ಮೈಸೂರು: ಈ ಆಷಾಢ ಮಾಸದ ಶುಕ್ರವಾರಗಳಲ್ಲಿ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ವಿಶೇಷ ಸೌಕರ್ಯ ಕಲ್ಪಿಸಲು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಈ ಬಾರಿ ಭಕ್ತರಿಗೆ ಡ್ರೈಫ್ರೂಟ್ಸ್ ಪೊಟ್ಟಣ ಮತ್ತು ಬಾದಾಮಿ ಹಾಲು ವಿತರಿಸಲು ನಿರ್ಧಾರ ಮಾಡಿದೆ. ಇದೇ ಮೊದಲ ಬಾರಿಗೆ ಈ ರೀತಿಯ ವಿಶೇಷ ಸೇವೆ ಒದಗಿಸಲಾಗುತ್ತಿದೆ.
ಈ ಸೌಲಭ್ಯ ಧರ್ಮದರ್ಶನದ ಸರದಿ ಸಾಲಿನಲ್ಲಿ ನಿಂತು, ಕಷ್ಟಪಟ್ಟು ಪಾದದಿಂದ ಬೆಟ್ಟ ಏರಿ ಬರುವ ಭಕ್ತರಿಗೆ ಮಾತ್ರ ಲಭಿಸಲಿದೆ. ಪ್ರತಿ ಶುಕ್ರವಾರ ಸುಮಾರು ಒಂದು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಬ್ಯಾರಿಕೇಡ್, ಶುದ್ಧ ಕುಡಿಯುವ ನೀರು, ಶೌಚಾಲಯ, ನಂದಿನಿ ಹಾಲು ಬೂತ್ಗಳು ಮುಂತಾದ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಭಕ್ತರಿಗೆ ನೀಡಲಿರುವ ಸೇವೆಗಳು:
- 30-40 ಗ್ರಾಂ ತೂಕದ ಡ್ರೈಫ್ರೂಟ್ಸ್ ಪಾಕೆಟ್ (ಗೋಡಂಬಿ, ಖರ್ಜೂರ, ಬಾದಾಮಿ, ಒಣದ್ರಾಕ್ಷಿ)
- ಬಾದಾಮಿ ಹಾಲು
- ನಿರ್ಗಮನದ್ವಾರದಲ್ಲಿ ಕುಂಕುಮ ಪಾಕೆಟ್
- 18 ವರ್ಷ ಮೇಲ್ಪಟ್ಟ ಮಹಿಳಾ ಭಕ್ತರಿಗೆ ಬಾಗಿನ ಪಾಕೆಟ್ (ಬೌಸ್ ಪೀಸ್, ಅಕ್ಕಿ, ಬಳೆ ಮೊದಲಾದವು)
ಆಷಾಢ ಮಾಸದ ವಿಶೇಷ ದಿನಗಳು:
- ಜೂನ್ 27
- ಜುಲೈ 4
- ಜುಲೈ 11
- ಜುಲೈ 18
ವರ್ಧಂತ್ಯುತ್ಸವದ ವಿಶೇಷತೆ (ಜುಲೈ 17):
- ಎಲ್ಲ ಭಕ್ತರಿಗೆ ನಂದಿನಿ ಗೋಧಿ ಲಡ್ಡು ಪ್ರಸಾದ ವಿತರಣೆ
ಹೆಚ್ಚುವರಿ ವ್ಯವಸ್ಥೆಗಳು:
- ಎಲ್ಲೆಡೆ ‘ನಂದಿನಿ’ ಹಾಲು ಮತ್ತು ಉತ್ಪನ್ನಗಳ ಬೂತ್
- ಕುಡಿಯುವ ನೀರಿಗಾಗಿ ಸಿಬ್ಬಂದಿ ನಿಯೋಜನೆ
- ಡಿಜಿಟಲ್ ಬೋರ್ಡ್ನಲ್ಲಿ ದೇವಿಯ ನೇರಪ್ರಸಾರ
- ಸಿಸಿಟಿವಿ ಮತ್ತು AI ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ
- ವೀಲ್ಚೇರ್ ಹಾಗೂ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ
ಇದನ್ನು ಓದಿ –ರಾಜ್ಯದಲ್ಲಿ ಮುಂದಿನ 6 ದಿನ ಭಾರೀ ಮಳೆ ನಿರೀಕ್ಷೆ
ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯದರ್ಶಿ ಎಂ.ಜೆ. ರೂಪಾ ಅವರು, “ಭಕ್ತರಿಗೆ ಅನುಕೂಲವಾಗುವಂತೆ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ಧರ್ಮದರ್ಶನಕ್ಕೆ ಬರುವವರಿಗೇ ಈ ಸೇವೆಗಳು ಸಿಗಲಿದ್ದು, ಶಿಸ್ತುಪೂರ್ವಕವಾಗಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ,” ಎಂದು ತಿಳಿಸಿದ್ದಾರೆ.