ಸರ್ಕಾರಿ ಅಧಿಕಾರಿಗಳೆಂದರೆ ರಾಜಕಾರಣಿಗಳ ಗುಲಾಮರೇ…….?
ನಮ್ಮ ಎಲ್ಲಾ ರಾಜಕೀಯ ಪಕ್ಷಗಳ ಕೆಲವು ಶಾಸಕರು , ಮಂತ್ರಿಗಳು ಅಥವಾ ಯಾವುದೇ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಸಾಮಾನ್ಯವಾಗಿ ಇರಬಹುದಾದ ದೊಡ್ಡ ಖಯಾಲಿ ಎಂದರೆ, ಕೆಲವೊಮ್ಮೆ ಸಾರ್ವಜನಿಕರೆದುರು ಆಪ್ತ ಚೇಲಾಗಳೆದುರು , ತಮ್ಮ ಪವರ್ ಪೌರುಷದ ಬಿಲ್ಡಪ್ ತೋರಿಸಲು ಸರ್ಕಾರಿ ಅಧಿಕಾರಿಗಳ ಮೇಲೆ ಅನಗತ್ಯ ದರ್ಪ ತೋರಿಸುವುದು, ಅವರನ್ನು ಎಲ್ಲರೆದುರು ಬಾಯಿಗೆ ಬಂದಂತೆ ನಿಂದಿಸುವುದು, ಅಶ್ಲೀಲ ಪದಗಳಿಂದ ಅವಮಾನ ಮಾಡುವುದು ಹಾಗೂ ಫೋನ್ ಕರೆಗಳಲ್ಲಿ ಧಂಕಿ ಹಾಕುವುದು.!!
ತಮ್ಮ ಈ ವೀರ ಪ್ರತಾಪ ಜಗಜ್ಜಾಹೀರಾಗಲೆಂದೇ ಒಂದಷ್ಟು ಜನ ಮೀಡಿಯಾ ಕ್ಯಾಮೆರಾ ಮೆನ್ ಗಳನ್ನೂ ಜೊತೆಯಲ್ಲೇ ಸದಾ ಇರುವಂತೆ ಆಯೋಜಿಸಿ ತಾನು ಹೇಗೆಲ್ಲಾ ರೋಪ್ ಹಾಕುತ್ತೇನೆಂಬ ಅದ್ಭುತ ದೃಶ್ಯವನ್ನು ಸೆರೆ ಹಿಡಿದು ಮಾರನೆಯ ದಿನ ಪತ್ರಿಕೆಗಳಲ್ಲಿ ದಪ್ಪ ದಪ್ಪ ಅಕ್ಷರಗಳಲ್ಲಿ ಪ್ರಚಾರವಾಗುವಂತೆ ನೋಡಿಕೊಳ್ಳುವ ಮಹಾನ್ ಪ್ರಚಾರಪ್ರಿಯ ರಾಜಕೀಯ ನಾಯಕರೂ ನಮ್ಮ ನಡುವೆ ಸಾಕಷ್ಟಿದ್ದು, ರಾಜಕಾರಣದಲ್ಲಿನ ಈ ಅರಸೊತ್ತಿಗೆಯ ವರ್ತನೆಗೆ ಕೆಟ್ಟಪರಂಪರೆಯೇ ಇದೆ.
ಕಳೆದ ವಾರ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಗೌಡ ರವರನ್ನು ಅಲ್ಲಿನ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅತ್ಯಂತ ಅವಾಚ್ಯ ಹಾಗೂ ಕೀಳುಪದಗಳಿಂದ ನಿಂದಿಸಿರುವುದು ಎಲ್ಲೆಡೆ ವೈರಲ್ ಆಗಿ ಆತನ ವಿರುದ್ಧ ಜಾಲತಾಣಗಳಲ್ಲಿ ಪ್ರತಿಭಟನೆ ಜೋರಾದ ಕೂಡಲೇ ತಲೆಮರೆಸಿಕೊಂಡಿದ್ದಾರೆ. ಆ ಅಧಿಕಾರಿ ಒಬ್ಬ ಹೆಣ್ಣುಮಗಳು ಎಂಬುದನ್ನೂ ನೋಡದೇ ಅಸಭ್ಯವಾಗಿ ಆವಾಜ಼್ ಹಾಕಿ ಕಚೇರಿಗೆ ಬೆಂಕಿ ಹಾಕಿಸುತ್ತೇನೆಂದಿದ್ದ ಈತನ ದುರ್ವರ್ತನೆಯ ಮಾತುಗಳು ಒಬ್ಬ ನಾಗರಿಕನ ಬಾಯಿಂದ ಬರುವಂಥಾದ್ದಲ್ಲ.
