ಮೈಸೂರು: ಕೇಂದ್ರ ಸಂವಹನ ಇಲಾಖೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮೈಸೂರು ವತಿಯಿಂದ ಶಕ್ತಿನಗರದ ಅಧ್ಯಯನ ಶಾಲೆ ಮತ್ತು ಕಾಲೇಜಿನಲ್ಲಿ 11 ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಬಾರಿಯ ಧ್ಯೇಯವಾಕ್ಯ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಪರಿಕಲ್ಪನೆಯಲ್ಲಿ ಯೋಗ ಕಾರ್ಯಕ್ರಮ ನಡೆಸಿ ಹಲವು ಚಟುವಟಿಕೆಗಳನ್ನು ನಡೆಸಲಾಯಿತು. ಶಾಲಾ ಅಧ್ಯಕ್ಷ ಎ.ಜವರಪ್ಪ ಸದೃಢ ಸ್ವಾಸ್ತ್ಯ ಹಾಗೂ ಶಿಸ್ತುಬದ್ಧ ಜೀವನಕ್ಕಾಗಿ ಯೋಗ ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಬೇಕೆಂದು ಹೇಳಿದರು.
ಯೋಗ ದಿನಾಚರಣೆ ಉದ್ಘಾಟನೆ ಬಳಿಕ ಒಂದು ತಾಸು ಸಾಮಾನ್ಯ ಯೋಗಾಸನಾ ಹಾಗೂ ಪ್ರಾಣಾಯಾಮವನ್ನು ನುರಿತ ಯೋಗತಜ್ಞರ ಮಾರ್ಗದರ್ಶನದೊಂದಿಗೆ ನಡೆಸಲಾಯಿತು. ಶಾಲಾ ಕಾರ್ಯದರ್ಶಿ ಹಾಗೂ ಯೋಗ ಮಾರ್ಗದರ್ಶಕಿ ಎಂ.ಪಾರ್ವತಿದೇವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಯೋಗದ ವಿವಿಧ ಆಸನಗಳ ಉಪಯುಕ್ತತೆ ಕುರಿತು ಮಾಹಿತಿ ನೀಡಿ ಯೋಗಾಭ್ಯಾಸ ಮಾಡಿಸಿದರು.ಇದನ್ನು ಓದಿ –ಬೈಕ್ ಟ್ಯಾಕ್ಸಿ ಚಾಲಕರಿಗೆ ಬೆಂಗಳೂರಿಗೆ ಬೃಹತ್ ರ್ಯಾಲಿ
ಯೋಗ ದಿನದ ಅಂಗವಾಗಿ ಯೋಗ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು. ಮಕ್ಕಳು ಯೋಗದ ಮಹತ್ವ ಕುರಿತು ಭಾಷಣ ಮಾಡಿದರು. ವಿವಿಧ ಆಸನಗಳ ಮಾಹಿತಿ ಕುರಿತು ಶಾಲಾ ಆವರಣದಲ್ಲಿ ಭಿತ್ತಿ ಪತ್ರ ಪ್ರದರ್ಶನ ಮೂಲಕ ವಿವಿಧ ಯೋಗಾಸನಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕೇಂದ್ರ ಸಂವಹನ ಇಲಾಖೆ ಕ್ಷೇತ್ರ ಪ್ರಚಾರ ಅಧಿಕಾರಿ ಎಸ್.ಟಿ.ಶ್ರುತಿ, ಕ್ಷೇತ್ರ ಪ್ರಚಾರ ಸಹಾಯಕ ದರ್ಶನ್, ಶಿಕ್ಷಕ ದೀಪ್ತಿ, ಕವಿತಾ, ಶಾಲೆಯ ಮುಖ್ಯಪಾಧ್ಯಾಯ ಪುಟ್ಟಸ್ವಾಮಿಗೌಡ ಇನ್ನಿತರರು ಇದ್ದರು.