“ಅಲ್ಲಪ್ಪಾ…..ನೀನೇಕೆ….ಅವನನ್ನು ಮೊದಲಿನಿಂದಲೂ ಮಾತನಾಡಿಸುತ್ತಿಲ್ಲ. ಮಾತನಾಡಿಸುವುದಿರಲೀ, ಅವನ ಮುಖ ಕಂಡರೆ ಆಗದಂತೆ ಅಂತರ ಕಾಯ್ದುಕೊಂಡೇ ಬಂದಿದ್ದೀಯಾ…? ನಿನಗೂ ಅವನಿಗೂ ಏನಾದರೂ ದುಡ್ಡು, ಒಡವೆ ,ಆಸ್ತಿ, ಪ್ರೀತಿ….ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಎಂದಾದರೂ ವಾದ -ವಿವಾದ, ಇಲ್ಲವೇ ಕಿರಿಕ್ಕು ಆಗಿತ್ತಾ..? ಇಷ್ಟು ವರ್ಷದಿಂದ ನೀವೆಲ್ಲಾ ತುಂಬಾ ಹತ್ತಿರವಿದ್ದರೂ ದೂರವಿದ್ದಂತೆ ಏಕಿದ್ದೀರಿ….? ನನಗೆ ಅರ್ಥವಾಗುತ್ತಿಲ್ಲ…!
ಇವೇ ಮೊದಲಾದ ಪ್ರಶ್ನೆಗಳನ್ನು ನನ್ನ ಆತ್ಮೀಯನೊಬ್ಬನಿಗೆ ಒಮ್ಮೆ ಕೇಳಿದ್ದೆ. ಅದಕ್ಕೆ ಅವನಿಂದ ಬಂದ ಉತ್ತರ…
” ಛೇ ಹಾಗೇನಿಲ್ಲಪ್ಪಾ….. ನಮ್ಮಿಬ್ಬರ ನಡುವೆ ಅಂಥಾದ್ದೇನೂ ಇಲ್ಲ.!
ಹಾಗಾದಾರೆ ಎಲ್ಲರಂತೆ ಅವನನ್ನೇಕೆ ನೀನು ನೆಟ್ಟಗೆ ಮಾತನಾಡಿಸದೇ ಹಲವು ವರ್ಷಗಳಿಂದಲೂ ಡಿಸ್ಟೆನ್ಸ್ ಮೇಂಟೇನ್ ಮಾಡ್ತಾ ಇದೀಯಾ..?
ಅಚ್ಚರಿಯಿಂದ ಕೇಳಿದ್ದೆ.
ಅದಕ್ಕೂ ಅವ ಹೇಳಿದ್ದು “. ಏನಿಲ್ಲ….ಹಾಗೇ ಸುಮ್ನೇ…!
ಅವನ ಮುಗುಳುನಗೆಯೇ ಎಲ್ಲದಕ್ಕೂ ಉತ್ತರವಾಗಿತ್ತು.!
ಅರೆ…ಇವನಜ್ಜಿ….. ಅವನೊಂದಿಗೆ ಯಾವ ಬೇಡದ ವ್ಯವಹಾರವೂ ಇಲ್ಲ, ಎಂತಹಾ ಕಿರಿಕ್ಕೂ ಇಲ್ಲ ಮನಸ್ತಾಪವೂ ಇಲ್ಲ….ಹಾಗಿದ್ದ ಮೇಲೆ ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸಿ ಅವನ ಸನಿಹದಲ್ಲಿರುವ ಈ ಮನುಷ್ಯ ಅವನನ್ನು ಮಾತ್ರ ಯಾಕೆ ಹೀಗೆ ದೂರ ಇಟ್ಟು ಅವನನ್ನು ಕಂಡರೆ ಆಗದಂತೆ ಇದ್ದಾನೆ…..?
