ನಿಮಗೆ ಗೊತ್ತಿರಬಹುದು….
ಈ ಅಸೂಯೆ ಎಂಬುದಿದೆಯಲ್ಲಾ, ಅದೊಂಥರಾ ವಾಸಿಯಾಗದ ಕ್ಯಾನ್ಸರ್ ಇದ್ದಂತೆ. ಒಬ್ಬರಲ್ಲಿ ಅದೊಮ್ಮೆ ಆಳಕ್ಕೆ ವಕ್ಕರಿಸಿಕೊಂಡರೆ ಮುಗೀತು , ಅದು ಹುಟ್ಟಿದ ಜಾಗದಿಂದಲೇ ನಿಧಾನವಾಗಿ ನಾಶದ ಆರಂಭ ಮೊದಲಾಗುತ್ತೆ. ಆದರೆ ಅಸೂಯೆಯನ್ನು ತಮ್ಮ ಎದೆಯೊಳಗೆ ಸೃಜಿಸುವವರಿಗೆ ಅದು ಒಂದು ರೀತಿಯ ನವೆ ಕೆರೆತದ ಹಿತಕರ ಅಮಲು ಕೊಡುವುದರಿಂದ ತಾನೇ ಸ್ವತಃ ಅದಕ್ಕೆ ಬಲಿಯಾಗಿ ನಾಶವಾಗುತ್ತಿದ್ದೇನೆಂಬ ಅರಿವು ಅಸೂಯಾಪರರಲ್ಲಿ ಮೂಡೋದು ಕಷ್ಟವೇ…..!
ನಮ್ಮೆಲ್ಲರ ನಿತ್ಯ ಬದುಕಿನಲ್ಲಿ ಯಾರೋ ಒಬ್ಬರು ಚೆನ್ನಾಗಿದ್ದಾರೆ, ಎಲ್ಲಾ ವಿಧದಲ್ಲೂ ಏಳಿಗೆ ಹೊಂದುತ್ತಿದ್ದಾರೆಂದರೆ ಅವರನ್ನು ಕಂಡು ಅಸೂಯೆ ಪಡುವ ಜನರೇ ಎಲ್ಲೆಡೆ ಇರೋದು ಕಾಮನ್. ಇದು ಮನುಷ್ಯರಾದವರಿಗೆ ಲೋಕಾರೂಢಿ. ಇದಕ್ಕೆ ಬೇರೆ ಯಾವ ಡೆಫ಼ಿನೇಷನ್ನೂ ಬೇಕಿಲ್ಲ, ಎರಡನೇ ಮಾತೂ ಇಲ್ಲ.
ನೀವು ಕೆಲಸ ಮಾಡುವ ಕಂಪನಿ, ಕಚೇರಿಗಳಲ್ಲಿ , ಉದ್ಯೋಗ- ವೃತ್ತಿಗಳಲ್ಲಿ , ಸ್ನೇಹವಲಯದಲ್ಲಿ, ಅಕ್ಕಪಕ್ಕದವರಲ್ಲಿ, ಬಂಧು-ಬಳಗದವರಲ್ಲಿ ಹಾಗೂ ಒಂದು ಸಂಸ್ಥೆ, ಗುಂಪು, ಸಂಘಟನೆ ಇತ್ಯಾದಿಗಳಲ್ಲಿ ಪರಸ್ಪರ ಅಸೂಯೆ ಹೊಟ್ಟೆಕಿಚ್ಚುಗಳೆಲ್ಲವೂ ಸಹಜವೆಂಬಂತೆ ಹುಟ್ಟಿಕೊಳ್ಳುತ್ತವೆ. ಹೀಗಾಗಿ…..ಇದು ಆಶ್ಚರ್ಯದ ಮ್ಯಾಟರ್ರೇ ಅಲ್ಲ.!