ಇದೇ ಹಾದಿಯಲ್ಲಿ ಕೆಲ ದಿನಗಳ ಹಿಂದೆ ಮಾಗಡಿ ಶಾಸಕ ಬಾಲಕೃಷ್ಣ ಕೂಡಾ ಮಾಗಡಿ ತಹಶೀಲ್ದಾರ್ ರವರನ್ನು ಜನರೆದುರೇ ಹೀನಾಯವಾಗಿ ಬೈಯ್ದು “ನಿಮ್ಮ ಮೂತಿಗೆ ಗುದ್ದುವೆ ಎಂದು ಧಂಕಿ ಹಾಕಿದ್ದಲ್ಲದೇ, “ಜನರಿಂದ ನಿನಗೆ ಚಪ್ಪಲಿಯಲ್ಲಿ ಹೊಡೆಸುವೆ ” ಎಂದು ಅಸಭ್ಯವಾಗಿ ಬೆದರಿಕೆ ಹಾಕಿದ್ದ ಘಟನೆಯೂ ಮಾಧ್ಯಮಗಳಲ್ಲಿ ವರದಿಯಾಯಿತು.
ಇನ್ನು ಶಾಸಕರು ,ಮಂತ್ರಿಗಳು ಭಾಗವಹಿಸುವ. ಯಾವುದೇ ಸಭೆ- ಸಮಾರಂಭ ಅಥವಾ ಕೆಡಿಪಿ, ದಿಷಾ, ವಿವಿಧ ಪ್ರಗತಿ ಪರಿರಿಶೀಲನಾ ದಂತಹ ಸರ್ಕಾರಿ ಮೀಟಿಂಗುಗಳಲ್ಲಿ ಅಧಿಕಾರಿಗಳು ಉಸಿರುಬಿಗಿ ಹಿಡಿದೇ ಭಾಗವಹಿಸುವ ವಾತಾವರಣವಿದೆ. ಅಂತಹ ಸಭೆಗಳಲ್ಲಿ ಮೂಲ ವಿಷಯದಿಂದ ಹೊರತಾದ ರಾಜಕೀಯವನ್ನು ಮನದಲ್ಲಿಟ್ಟುಕೊಂಡು ಮೀಡಿಯಾಗಳೆದುರು ಅಬ್ಬರದ ದನಿಯಲ್ಲಿ ಅಸಭ್ಯ ಭಾಷೆ ಬಳಸಿ ಅಧಿಕಾರಿಗಳನ್ನು ನಿಂದಿಸುವುದೇ ಇವರ ಮೂಲ ಉದ್ದೇಶವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಸರ್ಕಾರಿ ಅಧಿಕಾರಿಗಳನ್ನು ಗುಲಾಮರಂತೆ ಕಾಣುವ ಶಾಸಕಾಂಗದ ಮನೋಭಾವಕ್ಕೆ ದೀರ್ಘ ಇತಿಹಾಸವೇ ಇದೆ. ದಶಕಗಳ ಹಿಂದೆ ಜೆ.ಎಚ್ . ಪಟೇಲರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದ ಸಭೆಯೊಂದರಲ್ಲಿ ಪೊಲೀಸ್ ಅಧಿಕಾರಿಯನ್ನು ” ಏಯ್ ಕೆಲಸಕ್ಕೆ ಬಾರದ ಈಡಿಯಟ್ ” ಎಂದು ಎಲ್ಲರೆದುರೇ ಗದರಿದ್ದರು. ಇನ್ನು ಈಗಿನ ಮುಖ್ಯಮಂತ್ರಿಯಂತೂ ಉನ್ನತ ಪೊಲೀಸ್ ಅಧಿಕಾರಿಯ ಮೇಲೂ ಕೈ ಎತ್ತುವ ದರ್ಪ ತೋರುತ್ತಾರೆ, ವೇದಿಕೆ ಮೇಲೆ ಕುಳಿತ ಜಿಲ್ಲಾಧಿಕಾರಿಯನ್ನೂ ಬೈಯ್ದು ಅಲ್ಲಿಂದ ಬೇರೆಡೆಗೆ ಕೂರುವಂತೆ ಮಾಡಿ ಅಪಮಾನವನ್ನೂ ಮಾಡುತ್ತಾರೆ.