ಈ ಪ್ರಶ್ನೆಗೆ ಕೊನೆಗೂ ಸ್ಪಷ್ಟ ಉತ್ತರ ಸಿಗದೇ ತಲೆಯೊಳಗಿನ ಹುಳು ಕೊರೆಯುತ್ತಲೇ ಇತ್ತು. ಅದನ್ನು ಅಲ್ಲಿಗೇ ಬಿಟ್ಟು ಸುಮ್ಮನಾಗಿದ್ದೆ. ಆದರೆ ಹಾಗೆಯೇ ಈ ವಿಚಾರದ ಸ್ವಲ್ಪ ಆಳಕ್ಕಿಳಿದು ನೋಡಿದಾಗ….
ನಮ್ಮಲ್ಲೂ ಸಾಕಷ್ಟು ಜನರ ಮನೋಭಾವ ಹೀಗೆಯೇ ಇದ್ದಿರಬಹುದಲ್ಲವೇ…? ಅಂದರೆ ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ… ಕಾರಣವಿದ್ದೋ…ಇಲ್ಲದೆಯೋ… ನಮ್ಮದೇ ಸ್ನೇಹ ವಲಯದಲ್ಲಿ, ಬಂಧುಗಳಲ್ಲಿ ನೆಂಟರಿಷ್ಟರಲ್ಲಿ ಯಾರೋ ಒಬ್ಬಿಬ್ಬರು ನಮಗೆ ತೀರ ಹತ್ತಿರದಲ್ಲಿದ್ದರೂ ಅವರನ್ನು ಎಲ್ಲರಂತೆ ನಾವು ಮಾತನಾಡಿಸುವುದಾಗಲೀ ಅಥವಾ ಕೊನೇಪಕ್ಷ ಮುಖ ಕಂಡರೆ ಒಂದು ಸ್ಮೈಲ್ ಕೊಟ್ಟು ಹೇಗಿದ್ದೀರಿ ಎನ್ನುವುದಾಗಲೀ ಮಾಡಲು ಮನಸು ಬರೋಲ್ಲ. ಹತ್ತು ಜನರ ಗುಂಪಿನಲ್ಲಿ ಒಂಭತ್ತು ಜನರನ್ನು ಆತ್ಮೀಯವಾಗಿ ಮಾತನಾಡಿಸುವ ಮನಸ್ಸು ಈ ಥರದ ಒಬ್ಬಿಬ್ಬರನ್ನು ಹತ್ತಿರ ಸುಳಿಯಲು ಸಹಾ ಬಿಡದು….. ಹೌದು.. ಹೀಗೇಕೆ…?
ಇನ್ನೂ ಕೌತುಕವೆಂದರೆ,
ಅವರೊಂದಿಗೆ ಜಗಳವಾಡಿಲ್ಲ, ದುಡ್ಡು ಕಾಸಿನ ಡೀಲಿಂಗ್ಸ್ ಇಲ್ಲ, ಎಂಥಾ ಕಲಹಗಳೂ ಇಲ್ಲ. ಆದರೂ ಅವರಿಂದ ನೆರಳು ಕೂಡಾ ಸೋಕದಂತೆ ಅಂತರ ಕಾಪಿಟ್ಟುಕೊಂಡೇ ಬಂದಿರುತ್ತೇವೆ….. ಇದೊಂಥರಾ ವಿಚಿತ್ರ ಆದರೂ ಸತ್ಯವಲ್ಲವೇ..?
ಒಮ್ಮೆ ನಿಮ್ಮ ಮನಸನ್ನು ಕೇಳಿ ನೋಡಿ..?