ಆದರೆ ಇದರಿಂದಾಚೆಗೆ ನನಗೆ ಈ ಕ್ಷಣಕ್ಕೂ ಸರಿಯಾಗಿ ಅರ್ಥವಾಗದ, ಅಚ್ಚರಿಯೆನಿಸುವ ಸಂಗತಿಯೆಂದರೆ ಈ ಜೆಲಸ್ ಕಾಂಪ್ಲೆಕ್ಸು ಒಂದೇ ರಕ್ತಹಂಚಿಕೊಂಡು ಜನಿಸಿದವರಲ್ಲೂ ವಿಪರೀತವೆನಿಸುವಷ್ಟು ಆಳಕ್ಕೆ ಮೆತ್ತಿಕೊಂಡಿರುವುದು. ! ಯಾವ ಲೆವೆಲ್ಲಿಗೆ ಎಂದರೆ ಸೋದರ ವಾತ್ಸಲ್ಯ , ಸೋದರಿ ಮಮತೆ, ಎಂಬಿತ್ಯಾದಿ ಪದಗಳಿಗೆ ಹತ್ತು ಡ್ರಂ ಡಾಂಬಾರು ಮೆತ್ತಿಕೊಂಡಷ್ಟು ಕರಾಳವಾಗಿ ಮನಸುಗಳು ಕಲುಷಿತವಾಗಿ ಕಂಡಾಬಟ್ಟೆ ಖರಾಬಾಗಿರುತ್ತವೆ.
ಸಾಮಾನ್ಯವಾಗಿ ಒಡಹುಟ್ಟಿದವರೆಂದರೆ ಒಂದೇ ಬಳ್ಳಿಯ ಹೂಗಳಂತೆ ಎಂಬ ಪಾರಂಪರಿಕ ಕೌಟುಂಬಿಕ ಮೌಲ್ಯವನ್ನು ಕೇಳಿ, ನೋಡಿಕೊಂಡೇ ನಾವು ನೀವೆಲ್ಲಾ ಬೆಳೆದಿದ್ದೇವೆ. ಕುಟುಂಬಗಳಲ್ಲಿ ಅನೇಕ ವಿಷಯಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಾಂಧರ್ಭಿಕವಾಗಿ ಹುಟ್ಟಿಕೊಂಡರೂ ತಾವೆಲ್ಲಾ ಒಂದೇ ಉದರದಲ್ಲಿ ಜನಿಸಿದವರೆಂಬ ಮಮತೆ , ಮಮಕಾರ ,ಬಂಧನಗಳ ಸೆಳೆತ ಅವರೆಲ್ಲರಲ್ಲಿ ಪ್ರೀತಿಯ ಸೆಲೆ ಬತ್ತದಂತೆ ನೋಡಿಕೊಳ್ಳುವ ಕೆಲಸ ಮಾಡಬೇಕು. ಬಹುಶಃ ಹಲವು ವರ್ಷಗಳ ಹಿಂದೆ ಕುಟುಂಬಗಳು ಮತ್ತವುಗಳ ಸದಸ್ಯರ ಭಾಂದವ್ಯಗಳು ಇದ್ದದ್ದು ಹೀಗೇನೇ. ಆದರೆ ಬರುಬರುತ್ತಾ ಯಾವಾಗ ಹಣ , ಆಸ್ತಿ, ಅಧಿಕಾರ , ಒಡವೆ ಸಂಪತ್ತು, ಪಾಲುವಿಭಾಗ ಇತ್ಯಾದಿಗಳ ವಿಷಯಗಳು ಒಡಹುಟ್ಟಿದ ಸಂಬಂಧಗಳಿಗಿಂತ, ಮಾನವೀಯ ಮೌಲ್ಯಗಳಿಗಿಂತ ಹೆಚ್ಚು ಹೆಚ್ಚು ತೂಗಲು ಶುರುವಾದವೋ ಆಗ ಹುಟ್ಟುತ್ತಾ ಅಣ್ಣ ತಮ್ಮ, ಅಕ್ಕ ತಂಗಿಯರಾಗಿದ್ದವರು ಬೆಳೆಯುತ್ತಾ ದಾಯಾದಿಗಳಾಗಿ ಪರಿವರ್ತನೆಯಾಗುತ್ತಾ ದ್ವೇಷಾಸೂಯೆಗಳ ವಾತಾವರಣದ ನೆಲೆಯಲ್ಲಿಯೇ ಬದುಕು ಸವೆಸುತ್ತಾ ಬಂದರು. ಈಗೀಗಂತೂ ಎಲ್ಲೆಡೆ ಅಂತಹ ವಾತಾವರಣವೇ ತುಂಬಿದೆ.