ಈ ಹಿಂದೆ ಸಚಿವರಾಗಿದ್ದ ಮಾಧುಸ್ವಾಮಿಯವರಂತೂ ಒಂದು ಸಭೆಯಲ್ಲಿ ಎಂಜಿನಿಯರ್ ಒಬ್ಬರಿಗೆ ” ನೀನು ಹೆಂಡತಿ ಸೀರೆ ಒಗೆಯಲಿಕ್ಕೆ ಲಾಯಕ್ಕು ” ಎಂದೇ ಝಾಡಿಸಿದ್ದರು. ಶಾಸಕ ಎನ್. ರವಿಕುಮಾರ್ ಕಲ್ಬುರ್ಗಿ ಡಿ.ಸಿ.ಯವರನ್ನು ಪಾಕಿಸ್ತಾನದಿಂದ ಬಂದವರೆಂದು ಹಿಯ್ಯಾಳಿಸಿದ್ದೂ ಇನ್ನೂ ಹಸಿರಾಗಿದೆ. ಉಳಿದಂತೆ ಹಲವು ಶಾಸಕರು ತಮ್ಮ ಅಧೀನ ಅಧಿಕಾರಿಗಳನ್ನು ತೀರ ಸೊಂಟದ ಕೆಳಗಿನ ಭಾಷೆ ಬಳಸಿ ಧಂಕಿ ಹಾಕುವ ಆಡಿಯೋಗಳು ವ್ಯಾಪಕವಾಗಿ ಜಾಲತಾಣಗಳಲ್ಲಿ ಆಗಾಗ್ಗೆ ಹರಿದಾಡುತ್ತಲೇ ಇವೆ.
ಶಾಸಕರು, ಮಂತ್ರಿಗಳನ್ನು ಬಿಡಿ ! ಅವರ ಯಃಕಶ್ಚಿತ್ ಚಂಚ-ಚೇಲಾಗಳಾದವರೂ ಸಹಾ ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುವ ಮಟ್ಟಕ್ಕೆ , ಕೊಲೆ ಬೆದರಿಕೆ ಹಾಕುವ ರೇಂಜಿಗೆ ಹಾಗೂ ಆಡಳಿತದ ನಿರ್ದೇಶನ ನೀಡುವ ಮಟ್ಟಕ್ಕೆ ಎಗರಾಡುವ ಸೀನ್ಗಳು ನಿತ್ಯ ನಿರಂತರ.!