ಹೊರಗಿನ ಫ಼್ರೆಂಡ್ಸ್, ಕೊಲೀಗ್ಸ್ ಗಳ ಕಥೆ ಬಿಟ್ಟಾಕಿ. ನಿಮ್ಮ ಹತ್ತಿರದ ಬಂಧು ಬಳಗ, ಕೌಟುಂಬಿಕ ವಲಯದಲ್ಲೇ ಒಂದಷ್ಟು ಜನರನ್ನು ಹಾಗೇ ಕಣ್ಣಮುಂದೆ ತಂದುಕೊಳ್ಳಿ. ಅದರಲ್ಲಿ ಒಂದಿಬ್ಬರನ್ನು ಕಂಡರೆ ನಿಮ್ಮ ಮನಸ್ಸು ನಿಷ್ಕಾರಣವಾಗಿ ಅವರನ್ನು ದೂರ ಇಡಲೇ ಬಯಸುತ್ತದೆ. ಅವರ ಬಗ್ಗೆ ಯಾವೊಂದು ವಿಷಯವನ್ನೂ ತಿಳಿಯಲು ಕಿಂಚಿತ್ತೂ ಆಸ್ಥೆ ಇರದು. ಹಾಂ…..ಎಗೈನ್….ಇದಕ್ಕೆ ನಿರ್ದಿಷ್ಟವಾದ ಕಾರಣ ಇರೋಲ್ಲ..!
ಕೆಲವರ ಬಗೆಗೆ ಇನ್ನೊಂದು ರೀತಿಯಲ್ಲೂ ನಮ್ಮ ಮನಸ್ಸು ವರ್ತಿಸುತ್ತದೆ. ಅಂದರೆ , ಆ ವ್ಯಕ್ತಿಯ ಯಾವುದೇ ರೀತಿಯ ಏಳಿಗೆಯನ್ನು ಸಹಿಸಲು ಸಾಧ್ಯವಿರದಷ್ಟು ಹೆಜ್ಜೆಹೆಜ್ಜೆಗೂ ಒಳಗೊಳಗೇ ದ್ವೇಷಿಸಲು ತೊಡಗುತ್ತದೆ. ಅದನ್ನು ಕೇವಲ ಅಸೂಯೆ ಎನ್ನಲಾಗದು. ವಿಸ್ಮಯವೆಂದರೆ ಅದೇ ಮನಸ್ಸು ಇತರೆ ಪರಿಚಿತರ ಸ್ನೇಹಿತರು ತಮ್ಮ ಬದುಕಿನಲ್ಲಿ ಸಾಧಿಸಿದ ಎಂತಹಾ ಏಳಿಗೆಯನ್ನಾದರೂ ವಿಶಾಲ ಮನಸ್ಸಿನಿಂದ ಸಂಭ್ರಮಿಸುತ್ತಲೇ ಇರುತ್ತೆ. ಅಂದರೆ ಮನಸಿನ ಈ ನೆಗೆಟೀವ್ ಅಪ್ಪ್ರೋಚು ಕೇವಲ ಒಂದಿಬ್ಬರ ವಿಷಯದಲ್ಲಿ ಮಾತ್ರವೇ.ಅಂಥವರಿಗೆ ಸಂಬಂಧಿಸಿದ ಎಂತಹ ಖುಷಿಯ ವಿಚಾರವನ್ನೂ ಕಹಿಯಾಗಿಯೇ ಸ್ವೀಕರಿಸುತ್ತೆ…! ವೆರೀ ಪೆಕ್ಯೂಲಿಯರ್ ಅಲ್ವಾ..?