ಸಾಮಾನ್ಯವಾಗಿ ಹಣ-ಆಸ್ತಿಗೆ ಸಂಬಂಧಿಸಿದ ವಿಚಾರಗಳು ಒಡಹುಟ್ಟಿದವರನ್ನು ತಲೆಕೆಡಿಸಿ ಸಂಬಂಧ ಹಾಳುಗೆಡಹುವ ಮುಖ್ಯ ಸಂಗತಿಗಳಾಗಿರುವುದರಿಂದ ಅಂತಹ ಸಂಬಂಧಗಳಲ್ಲಿ ಅಸೂಯೆಯೆಂಬುದು ಪರಸ್ಪರ ಭಾಂದವ್ಯಗಳಲ್ಲಿ ಬಿರುಕು, ಭಿನ್ನಾಭಿಪ್ರಾಯಗಳನ್ನು ಮೂಡಿಸಲೂಬಹುದು. ಅಷ್ಟೇ ಅಲ್ಲ, ಒಂದೇ ಬಳ್ಳಿಯ ಹೂಗಳಾಗಿದ್ದವರನ್ನೂ ಮುಳ್ಳುಗಳನ್ನಾಗಿಸಿ ಪರಸ್ಪರ ಕತ್ತಿ ಮಸಿಯುವಂತೆ ಮಾಡಲೂಬಹುದು.
ಇದು ಸಹಾ ಪರಂಪರಾನುಗತವಾಗಿ ಬಂದಿರುವ ಸಾಮಾನ್ಯ ಪ್ರಕ್ರಿಯೆಯಾಗಿದ್ದು ಇಂತಹ ಸನ್ನಿವೇಶಗಳಲ್ಲೂ ಅಂತಹ ಅಚ್ಚರಿಯಾಗದು.!
ಆದರೆ ತುಂಬಾ ತುಂಬಾ ವರ್ಸ್ಟ್ ಪಾರ್ಟ್ ಏನು ಗೊತ್ತಾ..? ಕೆಲವು ಕುಟುಂಬಗಳಲ್ಲಿ ತಂದೆ ತಾಯಿಗಳು ಮಕ್ಕಳೆಲ್ಲರನ್ನೂ ಒಂದೇ ತರಹ ಬೆಳೆಸಿ, ಅವರಿಗೆ ಸಮವಾಗಿ ಆಸ್ತಿವಿಭಾಗ ಮಾಡಿ ಎಲ್ಲರಿಗೂ ಅವರವರ ಸಮಪಾಲು ಹಂಚಿದ ನಂತರ ಹಾಗೂ ಎಲ್ಲರಿಗೂ ಅವರವರ ಹಕ್ಕುಗಳಿಗನುಸಾರವಾಗಿ ಅನುಕೂಲ ಮಾಡಿಕೊಟ್ಟ ನಂತರವೂ ಕೆಲವು ಮಕ್ಕಳ ನಡುವೆ ಅಸೂಯೆಯ ಜ್ವಾಲೆಯಲ್ಲೇ ಕುದಿಯುವ ಮನಸ್ಥಿತಿಗಳ ವರ್ತನೆಗಳು ಮುಂದುವರೆಯುತ್ತಲೇ ಇರುತ್ತವೆ. ಯಾವ ರೇಂಜಿಗೆ ಎಂದರೆಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದೆಂಬಂತೆ.
ಆಸ್ತಿ ಪಾಲಿನಲ್ಲಿ ಮಕ್ಕಳಲ್ಲಿ ಯಾರಿಗಾದರೂ ಸ್ವಲ್ಪ ಕಡಿಮೆಯಾದಲ್ಲಿ ಅಥವಾ ಅನ್ಯಾಯವಾದಲ್ಲಿ ಸಿಡಿದೇಳುವುದು, ದ್ವೇಷ ಅಸೂಯೆ ಸಾಧಿಸುವುದರಲ್ಲಿ ಒಂದು ನೆಗೆಟೀವ್ ಅರ್ಥವಾದರೂ ಇದೆ. ಆದರೆ ಇದಾವುದೂ ಇಲ್ಲದಿದ್ದರೂ ಸುಖಾಸುಮ್ಮನೇ ಪರಸ್ಪರ ಕತ್ತಿ ಮಸಿಯುವ ಹಂತಕ್ಕೆ ಕುಟುಂಬಗಳು ಪಲ್ಲಟವಾಗುತ್ತಿರುವುದು ಸಾಮಾಜಿಕ ಮೌಲ್ಯಗಳ ದುರಂತದ ಸಂಕೇತ.