ಈ ಹಿನ್ನೆಲೆಯಲ್ಲಿ ನನ್ನ ಮೂಲಭೂತ ಪ್ರಶ್ನೆಯೆಂದರೆ, ಈ ರಾಜಕೀಯ ಕ್ಷೇತ್ರದವರು ಸರ್ಕಾರಿ ಅಧಿಕಾರಿಗಳನ್ನು ಹೀಗೆಲ್ಲಾ ವೈಯಕ್ತಿಕವಾಗಿ, ಹೀನಾಯವಾಗಿ ನಿಂದಿಸಬಹುದಾದ ನಿಯಮಾವಳಿಗಳು ಆಡಳಿತದಲ್ಲಿವೆಯೇ…? ಅಧಿಕಾರಿಗಳೆಂದರೆ ತಮ್ಮ ಗುಲಾಮರೆಂದು ಭಾವಿಸಿಯೇ ಮಾತನಾಡುವ ಅವರ ದರ್ಪವನ್ನು ಅಧಿಕಾರಿಗಳು ಮೌನವಾಗಿ ಸಹಿಸಲೇಬೇಕೆ..? ತಮ್ಮ ನಿರೀಕ್ಷೆಗೆ ತಕ್ಕಂತೆ ಒಬ್ಬ ಅಧಿಕಾರಿ ಕೆಲಸ ಮಾಡದಿದ್ದರೆ ಅದನ್ನು ಹೇಳುವ ರೀತಿಗೂ, ಕ್ತಮ ತೆಗೆದುಕೊಳ್ಳುವ ವಿಧಾನಕ್ಕೂ ಒಂದು ನೀತಿ- ನಿಯಮ ಸಂಯಮ, ಮಾನ ಮರ್ಯಾದೆ ಅಂತ ಕಾನೂನುಗಳಲ್ಲಿ ಇರುವುದಿಲ್ಲವೇ.?
ಕೇವಲ ಅಲ್ಪಕಾಲ ಅಧಿಕಾರದಲ್ಲಿರುವ ಒಬ್ಬ ವಿದ್ಯಾವಂತ ಅಥವಾ ಅವಿದ್ಯಾವಂತ ಶಾಸಕ, ಸಚಿವ ಅಥವಾ ಒಬ್ಬ ರಾಜಕೀಯ ಪುಢಾರಿ , ಕನಿಷ್ಠ ಮುವ್ವತ್ತು ವರ್ಷ ಸೇವೆಯಲ್ಲಿರಬಹುದಾದ ಉನ್ನತ/ ಅರ್ಹ ಶಿಕ್ಷಣ ಪಡೆದೇ ಉದ್ಯೋಗಕ್ಕೆ ಸೇರಿರುವ ಸರ್ಕಾರಿ ನೌಕರನನ್ನು ಸಾರ್ವಜನಿಕವಾಗಿ ಹೀನಾಯವಾಗಿ ನಿಂದಿಸುವ ಈ ಕೆಟ್ಟ ಪರಂಪರೆಗೆ ಕೊನೆಯೇ ಇಲ್ಲವೇ…? ಅದಕ್ಷ, ಅಸಮರ್ಥ , ತಪ್ಪಿತಸ್ಥ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಅಪಮಾನ ಮಾಡಿಯೇ ಸರಿಪಡಿಸಬೇಕೇ…?
ಈ ಟಾಪಿಕ್ಕು ಒಂದೆಡೆ ಇರಲಿ. ಇದು ಕೇವಲ ಒನ್ಸೈಡೆಡ್ ವರ್ಷನ್ನು..! ಈಗ ಇನ್ನೊಂದು ಮುಖದ ಮುಖ್ಯವಿಷಯಕ್ಕೆ ನೇರವಾಗಿ ಬರುತ್ತೇನೆ.
