಮೇಲೊಬ್ಬರು ಬಿದ್ದು ಉಸಿರಾಟಕ್ಕೆ ತೊಂದರೆಯಾದ ದೃಶ್ಯಗಳು ಕಂಡುಬಂದವು. ತಕ್ಷಣವೇ ಗಾಯಾಳುಗಳನ್ನು ಬೌರಿಂಗ್, ವೈದೇಹಿ ಮತ್ತು ಮಣಿಪಾಲ್ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೌರಿಂಗ್ನಲ್ಲಿ 6, ವೈದೇಹಿಯಲ್ಲಿ 4 ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.