ಅದೊಂದು ಸೋಮವಾರದ ದಿನ. ರಾಜಕಾರ್ಯಗಳಿಗೆ ರಜೆ ಇದ್ದಿದ್ದರಿಂದ ತಮ್ಮ ಇಬ್ಬರೂ ಪತ್ನಿಯರೊಂದಿಗೆ ಬಸವಣ್ಣನವರು ಬಿಜ್ಜಳ ಮಹಾರಾಜರು ಕಟ್ಟಿಸುತ್ತಿದ್ದ ವಿಶಾಲ ಭವನವನ್ನು ನೋಡಲು ಹಾಗೂ ಹತ್ತಿರದಲ್ಲಿಯೇ ಇದ್ದ ಶಿವ ಕ್ಷೇತ್ರದ ದರ್ಶನ ಪಡೆಯಲು ತಮ್ಮ ಸಾರೋಟಿನಲ್ಲಿ ಹೊರಟಿದ್ದರು.
ಇನ್ನೇನು ಮಾರ್ಗ ಮಧ್ಯದಲ್ಲಿದ್ದ ಹೊಲಗೇರಿಯನ್ನು ದಾಟಿ ಹೋಗುತ್ತಿರುವಾಗ ಅವರಿಗೆ ತಮ್ಮ ಪಾದರಕ್ಷೆಯ ಉಂಗುಷ್ಟ ಸಡಿಲವಾಗಿರುವುದು ನೆನಪಿಗೆ ಬಂತು. ಕೆಲವೇ ದಿನಗಳಲ್ಲಿ ಹೊಸ ಪಾದರಕ್ಷೆಗಳ ಅವಶ್ಯಕತೆ ಉಂಟಾಗುವ ಕಾರಣ ಪಾದರಕ್ಷೆಗಳನ್ನು ತಯಾರಿಸುವ ವೃತ್ತಿಯಲ್ಲಿರುವ ಸಮಗಾರ ಹರಳಯ್ಯನವರನ್ನು ಭೇಟಿಯಾಗಿ ಬಿಟ್ಟರೆ ಕೆಲಸ ಪೂರೈಸುತ್ತದೆ ಎಂದು ಭಾವಿಸಿದ ಅವರು ಸಾರೋಟನ್ನು ನಿಲ್ಲಿಸಲು ಹೇಳಿದರು.
ಊರ ಹೊರಗೆ ಕೆಳ ವರ್ಗದವರು ಮಾತ್ರ ವಾಸಿಸುತ್ತಿದ್ದ ಹೊಲಗೇರಿಯ ಒಳಗೆ ಸಮಗಾರ ಹರಳಯ್ಯನವರನ್ನು ಭೇಟಿಯಾಗಲು ಹೊರಟ ಅವರನ್ನು ಅವರ ಸಾರೋಟಿನ ಸಾರಥಿ ಬೇಡ ಎಂದು ಅದೆಷ್ಟೇ ಹೇಳಿದರೂ ಕೇಳದೆ ಹೊಲೆಯರ ಓಣಿಯ ಒಳಹೊಕ್ಕ ಅವರು ಅಲ್ಲಿಯೇ ಇದ್ದ ಪುಟ್ಟ ಬಾಲಕನಿಗೆ ಹರಳಯ್ಯನ ಮನೆಯ ದಾರಿ ಕೇಳಿದರು.