ಎಲ್ಲಕ್ಕಿಂತ ತುಂಬಾ ಅಚ್ಚರಿಯ ಸತ್ಯ ಏನುಗೊತ್ತಾ….? ಈ ತರಹದ ಕಾಂಪ್ಲೆಕ್ಸಿಟಿ ಅನ್ನೋದು ಒಂದೇ ಕುಟುಂಬದ ಕೆಲ ಸದಸ್ಯರಲ್ಲೇ ಎಲ್ಲೋ ಒಂದು ಕಡೆ ಆಳವಾಗಿ ಸುಪ್ತವಾಗಿರಬಲ್ಲದು. ಅಂದರೆ ಕೆಲವು ಅಣ್ಣ ತಮ್ಮಂದಿರೋ, ಅಕ್ಕ ತಂಗಿಯರೋ ಅಥವಾ ಕಸೀನ್ಸ್ ನಡುವೆಯೋ… ವಿನಾಕಾರಣ ಮನಸ್ಸುಗಳು ಒಂದು ನಿರ್ದಿಷ್ಟ ಅಂತರದಲ್ಲೇ ಇರುತ್ತವೆ. ಮೇಲ್ನೋಟಕ್ಕೆ ಎಲ್ಲೋ ಎಂದೋ ಒಮ್ಮೆ ಎದುರು ಬದುರಾಗಿ ನಿಂತಾಗ ಅನಿವಾರ್ಯವಾಗಿ ಬಲವಂತವಾಗಿ ಮೊಗದಲ್ಲಿ ನಗು ತುಂಬಿಕೊಂಡು ತಲೆ ಅಲ್ಲಾಡಿಸಿ, ಯಾಂತ್ರಿಕವಾಗಿ ಮುಂದೆ ಹೋಗುವ ಮನಸ್ಸು ಅವರನ್ನು ಮನಸಾರೆ ವಿಚಾರಿಸಲು ಬಯಸೋಲ್ಲ….! ಇದು ಯಾವ ರೀತಿಯಲ್ಲಿ ದೀರ್ಘಕಾಲ ಮುಂದುವರೆದುಕೊಂಡು ಬಂದಿರುತ್ತೆ ಅಂದರೆ ಯಾರಾದರೂ ನೋಡಿದವರ ದೃಷ್ಟಿಯಿಂದ ಇವರಿಬ್ಬರ ನಡುವೆ ಯಾವುದೋ ಗಂಭೀರವಾದ ವಿಷಯಕ್ಕೆ ವಾದವಿವಾದ , ಜಗಳ ಇದ್ದಿರಬಹುದೆಂಬ ಇಂಬು ಕೊಡುವಂತೆ ಅಂತರ ಎದ್ದು ಕಾಣುತ್ತದೆ.
ಫ಼ನ್ನೀ ಪಾರ್ಟ್ ಎಂದರೆ ….ಇದಕ್ಕೆ ಇಂಥಾದ್ದೇ ನಿರ್ದಿಷ್ಟವಾದ ಕಾರಣವೂ ಇರೋಲ್ಲ. ಇದೂ ಸಹಾ ಹಾಗೇ ಸುಮ್ಮನೇ ಅಷ್ಟೇ…!
ಇದೆಲ್ಲಾ ಇಂದು ನಿಮ್ಮೊಂದಿಗೆ ಹೇಳೋದಕ್ಕೂ ಒಂದು ಕಾರಣವಿದೆ. ಇವತ್ತು 2025 ರ ಕೊನೆಯ ದಿನ. ನಾಳೆ ಬೆಳಗಾದರೆ ನೂತನ ವರ್ಷದ ಆರಂಭ. ನಿಮ್ಮದೇ ಸ್ನೇಹಿತರ, ಬಂಧುಗಳ, ರಕ್ತ ಸಂಬಂಧಿಗಳ ಪರಿಚಿತರ ಸಹೋದ್ಯೋಗಿಗಳ ವಲಯದಲ್ಲಿ ಯಾರೊಬ್ಬರ ಕುರಿತಂತೆ ಈ ಬಗೆಯಾದ ಸುಪ್ತ ಮನೋಭಾವನೆ ನಿಮ್ಮೊಳಗೆ ನಿಷ್ಕಾರಣವಾಗಿ ಕೊಳೆಯುತ್ತಿದ್ದರೆ ಅದಕ್ಕೆ ಇಂದೇ ತರ್ಪಣ ಕೊಡುವ ಬಗ್ಗೆ ತೆರೆದ ಮನಸ್ಸಿನಿಂದ ಒಮ್ಮೆ ಯೋಚಿಸಿ ನೋಡಲು ಇದು ಹೈ ಟೈಮ್.