ಇಂದಿಗೂ ನನಗೆ ಉತ್ತರ ಸಿಗದ ಪ್ರಶ್ನೆಯೆಂದರೆ, ಕೆಲವು ರಾಜಕಾರಣಿಗಳು , ಶಾಸಕರು, ಮಂತ್ರಿಗಳು ಅಥವಾ ರಾಜಕೀಯ ನಾಯಕರ ಚೇಲಾಗಳು ತಮ್ಮ ನಿರೀಕ್ಷೆಗೆ ತಕ್ಕ ಕೆಲಸವಾಗದಿದ್ದರೆ, ತಮ್ಮ ಮಾತು ನಡೆಯದಿದ್ದರೆ ನಿಯಮಾವಳಿಗಳಲ್ಲಿರುವಂತೆ ಅಧಿಕಾರಿಯ ವೃತ್ತಿಯ ವ್ಯಾಪ್ತಿಯೊಳಗೆ ಏನು ಬೇಕಾದರೂ ಕ್ರಮ ತೆಗೆದುಕೊಳ್ಳಲಿ, ಮಾತನಾಡಲಿ. ಆದರೆ ಅದಕ್ಕಾಗಿ ಸಾರ್ವಜನಿಕವಾಗಿ ಎಲ್ಲೆಮೀರಿ ಅಸಭ್ಯವಾಗಿ, ಅಶ್ಲೀಲವಾಗಿ ನಿಂದಿಸುತ್ತಿದ್ದರೂ ಕೆಲವು ಅಧಿಕಾರಿಗಳೇಕೆ ಅದನ್ನು ತಕ್ಷಣವೇ ಪ್ರತಿಭಟಿಸದೇ ತಮ್ಮ ಸ್ಚಾಭಿಮಾನ, ಆತ್ಮಗೌರವ ಒತ್ತೆ ಇಟ್ಟವರಂತೆ ಮೌನವಾಗಿ ಸಹಿಸಿಕೊಳ್ಳುತ್ತಾರೆ..?
ನನಗನಿಸಿದಂತೆ ಬಹುಶಃ ಅದಕ್ಕೆ ಒಂದೆರಡು ಕಾರಣಗಳಲ್ಲದೇ ಬೇರೇನೂ ಇರಲಿಕ್ಕೆ ಛಾನ್ಸೇ ಇಲ್ಲ .
ಆ ರೀತಿ ರಾಜಕೀಯದವರಿಂದ ಕೆಟ್ಟದಾಗಿ ಬಯ್ಯಿಸಿಕೊಳ್ಳುವ ಅಧಿಕಾರಿ ಅಸಮರ್ಥನಾಗಿರಬಹುದು ಇಲ್ಲವೇ ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ನಿಷ್ಠೆಯಿಂದ ನಿರ್ವಹಿಸದೇ ಪ್ರಯೋಜನಕ್ಕೆ ಬಾರದವನಾಗಿರಬಹುದು.
ಅಂತಹ ಅಧಿಕಾರಿ ಜನವಿರೋಧಿಯಾಗಿರಬಹುದು, ಅವನ ಮೇಲೆ ಕರ್ತವ್ಯ ಲೋಪವೆಸಗುವ, ಜನರಿಗೆ ಸ್ಪಂದಿಸದ, ಅದಕ್ಷ ಎಂಬ ಸಾಕಷ್ಟು ದೂರುಗಳು ಬಂದಿರಬಹುದು. ಇಲ್ಲವೇ ಆತ ತಮ್ಮ ವಿರೋಧಪಕ್ಷದವರ ಕಡೆಯವನು ಎಂಬ ಗುಮಾನಿಯೂ ಇರಬಹುದು.
ಎಲ್ಲಕ್ಕಿಂತ ಮಿಗಿಲಾಗಿ ಅಂಥಾ ಅಧಿಕಾರಿ ಭ್ರಷ್ಟಾತಿಭ್ರಷ್ಟನಾಗಿರಬಹುದು. ಸಂಬಳಕ್ಕಿಂತ ಗಿಂಬಳದ ಎಂಜಲು ತಿಂದೇ ಅಭ್ಯಾಸವಿರುವ ಪರಮ ಲಂಚಕೋರನಾಗಿರಬಹುದು. ಸಿಕ್ಕಿದ್ದನ್ನೆಲ್ಲಾ ದೋಚುವ ಅಭ್ಯಾಸದವನಾಗಿದ್ದು ,ಅಂಥವನ ಅನೇಕಾನೇಕ ದೌರ್ಬಲ್ಯಗಳು ರಾಜಕೀಯದವರಿಗೆ ಗೊತ್ತಿರಬಹುದು.