ಕುದುರೆ ಗಾಡಿಯಲ್ಲಿ ಬಂದ ಅತ್ಯುತ್ತಮ ಪೋಷಾಕನ್ನು ಧರಿಸಿದ ಭವ್ಯವಾದ ವ್ಯಕ್ತಿತ್ವದ ಅವರನ್ನು ಕಂಡು ಭಯ ಭಕ್ತಿಯಿಂದ ಬೆನ್ನು ಬಾಗಿಸಿದ ಆ ಬಾಲಕ ಅವರಿಗೆ ದಾರಿ ತೋರುತ್ತ ಮುನ್ನಡೆದ. ಪ್ರತಿ ಮನೆಯ ಮುಂದೆ ಕಸ ಕಡ್ಡಿಗಳಿಲ್ಲದೆ ಸ್ವಚ್ಛವಾಗಿದ್ದರೂ ಕೂಡ ಅಲ್ಲಿಯೇ ಹರಿಯುತ್ತಿದ್ದ ಚರಂಡಿಯ ನೀರು ಮೂಗು ಮುಚ್ಚುವಂತೆ ನಾರುತ್ತಿತ್ತು. ಅಲ್ಲಲ್ಲಿ ಪ್ರಾಣಿಗಳನ್ನು ಕಡಿದ ನಂತರದ ಎಲುಬಿನ ಅವಶೇಷಗಳು ಗುಡಿಸಿದ ಕಸದಲ್ಲಿ ಕಾಣುತ್ತಿದ್ದವು. ಇದಾವುದನ್ನೂ ರಕ್ಷಿಸದೆ ಕೇವಲ ಹರಳಯ್ಯನವರ ಮನೆಯ ಕಡೆ ಹೊರಟ ಬಸವಣ್ಣನವರಿಗೆ ಓಣಿಯ ಕೊನೆಯ ಮೂಲೆಯಲ್ಲಿ ಇದ್ದ ಸುಣ್ಣ ಬಣ್ಣದ ಸಾರಣೆಯಿಂದ ಕಂಗೊಳಿಸುತ್ತಿದ್ದ ಮನೆ ಕಾಣಿಸಿತು. ಮನೆಯ ಅಂಗಳ ಸಂಪೂರ್ಣ ಸ್ವಚ್ಛವಾಗಿದ್ದು ಸಗಣಿಯಿಂದ ಸಾರಿಸಲ್ಪಟ್ಟಿದ್ದು ಕೆಮ್ಮಣ್ಣಿನ ಪಟ್ಟಿಯನ್ನು ಬೆಳೆಯಲಾಗಿತ್ತು. ತಳಿ ಹೊಡೆದು ರಂಗೋಲಿ ಹಾಕಿದ್ದ ಅಂಗಳದ ಒಂದು ಮೂಲೆಯಲ್ಲಿ ಚಪ್ಪಲಿ ಹೊಲಿಯುವ ಕಾಯಕಕ್ಕೆ ಅವಶ್ಯಕವಾದ ಸಾಮಗ್ರಿಗಳು ನೀರಿನ ಕುಲಾವಿ, ಅರ್ಧ ತಯಾರಿಸಿದ ಚಪ್ಪಲಿಗಳು ಎಲ್ಲವೂ ಜತನವಾಗಿ ಹೊಂದಿಸಲ್ಪಟ್ಟಿದ್ದವು. ಎಲ್ಲ ಕಡೆ ಶುದ್ಧತೆಯೇ ತಾಂಡವ ವಾಡುತ್ತಿದ್ದ ಆ ಮನೆಯ ನಿರ್ಮಲ ವಾತಾವರಣವನ್ನು ಕಂಡು ಪುಳಕಗೊಂಡ ಬಸವಣ್ಣನವರು ತಾವು ಬಂದ ಕೆಲಸವನ್ನೇ ಮರೆತು ನಿಂತಿದ್ದರೆ ಆ ಬಾಲಕ ಜೋರಾಗಿ ಕೂಗಿ ಕರೆದು ಮನೆಯವರನ್ನು ಎಚ್ಚರಿಸಿದ.
ಬಾಲಕನ ಕರೆಯನ್ನು ಕೇಳಿ ಹೊರಬಂದ ಹರಳಯ್ಯನವರಿಗೆ ಅತ್ಯಾಶ್ಚರ್ಯವಾಗಿದ್ದು ಬಿಜ್ಜಳ ಮಹಾರಾಜನ ಆಸ್ಥಾನದ ಮಹಾಮಂತ್ರಿಯಾದ ಅಣ್ಣ ಬಸವಣ್ಣನವರು ತಮ್ಮ ಮನೆಗೆ ಪಾದ ಬೆಳೆಸಿದ್ದಾರೆ ಎಂಬ ವಿಷಯಕ್ಕೆ.