ಮುಕ್ತ ಮನಸಿನಿಂದ , ಪ್ರಾಮಾಣಿಕ ಭಾವದಿಂದ, ಹೊಸ ದೃಷ್ಟಿಯಿಂದ, ಅಂಥವರತ್ತ ಒಮ್ಮೆ ನೋಡಿ. ಅದಕ್ಕೂ ಮುನ್ನ ಅಂಥಾ ವ್ಯಕ್ತಿಗಳ ಬಗ್ಗೆ, ಅವರೊಂದಿಗಿನ ಮಾನವ ಸಂಬಂಧಗಳ ಬಗ್ಗೆ ನಿಮ್ಮ ಮನದೊಳಗೆ ಕಾರಣವೇ ಇಲ್ಲದೇ ಹೊದ್ದಿರಬಹುದಾದ ಕರಿ ಮುಸುಕನ್ನು ಅನಾಮತ್ತು ಸರಿಸಿ ಶುಭ್ರ ಬೆಳದಿಂಗಳಿನ ದೃಷ್ಟಿ ಹರಿಸಿ ಮನದೊಳಗೇ ಮಂಥಿಸಿ ನೋಡಿ. ಯಾವ ಘನಕಾರಣಕ್ಕಾಗಿ ಇಷ್ಟುದಿನ ಆ ಮನುಷ್ಯನ ಬಗೆಗೆ ನನ್ನ ಮನಸ್ಸು ಹೀಗೆಲ್ಲಾ ಅಂತರ ಕಾಯ್ದುಕೊಳ್ಳುವಂತೆ ಪ್ರೇರೇಪಿಸಿತ್ತೆಂಬ ಬಗ್ಗೆ ನಿಮ್ಮ ಮನಸನ್ನೇ ಒಮ್ಮೆ ಖಾರವಾಗಿ ಪ್ರಶ್ನಿಸಿ. ಅದಕ್ಕುತ್ತರವಾಗಿ ಏನಾದರೂ ಗಂಭೀರವಾದ ಕಾರಣ ಅಥವಾ ಘನ ಉದ್ದೇಶಗಳೇ ಕಾಣದಿದ್ದಲ್ಲಿ….., ಹಿಂದೆ ಮುಂದೆ ನೋಡದೇ…ಇನ್ನುಮುಂದೆ ಎಲ್ಲರಂತೆ ಅವರನ್ನೂ ಟ್ರೀಟ್ ಮಾಡಲು ಅಡಿಯಿಡುತ್ತಲೇ ಬಹುದಿನಗಳಿಂದ ಮನದೊಳಗೆ ಕೊಳೆತಿರುವ ಅವ್ಯಕ್ತ ,ಅಸಂಬದ್ಧ ಕೊಳೆಯನ್ನು ಕೊಚ್ಚಿ ಸ್ನೇಹ ಸಂಬಂಧಗಳ ದಿಕ್ಕಿನತ್ತ ನವ ಮನ್ವಂತರದ ಅಧ್ಯಾಯ ಆರಂಭಿಸಲು ನಿಧಾನದ ಹೆಜ್ಜೆ ಆರಂಭಿಸಿ.
Ofcourse, ಹಾಗೆ ಮಾಡುವುದರಿಂದ ಯಾವ ಸಾಧನೆ, ಸಂಪತ್ತು ಸಂಭ್ರಮಗಳಿಲ್ಲದಿದ್ದರೂ ಕೊನೇಪಕ್ಷ ಅಲ್ಲಿಯವರೆಗೂ ನಮಗರಿವಿಲ್ಲದೇ ಅಂಟಿಕೊಂಡು ಬಂದಿದ್ದ ಸಣ್ಣಪುಟ್ಟ ಬಗ್ಗಡಗಳೆಲ್ಲಾ ಮನಸಿನಿಂದ ತೊಳೆದು, ಕೊಚ್ಚಿಹೋಗಿ ಅದು ಸ್ವಲ್ಪಮಟ್ಟಿಗಾದರೂ ಹಗುರಾಗಬಲ್ಲದು. ಹಾಗೆ ಮಾಡಲು ಪ್ರತಿಷ್ಠೆಗಳೆಂಬ ರೋಡ್ ಹಂಪ್ ಗಳು ಪದೇಪದೇ ನಮ್ಮನ್ನು ಅಡ್ಡಿಪಡಿಸುತ್ತಲೇ ಇರುತ್ತವೆ. ಆದರೆ ಹಳೆಯ ನಕಾರಾತ್ಮಕ ಕಳೆಗಳನ್ನೆಲ್ಲಾ ಕಿತ್ತು ಬಿಸಾಡಿ ಹೊಸಬೆಳಕಿನ ಹೊಸ ಹಾದಿಯಲ್ಲಿ ನಿರ್ಮಲ ಮನದಿಂದ ಜೀವನಪಯಣ ಸಾಗಿಸುವುದು ನಮ್ಮ ನಮ್ಮಆರೋಗ್ಯ ಮತ್ತು ನೆಮ್ಮದಿಯ ದೃಷ್ಟಿಯಿಂದ ಬೆಟರ್.