ಈ ಮನಸ್ಥಿತಿಯ ಕುಟುಂಬಗಳಲ್ಲಿ ಸ್ವಂತ ಸಹೋದರಿ ಅನುಕೂಲವಾ ಗಿ ಖುಷಿಯಾಗಿರುವುದನ್ನೇ ಸಹಿಸದ ಸಹೋದರ , ಸಹೋದರಿಯ ಏಳಿಗೆ ಕಂಡು ಒಳಗೊಳಗೇ ಕುದಿಯುವ ಮತ್ತೊಬ್ಬ ಸಹೋದರಿ , ಅಣ್ಣನ ಕೀರ್ತಿಗೆ ಅಸೂಯೆ ಪಡುವ ತಮ್ಮ, ತಮ್ಮನ ಅಭಿವೃದ್ಧಿ ಸಹಿಸದೇ ದೂರವಿದ್ದೇ ದ್ವೇಷಸಾಧಿಸುವ ಅಣ್ಣ, ತಮಗಿಂತ ತಮ್ಮ ಒಡಹುಟ್ಟಿದವರ ಮಕ್ಕಳು ವಿದ್ಯೆಯಲ್ಲಿ, ಬುದ್ದಿಯಲ್ಲಿ ಸ್ಥಾನಮಾನದಲ್ಲಿರುವುದನ್ನು ಸಹಿಸದ ಕೇಡಿ ಮನಸುಗಳು, ಒಬ್ಬರು ಸ್ವಲ್ಪವೇ ಹೆಚ್ಚು ಅದ್ದೂರಿಯಾಗಿ ಮದುವೆಯೋ ಮತ್ತೊಂದೋ ಸಮಾರಂಭ ಮಾಡಿದಲ್ಲಿ ಹೊಟ್ಟೆಗೆ ಬೆಂಕಿ ಸುರಿದುಕೊಳ್ಳುವ ದಾಯಾದಿಗಳು, ತಮ್ಮ ಸಹೋದರ- ಸಹೋದರಿಯ ಮಕ್ಕಳೇನಾದರೂ ಏಳಿಗೆ ಹೊಂದಿದಲ್ಲಿ ಅವರ ಸಂಪರ್ಕವನ್ನೇ ಬ್ಲಾಕ್ ಮಾಡುವ ದುಷ್ಟ ಮತ್ತು ಸಂಕುಚಿತ ಬುದ್ದಿಯ ಬೆನ್ನ ಹಿಂದೆ ಮುಂದೆ ಬಿದ್ದಿರುವ ಗೋಮುಖ ವ್ಯಾಘ್ರರು…..ಒಟ್ಟಾರೆ ಒಂದೇ ರಕ್ತಹಂಚಿಕೊಂಡು ಹುಟ್ಟಿದವರ ಮಧ್ಯೆ ಪರಸ್ಪರ ಸರ್ವನಾಶವನ್ನೇ ಬಯಸುವ ಕೆಟ್ಟ ಅಸೂಯಾಪರ ಚಿಂತನೆಗಳು, ಸ್ವಂತದವರ ಬಗ್ಗೆಯೇ ಚಾಡಿ ಹೇಳುವ ಕುತ್ಸಿತ ಬುದ್ದಿಗಳಂತಹ ಅಸೂಯೆಯ ಪ್ರತಿಧ್ವನಿಯೆಂಬುದು ಕೆಲವು ಕುಟುಂಬಗಳಲ್ಲಿ ಅವ್ಯಾಹತವಾಗಿ ನಡೆಯುತ್ತಲೇ ಇರುತ್ತವೆ.
ಬಹುಶಃ ಸದಾ ಅನ್ಯೋನ್ಯವಾಗಿರುವ ಕುಟುಂಬಗಳ ಸಿಬ್ಲಿಂಗ್ಸ್ ರಿಗೆ ಇದನ್ನು ನೋಡಿ ” ಹೀಗೆಲ್ಲಾ ಇರುತ್ತಾರಾ ” ಎಂದು ಅಚ್ವರಿಯೆನಿಸಬಹುದು ! ಆದರೆ ಇದು ಇಂದಿನ ವಾಸ್ತವ, ಇಂದಿನ ಬಹುತೇಕ ದಾಯಾದಿಗಳ ಮನೆ ಮನೆ ಕಲಹ…!ಕೆಲವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಅನ್ಯೋನ್ಯವಾಗಿ ಬಾಳುವುದರತ್ತ ಮನಸ್ಸು ಮಾಡಿದರೆ, ಹಲವರು ಕೊನೆಯ ಉಸಿರಿರುವವರೆಗೂ ದ್ವೇಷದ ಬೆಂಕಿಯಲ್ಲೇ ಉರಿದುರಿದು ನಾಶವಾಗುತ್ತಾರೆ.