ಓಡೋಡಿ ಬಂದು ಶಿರಬಾಗಿ ನಮಿಸಿ ಬಸವಣ್ಣನವರನ್ನು ಕುರಿತು ಹೇಳಿದರೆ ನಾನೇ ಬಂದು ತಮ್ಮನ್ನು ಕಾಣುತ್ತಿದ್ದೆ ಅಣ್ಣನವರೇ ಎಂದು ಸವಿನಯದಿಂದ ಕೇಳಿದಾಗ ಕಾರ್ಯನಿಮಿತ್ತ ಹೊರಟಿದ್ದೆ. ತಮ್ಮನ್ನು ಕಂಡು ಪಾದ ರಕ್ಷೆಗಳನ್ನು ಮಾಡಿಸುವ ನೆನಪಾಗಿ ಇತ್ತ ಬಂದೆ ಏಕೆ ಬರಬಾರದೇ ಹರಳಯ್ಯನವರೇ ಎಂದು ಬಸವಣ್ಣನವರು ಅಷ್ಟೇ ಪ್ರೀತಿಪೂರ್ವಕವಾಗಿ ಕೇಳಿದರು.
ಅಯ್ಯೋ ಅದು ಹಾಗಲ್ಲ ತಾವು ಮಹಾಮಂತ್ರಿಗಳು. ತಮ್ಮಂಥವರು ನಮ್ಮ ಕೇರಿಗೆ ಬರುವುದು ಬಡವನ ಮನೆಗೆ ಭಾಗ್ಯವೇ ಬಂದಂತೆ ಆದರೆ ಇಲ್ಲಿಯ ಇರಸರಿಕೆಗಳು ತಮಗೆ ಅಸಹನೀಯ ಎಂಬ ಕಾರಣಕ್ಕೆ ಹಾಗೆ ಹೇಳಿದೆ. ದಯವಿಟ್ಟು ಕ್ಷಮಿಸಿ ಎಂದು ಹರಳಯ್ಯನವರು ಅಲವತ್ತುಕೊಂಡರು.
ಪರವಾಗಿಲ್ಲ ಹರಳಯ್ಯನವರೇ ಮನೆಗೆ ಬಂದ ಅತಿಥಿಗಳನ್ನು ಒಳಗೆ ಕರೆಯುವುದಿಲ್ಲವೇ ? ಎಂದು ಬಸವಣ್ಣನವರು ಕೇಳಲು ಸಂಕೋಚದಿಂದ ಹಿಡಿಯಾದ ಹರಳಯ್ಯನವರು ತಪ್ಪಾಯಿತು ಬುದ್ಧಿ ಒಳಗೆ ಬನ್ನಿ ಎಂದು ಅವರನ್ನು ಮನೆಯ ಒಳಗೆ ಕರೆ ತಂದರು. ಈಗಾಗಲೇ ಪತಿ ಯಾರೊಂದಿಗೆ ಮಾತನಾಡುತ್ತಿರಬಹುದು ಎಂಬ ಕುತೂಹಲದಿಂದ ಹೊರಬಂದ ಪತ್ನಿ ಕಲ್ಯಾಣಮ್ಮ ತನ್ನ ತಲೆಯ ಮೇಲಿನ ಸೆರಗನ್ನು ಸರಿಪಡಿಸಿಕೊಂಡು ಬಸವಣ್ಣನವರಿಗೆ ತಲೆಬಾಗಿ ನಮಿಸಿ ಒಳ ಹೋಗಿದ್ದಳು.
ದಂಪತಿಗಳಿಬ್ಬರು ತಮ್ಮ ಮನೆಯಲ್ಲಿದ್ದ ಹಳೆಯ ಕಟ್ಟಿಗೆಯ ಕುರ್ಚಿಯೊಂದನ್ನು ತಂದು ಒರೆಸಿ ಅದರ ಮೇಲೆ ಬಸವಣ್ಣನವರನ್ನು ಕೂರಿಸಿದರು., ಅಗಲವಾದ ತಟ್ಟೆ ಒಂದರಲ್ಲಿ ಉಸುಕನ್ನು ಹಾಕಿ ತಂದು ಕೊಟ್ಟ ಪತ್ನಿಯಿಂದ ಅದನ್ನು ಪಡೆದು ಬಸವಣ್ಣನವರ ಪಾದದ ಅಳತೆಯನ್ನು ಹರಳಯ್ಯನವರು ಗುರುತು ಹಾಕಿಕೊಂಡರು.