ಹೊಸವರ್ಷದ ಹೊಸಬೆಳಕು ನಮ್ಮೆಲ್ಲರಲ್ಲೂ ಧನಾತ್ಮಕ ಚಿಂತನೆಯ ಹೊಂಗಿರಣಗಳನ್ನು ಬೀರಲಿ.
೨೦೨೬ ರ ಹೊಸವರ್ಷದ ಶುಭಾಶಯಗಳು.
ಮರೆಯುವ ಮುನ್ನ
ಕಾರಣವೇ ಇಲ್ಲದೇ ಒಬ್ಬರನ್ನು ದ್ವೇಷಿಸುವುದು, ಅವರ ಏಳಿಗೆ ಬಗೆಗೆ ಅಸೂಯೆ ಪಡುವುದು, ಅವರ ಪ್ರತೀ ನಡೆ ನುಡಿಯಲ್ಲೂ ಕೊಂಕು ಹುಡುಕುವುದು, ಅವರು ಬಿದ್ದಾಗ ಸಂಭ್ರಮಿಸುವುದು…ಇವೆಲ್ಲವೂ ಎಲ್ಲಿ ಹುಟ್ಟುತ್ತವೆಯೋ ಆ ಜಾಗವನ್ನು ಅಲ್ಲೇ ಸುಟ್ಟುಹಾಕುವ ಪ್ರಬಲ ನೆಗೆಟೀವ್ ಆಯುಧಗಳಿದ್ದಂತೆ. ಹೀಗಾಗಿ ಇವುಗಳನ್ನು ನಮ್ಮೆದೆ ಗೂಡಲ್ಲಿ ಎಂಟ್ರಿ ಆಗಲು ಬಿಡಬಾರದು.
ಹಾಗೆಯೇ, ಅಹಮ್ಮು, ಅಂತಸ್ತು, ಅಸೂಯೆ, ಅಕಾರಣ, ಅಗ್ಗಳಿಕೆ, ಅಸ್ಪಷ್ಟತೆ, ಅರಿವಿನ ಕೊರತೆ, ಅಜ್ಞಾನ, ಅಂಧಕಾರ……ಈ ಯಾವುದೋ ಬಲವಾದ ಕಾರಣದಿಂದಲೇ ದೂರವಾಗಿದ್ದರೂ, ಆನಂತರ ಅಂತಹ ಸಂಬಂಧ ಕಳೆದುಕೊಳ್ಳಬಾರದಿತ್ತೆಂಬ ಪ್ರಾಮಾಣಿಕ ಪಶ್ಚಾತ್ತಾಪ ನಿಮ್ಮಲ್ಲಿ ಉಂಟಾಗಿದ್ದರೆ….ಸಮಯ ವ್ಯರ್ಥ ಮಾಡದೇ ಮುಂದಡಿ ಇಟ್ಟು ಒಣಗಿದ ಸ್ನೇಹದ ಬಳ್ಳಿಗೆ ನೀವೇ ನೀರೆರೆಯಲು ಪ್ರಯತ್ನಿಸಿ.
ಸ್ನೇಹ, ಪ್ರೀತಿ, ನಂಬಿಕೆ, ಹೊಂದಾಣಿಕೆಗಳೆಂಬ ಹೊಸಬೆಳಕಿನ ಕಿರಣಗಳು ಎಲ್ಲರ ಮನೆ- ಮನಗಳನ್ನು ಬೆಳಗಲಿ.

ಹಿರಿಯೂರು ಪ್ರಕಾಶ್.