ಇದಾವುದೂ ಇಲ್ಲದಿದ್ದರೂ ಸುಮ್ಮನೇ ಎದುರು ಮಾತನಾಡಿ ತಾನೇಕೆ ಅವರ ಕೆಂಗಣ್ಣಿಗೆ ಗುರಿಯಾಗಿ ದೂರದ ನೀರು ನೆರಳಿಲ್ಲದ ಊರಿಗೋ ಅಥವಾ ಕೆಲಸಕ್ಕೆ ಬಾರದ ಪೋಸ್ಟಿಂಗಿಗೋ ಎತ್ತಾಕಿಸಿಕೊಳ್ಳಬೇಕು ” ಎನ್ನುವ ಜಾಣತನದಿಂದ ಉಹಿಸಿಕೊಳ್ಳುವ ಅಭ್ಯಾಸಕ್ಕೆ ಒಗ್ಗಿರಲೂ ಬಹುದು.
ಈಗ ಹೇಳಿ..? ಆತ್ಮಗೌರವ, ಸ್ವಾಭಿಮಾನ, ಪ್ರಾಮಾಣಿಕತೆ ಹಾಗೂ ನಿಷ್ಠೆ ಬದ್ಧತೆಯಿಂದ ಯಾವ ಎಂಜಲುಕಾಸಿಗೂ ಆಸೆಪಡದ ಒಬ್ಬ ಸರ್ಕಾರಿ ಅಧಿಕಾರಿ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಾ ಈ ಮೇಲಿನ ಯಾವ ವ್ಯಾಪ್ತಿಗೂ ಬರುವುದಿಲ್ಲವೆಂದರೆ ಅಂಥವರು ರಾಜಕೀಯದ ಯಾವ ದೊಣೆನಾಯಕನಿಗೂ ಹೆದರುವ ಅಥವಾ ಅವರಿಂದ ಸಾರ್ವಜನಿಕವಾಗಿ ನಿಂದಿಸಿಕೊಳ್ಳುವ, ಅಪಮಾನಕ್ಕೊಳಗಾಗುವ ದರ್ದು ಇದೆಯೇ…?
ನೆನಪಿಡಿ….ಸಾರ್ವಜನಿಕ ಬದುಕಿನಲ್ಲಿ ನಾವು ಯಾರಿಂದಲಾದರೂ ತೀರ ಕೆಟ್ಟದಾಗಿ ಹಿಯ್ಯಾಳಿಸಿಕೊಂಡು ವೈಯಕ್ತಿಕವಾಗಿ ಅಪಮಾನಕ್ಕೊಳಗಾಗುತ್ತಿದ್ದರೂ ಬಾಯಿಮುಚ್ಚಿಕೊಂಡು ತೆಪ್ಪಗಿರುತ್ತೇವೆಂದರೆ , ಅಲ್ಲಿ ಖಂಡಿತಾ ನಮ್ಮ ದೌರ್ಬಲ್ಯಗಳ ಪಾಲು ದೊಡ್ಡದಿದೆ ಎಂದರ್ಥ. ಈ ವೀಕ್ನೆಸ್ಸನ್ನು ಹಿಡಿದೇ ಶಾಸಕಾಂಗ ಕಾರ್ಯಾಂಗದ ಮೇಲೆ ಎಲ್ಲೆ ಮೀರಿ ಸವಾರಿ ಮಾಡುತ್ತಿರುವುದು.
ಜೀವನದಲ್ಲಿ ದುಡ್ಡು ಮತ್ತು ಆತ್ಮಗೌರವಗಳಿಗೆ ನಾವು ಕೊಡುವ ಆದ್ಯತೆಗಳ ಆಧಾರದ ಮೇಲೆ ಇಂತಹಾ ಘಟನೆಗಳು ನಿರಂತರವಾಗಿ ಜರುಗುತ್ತಲೇ ಇರುತ್ತವೆ.
ಏನೇ ಆದರೂ ರಾಜಕೀಯದಲ್ಲೂ ಸಭ್ಯರು, ಸರ್ಕಾರಿ ಅಧಿಕಾರಿಗಳಲ್ಲೂ ಪ್ರಾಮಾಣಿಕರು ಇನ್ನೂ ಅಲ್ಲಲ್ಲಿ ಕ್ರಿಯಾಶೀಲರಾಗಿರುವುದರಿಂದಲೇ ನೈತಿಕತೆಯ ಕಾಲಚಕ್ರ ಎಲ್ಲ ದುಷ್ಟತನಗಳನ್ನೂ ಎದುರಿಸಿ ಮುನ್ನಡೆಯುತ್ತಿರುವುದು.
