ಬೆಂಗಳೂರು, ಜೂನ್ 16 – ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ, ತನ್ನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ರಾಪಿಡೋ (Rapido) ಪ್ರಕಟಿಸಿದೆ. “ಇಂದಿನಿಂದ ಜಾರಿಗೆ ಬರುವ ನ್ಯಾಯಾಲಯದ ಆದೇಶವನ್ನು ನಾವು ಗೌರವಿಸುತ್ತೇವೆ,” ಎಂದು ಕಂಪನಿಯವರು ಸ್ಪಷ್ಟಪಡಿಸಿದ್ದಾರೆ.
ರಾಪಿಡೋ, ಈ ಪ್ರಕರಣದಲ್ಲಿ ನೇರವಾಗಿ ಪಕ್ಷಗಾರರಲ್ಲದಿದ್ದರೂ, ಕರ್ನಾಟಕದ ಸಾರಿಗೆ ವ್ಯವಸ್ಥೆಯ ಜವಾಬ್ದಾರಿಯುತ ಪಾಲುದಾರರಾಗಿ ಈ ಬೆಳವಣಿಗೆಯನ್ನು ಗಮನಿಸುತ್ತಿದ್ದು, ಅನುಸರಿಸಲು ತಯಾರಾಗಿರುವುದಾಗಿ ಹೇಳಿದೆ.
“ಇದು ನಮ್ಮ ಕ್ಯಾಪ್ಟನ್ಗಳಿಗೆ (ಬೈಕ್ ಚಾಲಕರು) ಸವಾಲಿನ ಸಮಯವಾಗಿದೆ. ಅನೇಕರು ಈ ಸೇವೆಯನ್ನೇ ತಮ್ಮ ಆದಾಯದ ಪ್ರಮುಖ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ರಾಜ್ಯದಾದ್ಯಂತ ಲಕ್ಷಾಂತರ ಪ್ರಯಾಣಿಕರಿಗೆ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುವ ಮಹತ್ವದ ಕೆಲಸವನ್ನು ಅವರು ನಿರ್ವಹಿಸುತ್ತಿದ್ದಾರೆ,” ಎಂದು ಕಂಪನಿ ತಿಳಿಸಿದೆ.
ರಾಪಿಡೋ, ರಾಜ್ಯ ಸಾರಿಗೆ ಇಲಾಖೆ ಮತ್ತು ಸರ್ಕಾರದೊಂದಿಗೆ ಸಹಕರಿಸಿ, ನಿಯಮಬದ್ಧ, ಸುಸ್ಥಿರ ಮತ್ತು ಭವಿಷ್ಯಮುಖಿ ನಿಯಂತ್ರಣ ಚೌಕಟ್ಟನ್ನು ರೂಪಿಸಲು ಬದ್ಧವಾಗಿದೆ. “ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಗಿಗ್ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ಪ್ರಾಥಮಿಕ ಗುರಿಯಾಗಿದೆ,” ಎಂದು ಕಂಪನಿ ಸ್ಪಷ್ಟಪಡಿಸಿದೆ.ಇದನ್ನು ಓದಿ –ಜಾತಿಗಣತಿ ವಿಚಾರದಲ್ಲಿ ಪ್ರತಾಪ್ ಸಿಂಹ ವಾಗ್ದಾಳಿ
“ಇದೇ ರೀತಿಯ ಸೇವೆಗಳು ಈಗಾಗಲೇ ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ ಸಹ ಸರ್ಕಾರದೊಂದಿಗೆ ರಚನಾತ್ಮಕ ಸಂವಾದದ ಮೂಲಕ ಸಮರ್ಪಕ ಪರಿಹಾರವನ್ನು ಹುಡುಕುತ್ತಿರುವೆವು. ನಮ್ಮ ಕ್ಯಾಪ್ಟನ್ಗಳು ಹಾಗೂ ಬಳಕೆದಾರರಿಂದ ಸಹಕಾರ ನಿರೀಕ್ಷಿಸುತ್ತೇವೆ,” ಎಂದು ರಾಪಿಡೋ ತಿಳಿಸಿದೆ.