ಆ ಸಮಯದಲ್ಲಿ ಇಡೀ ಮನೆಯನ್ನು ನಿರುಕಿಸಿದ ಬಸವಣ್ಣನವರು ಅತ್ಯಂತ ಸ್ವಚ್ಛವಾದ ಮನೆಯ ಅಂದ ಚಂದವನ್ನು ಆಸ್ವಾದಿಸಿದರು. ಕೀಳು ವರ್ಗದವರ ಮನೆ ಎಂಬ ಯಾವುದೇ ಕುರುಹುಗಳಿಲ್ಲದ ಮನೆಯ ಶುಭ್ರತೆ ಅವರ ಮನವನ್ನು ಸೆಳೆಯಿತು. ಅನುಭವ ಮಂಟಪಕ್ಕೆ ಬಂದು ಅಲ್ಲಿನ ಶರಣರ ಜೊತೆಗಿನ ಅನುಭಾವದಲ್ಲಿ ಭಾಗಿಯಾಗಲು ಆ ದಂಪತಿಗಳನ್ನು ಆಹ್ವಾನಿಸಿದ ಬಸವಣ್ಣನವರು ಅಲ್ಲಿಂದ ಕಾಲ್ಕಿತ್ತರು.
ಮುಂದೆ ಹರಳಯ್ಯ ಹಾಗೂ ಕಲ್ಯಾಣಮ್ಮ ದಂಪತಿಗಳು ಲಿಂಗಾಂಗಗಳಾಗಿ ಶಿವಮತಕ್ಕೆ ಸೇರಿ ಕಲ್ಯಾಣದ ಅನುಭವ ಮಂಟಪದಲ್ಲಿ ಶರಣರ ದಂಪತಿಗಳಾಗಿ ಬದುಕನ್ನು ನಡೆಸಲಾರಂಭಿಸಿದರು. ಅವರ ಬದುಕಿನ ರೀತಿಯನ್ನು ಕಂಡು
ಕುಲದಲ್ಲಿ ಹೊಲೆಯನವ ಹೊಲಬಿನಲ್ಲಿ ಹೊಲೆಯಲ್ಲ
ಹೊಲೆಯ ನೆಲೆಬಲ್ಲ ಘನ ಶರಣ. ಹರಳಯ್ಯ
ನೆಲಸಿ ಕಲ್ಯಾಣಪುರದೊಳಗೆ
ತನು ಮನ ಧನ ಸವೆಸಿ ಮನೆಯ ಕಾಯಕ ಮಾಡಿ
ಅನುಭಾವಿಯಾದ ಹರಳಯ್ಯ… ಮಂಟಪಕ್ಕೆ ಮಣಿಮಾಲೆಯಾದ ಶಿವಮತಕೆ
ಎಂದು ಹರಳಯ್ಯನವರನ್ನು ಹಾಡಿ ಹರಸಿದ್ದಾರೆ ನಮ್ಮ ಶರಣರು.
ಅದೊಂದು ದಿನ ರಾಜಬೀದಿಯಲ್ಲಿ ನಡೆದು ಹೋಗುತ್ತಿದ್ದ ಬಸವಣ್ಣನವರು ತಮಗೆ ಎದುರಾಗಿ ಶರಣು ಎಂದು ಹೇಳಿದ ಹರಳಯ್ಯ ಹಾಗೂ ಅವರ ಪತ್ನಿಯನ್ನು ನೋಡಿ ಶರಣು ಶರಣಾರ್ಥಿ ಎಂದು ತಲೆ ಬಾಗಿಸಿ ಹೇಳಿದರು.ದಂಪತಿಗಳಿಗೆ ಗರ ಬಡಿದಂತಾಯಿತು….. ಮಹಾಮಹಿಮರಾದ ಬಸವಣ್ಣನವರು ತಮಗೆ ಶರಣು ಶರಣಾರ್ಥಿಯನ್ನು ಹೇಳುವುದೇ? ಎಂದು ಆ ದಂಪತಿಗಳು ಚಿಂತಿಸಿದರು ಕಳವಳದಿಂದ ಊಟ ಸೇರದೆ ನಿದ್ರೆ ಬಾರದೆ ಹೋಯಿತು.
