ಮೈಸೂರು: ಇಂದು ನಗರದಲ್ಲಿ ಮಹಿಷ ದಸರಾ (Mahisha Dasara) ಆಚರಣೆ ನಡೆಯುತ್ತಿರುವ ಹಿನ್ನೆಲೆ, ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಹಿಷಾಸುರ ಪ್ರತಿಮೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಸೆಪ್ಟೆಂಬರ್ 25ರ ಬೆಳಗ್ಗೆ 6 ಗಂಟೆಯವರೆಗೂ ಈ ನಿಷೇಧಾಜ್ಞೆ ಮುಂದುವರಿಯಲಿದ್ದು, ಈ ಅವಧಿಯಲ್ಲಿ ಯಾವುದೇ ಸಭೆ, ಮೆರವಣಿಗೆ ಅಥವಾ ಸಮಾರಂಭಗಳನ್ನು ನಡೆಸಲು ಅನುಮತಿ ಇರುವುದಿಲ್ಲ ಎಂದು ಆದೇಶಿಸಲಾಗಿದೆ.
ದಸರಾದಲ್ಲಿ ವಿಂಟೇಜ್ ಕಾರುಗಳ ಆಕರ್ಷಣೆ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಸಂಭ್ರಮ ದಿನದಿಂದ ದಿನಕ್ಕೆ ವೈಭವ ಹೆಚ್ಚಿಸಿಕೊಳ್ಳುತ್ತಿದೆ. ಈ ಹಿನ್ನೆಲೆ ಹೆಬ್ಬಾಳ ಕೈಗಾರಿಕ ಪ್ರದೇಶದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ಜನರ ಗಮನ ಸೆಳೆದಿದೆ.
1905ರ ಕಾರು ಮಾಡೆಲ್ನಿಂದ ಹಿಡಿದು 2025ರ ತನಕದ ಹಲವು ಐತಿಹಾಸಿಕ ಹಾಗೂ ಅಪರೂಪದ ಕಾರುಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಈ ಬಾರಿ ದೊರಕಿದೆ. ಫೋರ್ಡ್ ಜಿಪಿಡಬ್ಲ್ಯೂ, ರೋಲ್ಸ್ ರಾಯ್ಸ್, ಲ್ಯಾಂಡ್ ರೋವರ್, ಅಂಬಾಸಿಡರ್, ಬೆಡ್ ಫೋರ್ಡ್ ಸೇರಿ ಅನೇಕ ಅಪರೂಪದ ಕಾರುಗಳು ಪ್ರದರ್ಶನದಲ್ಲಿ ಕಂಗೊಳಿಸುತ್ತಿವೆ.
ಮಾಲೀಕರಾದ ಸಾವಿತ್ರಿ ಗೋಪಿನಾಥ ಶೆಣೈ ಮಾತನಾಡಿ, “ಇದು ನನ್ನ ಪತಿ ಹವ್ಯಾಸ. ಹಲವು ವರ್ಷಗಳಿಂದ ನಾನಾ ದೇಶಗಳಿಂದ ಸಂಗ್ರಹಿಸಿದ ಕಾರುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುತ್ತಿದ್ದೇವೆ” ಎಂದು ಹೇಳಿದರು. ಕಾರುಗಳ ಜೊತೆಗೆ ಹಳೆಯ ಆರ್ಎಕ್ಸ್ ಬೈಕ್, ಬಿಎಂಡಬ್ಲ್ಯೂ ಓಲ್ಡ್ ಮಾದರಿ, ರಾಯಲ್ ಎನ್ಫಿಲ್ಡ್ ಸೇರಿದಂತೆ ಹಳೆಯ ಬೈಕ್ಗಳೂ ಕಣ್ಮನ ಸೆಳೆಯುತ್ತಿವೆ.
ಯುವ ದಸರಾ 2025ಕ್ಕೆ ಚಾಲನೆ
ದಸರಾ ಅಂದರೆ ಯುವ ದಸರಾ ಪ್ರಮುಖ ಆಕರ್ಷಣೆ. ಈ ಬಾರಿ ಯುವ ದಸರಾ ಕಾರ್ಯಕ್ರಮಕ್ಕೆ ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ ಚಾಲನೆ ನೀಡಿದರು. 5 ದಿನಗಳ ಕಾಲ ನಡೆಯುವ ಈ ಯುವ ಸಂಭ್ರಮದಲ್ಲಿ ಮೊದಲ ದಿನವೇ ಸಂಗೀತ ಮಧುರವಾಗಿತ್ತು.