ಅಂತರಿಕ್ಷದಲ್ಲಿ , ಅನ್ಯ ಗ್ರಹಗಳಲ್ಲಿ ವರ್ಷಗಟ್ಟಲೆ ವಾಸಮಾಡಿ ಭೂಮಿಗೆ ಸುರಕ್ಷಿತವಾಗಿ ಮರಳುವ ಜ್ಞಾನ, ವಿವೇಕ, ಬುದ್ದಿ ಸಂಪಾದಿಸಿರುವ ಮನುಷ್ಯನಿಗೆ ತನ್ನೊಳಗಿನ ಸ್ವಾರ್ಥ, ಅಸೂಯೆ, ದ್ವೇಷ ..ಇವೇ ಮುಂತಾದ ಸಂಕುಚಿತ ಭಾವನೆಗಳ ಮೇಲೆ ನಿಯಂತ್ರಣ ಹೇರಿಕೊಳ್ಳಲು ಇಂದಿಗೂ ಸಾಧ್ಯವಾಗದಿರುವುದು ಬದುಕಿನ ವ್ಯಂಗ್ಯವೇ, ಮನುಷ್ಯ ಸೃಷ್ಟಿಯ ಶಾಪವೇ….ಅಥವಾ ಮನುಷ್ಯಜೀವಿಯ ಸೃಷ್ಟಿಯೇ ಹೀಗೇನಾ..?
ಗಾಡ್ ಓನ್ಲೀ ನೋಸ್…!!
ಮರೆಯುವ ಮುನ್ನ
ಆಗಷ್ಟೇ ಪರಿಚಯವಾದ ಯಾರೋ ಯಾರನ್ನೋ ಆತ್ಮೀಯತೆಯಿಂದ, ಸುಮನಸಿನ ಭಾವನೆಗಳಿಂದ ಟ್ರೀಟ್ ಮಾಡ್ತೀವಿ, ಅವರನ್ನು ಅಣ್ಣ, ಅಕ್ಕ ,ಸಹೋದರ ಸಹೋದರಿ ಎಂದೆಲ್ಲಾ ಸ್ಥಾನ ಕೊಟ್ಟು ಆದರಿಸುತ್ತೇವೆ. ಆದರೆ ತನ್ನದೇ ಕುಟುಂಬದ ತನ್ನ ತಾಯಿಯ ಗರ್ಭದಲ್ಲೇ ಜನಿಸಿದ ಒಡಹುಟ್ಟಿದವರೆಡೆಗೆ ಇರಬೇಕಾದ ಮಮತೆ, ಮಮಕಾರ , ಪರಿಶುದ್ಧ ಹೃದಯದಿಂದ ಸೃಜಿಸುವ ಪ್ರೀತಿ ಇವೇ ಮೊದಲಾದ ಪರಿಶುದ್ಧ ಭಾವನೆಗಳು ಆ ಸಂಬಂಧಗಳಲ್ಲಿ ಮಾಯವಾಗಿರುತ್ತೆ.
ತಮ್ಮ ಸ್ನೇಹಿತನ ತಂದೆ ತಾಯಿಯನ್ನು ಅಕ್ಕರೆಯಿಂದ ಮಾತನಾಡಿಸಿ ಗೌರವಿಸುವ ಕೆಲವು ಮೂರ್ಖರಿಗೆ, ತಮ್ಮ ಇರುವಿಕೆಗೆ ಏಳಿಗೆಗೆ ಕಾರಣರಾದ ವಯಸ್ಸಾದ ತಮ್ಮ ಸ್ವಂತ ತಂದೆ ತಾಯಿಗಳು ಯಾರ ಆಸರೆಯೂ ಇಲ್ಲದೆ ನಿತ್ಯ ನರಳುವ ದೃಶ್ಯ ಮಾತ್ರ ಇವರ ಕಣ್ಣಿಗೆ ಬೀಳುವುದಿಲ್ಲ, ಬಿದ್ದರೂ ಕೇರ್ ಮಾಡುವುದಿಲ್ಲ. ಸ್ನೇಹಿತ ಸಹೋದ್ಯೋಗಿಗಳ ಮಕ್ಕಳ ಏಳಿಗೆಯನ್ನು ಕಂಡು ಮುಕ್ತವಾಗಿ ಹರಸುವ ಅವೇ ಮನಸುಗಳು ತನ್ನ ಬೆನ್ನ ಹಿಂದೆ- ಮುಂದೆ ಬಿದ್ದವರ ಮಕ್ಕಳ ನಾಶವನ್ನೇ ಮನದೊಳಗೆ ಬಯಸುತ್ತವೆ.