ಒಬ್ಬ ಮನುಷ್ಯ ತನ್ನ ಬದುಕಿನಲ್ಲಿ ಸಾವಿರಾರು ಕೋಟಿ ಕ್ರಮಬದ್ಧವಾಗಿ ಅಥವಾ ಅಕ್ರಮವಾಗಿ ಸಂಪಾದಿಸಬಹುದು. ಆದರೆ ಸ್ವಾಭಿಮಾನ ಆತ್ಮಗೌರವವೆಂಬುದನ್ನು ಕಳೆದುಕೊಂಡು ಸಂಪಾದಿಸಿ ಬದುಕುವುದಿದೆಯಲ್ಲಾ…..ಅದು ಅತ್ಯಂತ ನಿಕೃಷ್ಠವಾದ ಬದುಕು. ಸಾರ್ವಜನಿಕವಾಗಿ ತನ್ನದಲ್ಲದ ತಪ್ಪಿಗೆ ಉದ್ದೇಶಪೂರ್ವಕವಾಗಿ ನಿಂದನೆಗೊಳಗಾದಾಗ ಆತನೊಳಗೆ ಒಂದು ಸಣ್ಣಮಟ್ಟದ ಸ್ವಾಭಿಮಾನದ ಸ್ಪಾರ್ಕು ಕೂಡಾ ಸಿಡಿಯಲಿಲ್ಲವೆಂದರೆ ಅದು ಅಪಮಾನ ಮಾಡುವವರ ತಪ್ಪಂತೂ ಅಲ್ಲ.
ಸರ್ಕಾರ ದಕ್ಷತೆಯಿಂದ ನಡೆಸುವುದು ಎಂದರೆ ಜನರೆದುರು ತೋರಿಕೆಗಾಗಿ, ಮೀಡಿಯಾಗಳಲ್ಲಿ ಸಿಗುವ ಒಣಬಿಲ್ಡಪ್ ಗಾಗಿ , ಹುಸಿಪ್ರಚಾರಕ್ಕಾಗಿ , ರಾಜಕೀಯ ಕಾರಣಕ್ಕಾಗಿ ಅಥವಾ ಹಿತ್ತಾಳೆ ಕಿವಿಯಾಗಿ ಕಾರ್ಯಾಂಗದ ಮೇಲೆ ದಬ್ಬಾಳಿಕೆ ಮಾಡುವುದಷ್ಟೇ ಅಲ್ಲ. ಅದಕ್ಕಿಂತಲೂ ಬೇರೆಯದೇ ಆದ ಸಭ್ಯ ಸೌಜನ್ಯಯುತ ದಾರಿಗಳಿವೆ. “ಕಾರ್ಯಾಂಗವೆಂದರೆ ತನ್ನ ಗುಲಾಮರಲ್ಲ” ಎಂಬ ಸರಳ ಸತ್ಯವನ್ನು ಅರಿಯುವ ಯತ್ನವನ್ನು ಶಾಸಕಾಂಗ ಮಾಡಲಿ.
ಯಾರೇ ಆಗಲೀ ಮೊದಲು ತನ್ನನ್ನು ತಾನು ಸ್ವಚ್ಛವಾಗಿಟ್ಟುಕೊಂಡು ಆನಂತರ ಊರನ್ನು ಸ್ವಚ್ಛಮಾಡುವ ಕಡೆ ಗಮನಹರಿಸಿದಲ್ಲಿ ಒಳ್ಳೆಯ ಫಲಿತಾಂಶ ಬಂದೀತು…!
ಪ್ರೀತಿಯಿಂದ…..

ಹಿರಿಯೂರು ಪ್ರಕಾಶ್.