ಕೆಲವರ ಮುಖವನ್ನು ಎಂದೂ ನೋಡದಿದ್ದರೂ, ಕೇವಲ ಸಾಮಾಜಿಕ ಜಾಲತಾಣಗಳ ಮೂಲಕ ಮಾನವ ಸಂಬಂಧಗಳನ್ನು ಬೆಸೆದುಕೊಂಡು ಹರ್ಷಿಸುವ ಅವೇ ವ್ಯಕ್ತಿಗಳು, ತಮ್ಮದೇ ಕುಟುಂಬದ ಸಂಬಂಧಗಳಿಗೆ ದ್ವೇಷಾಸೂಯೆಗಳ ಕೊಳ್ಳಿಯಿಟ್ಟು ಸಂಭ್ರಮಿಸುತ್ತಾರೆ.
ಎಲ್ಲಿ ಪ್ರೀತಿ, ಪ್ರೇಮ, ವಿಶ್ವಾಸ-ನಂಬಿಕೆ , ಬಂಧ-ಅನುಬಂಧಗಳ ಜಾಗದಲ್ಲಿ ಯಃಕಶ್ಚಿತ್ ಸ್ವಾರ್ಥ, ವ್ಯಾಮೋಹ, ಲಾಭ- ನಷ್ಟ, ಸ್ವಪ್ರತಿಷ್ಠೆಗಳಂತಹ ಅನುಕೂಲಸಿಂಧು ವ್ಯವಹಾರಿಕ ಕಾರಣಗಳ ಮೇಲೆ ಮನುಷ್ಯನ ಸಂಬಂಧಗಳು ಅಳೆಯಲ್ಪಡುತ್ತವೆಯೋ, ಎಲ್ಲಿ ಚಾಡಿ ಮಾತುಗಳನ್ನು ಮುಠಾಳರಂತೆ ನಂಬಿ ನೆಗೆಟೀವ್ ಅಭಿಪ್ರಾಯಗಳನ್ನು ಬೆಳೆಸಿಕೊಂಡು ನರಳುತ್ತಾರೋ ಅಲ್ಲೆಲ್ಲಾ ಈ ತೆರನಾದ ವರ್ತನೆಗಳು ಸಹಜ.
ಈ ಪ್ರಪಂಚದಲ್ಲಿ ನಿಮ್ಮ ಏಳಿಗೆ ಕಂಡು ಬೇರೆ ಯಾರೋ ಅಸೂಯೆ ಪಟ್ಟರೆ ಅಥವಾ ಕರುಬಿದರೆ ಅದು ಅಷ್ಟಾಗಿ ನಿಮ್ಮನ್ನು ಭಾದಿಸದು. ಆದರೆ ಒಂದೇ ತಾಯಿಯ ಹೊಟ್ಟೆಯೊಳಗೇ ಜನಿಸಿ ಬಾಲ್ಯದಿಂದಲೂ ಆಡಿ ಬೆಳೆದ ಸಹೋದರ ಸಹೋದರಿಯರೇ ನಿಷ್ಕಾರಣವಾಗಿ ನಿಮ್ಮತ್ತ ಅಸೂಯೆಯ ವಕ್ರದೃಷ್ಟಿಯನ್ನು ಬೀರುತ್ತಲೇ ಬಂದು ನಿಮ್ಮ ನಾಶ ಬಯಸುವ ಹಂತಕ್ಕೆ ತಲುಪಿದಾಗ ಆಗುವ ವೇದನೆಯೆದೆಯಲ್ಲಾ…..ಅದು ಪದಗಳಿಗೆ ನಿಲುಕದ್ದು..!
ಎದೆಚಿಪ್ಪಿನೊಳಗೆ ಅಸೂಯೆಯ ಜಾಗದಲ್ಲಿ ಬೊಗಸೆಯಷ್ಟು ಪ್ರೀತಿ ತುಂಬಿಕೊಂಡಾಗ ಮಾತ್ರ ವಿವೇಕ ಕೆಲಸ ಮಾಡಬಹುದು…..

ಹಿರಿಯೂರು ಪ್ರಕಾಶ್.