ಕೊನೆಗೆ ತಮಗೆ ಒಂದು ಶರಣಾರ್ಥಿಯ ಹೊರೆಯನ್ನು ಹೊರಿಸಿದ ಬಸವಣ್ಣನವರ ಪಾದಗಳಿಗೆ ತಮ್ಮದೇ ತೊಡೆಯ ಚರ್ಮದಿಂದ ಚಪ್ಪಲಿಯನ್ನು ಮಾಡಿಕೊಡಲು ದಂಪತಿಗಳು ನಿರ್ಧರಿಸಿದರು.
ಅಂತೆಯೇ ಮುಂದಿನ ಕೆಲವೇ ದಿನಗಳಲ್ಲಿ ತಮ್ಮಿಬ್ಬರ ತೊಡೆಯ ಚರ್ಮವನ್ನು ತೆಗೆದು ಪಾದ ರಕ್ಷೆಗಳನ್ನು ಮಾಡಿ ಒಂದು ಬಿದಿರಿನ ಬುಟ್ಟಿಯಲ್ಲಿ ಇಟ್ಟುಕೊಂಡು ಬಸವಣ್ಣನವರ ಮನೆಗೆ ದಂಪತಿಗಳು ತಂದರು.
ದಂಪತಿಗಳ ನಡಿಗೆಯಲ್ಲಿನ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗುರುತಿಸಿದ ಬಸವಣ್ಣನವರು ಈ ಕುರಿತು ಪ್ರಶ್ನಿಸಿದಾಗ ತಮಗೆ ಒಂದು ಶರಣಾರ್ಥಿಯ ಹೊರೆಯನ್ನು ಹೊರಿಸಿದ ಬಸವಣ್ಣನವರ ಹೊರೆಯನ್ನು ಇಳಿಸಿಕೊಳ್ಳಲು ತಾವು ತಮ್ಮ ಇಬ್ಬರು ತೊಡೆಯ ಚರ್ಮದಿಂದ ಆವುಗೆಗಳನ್ನು ಮಾಡಿ ತಂದಿರುವುದಾಗಿ ಹರಳಯ್ಯನವರು ಉತ್ತರಿಸಿದರು.
ಇದನ್ನು ಕೇಳಿ ತಮ್ಮ ಎರಡು ಕಿವಿಗಳನ್ನು ಮುಚ್ಚಿಕೊಂಡು ಕಾಯಕದಲ್ಲಿಯೇ ಕೈಲಾಸವನ್ನು ಕಾಣುತ್ತಿರುವ ಶಿವಶರಣ ದಂಪತಿಗಳಾದ ನಿಮ್ಮ ತೊಡೆಯ ಚರ್ಮವನ್ನು ಕತ್ತರಿಸಿ ಮಾಡಿದ ಪಾದರಕ್ಷೆಗಳನ್ನು ನಾವು ಧರಿಸಬಹುದೇ? ಅಂತಹ ಮಹಾಪರಾಧ ನಮ್ಮಿಂದ ಸಾಧ್ಯವಿಲ್ಲ ಎಂದು ಆ ಎರಡು ಚಪ್ಪಲಿಗಳನ್ನು ಭಕ್ತಿ ಪೂರ್ವಕವಾಗಿ ನಮಿಸಿ ಅದನ್ನು ಅವರಿಗೆ ಮರಳಿಸಿದರು.
ಆ ಚಪ್ಪಲಿಗಳನ್ನು ಬಸವಣ್ಣನವರ ಆಶೀರ್ವಾದ ಎಂದು ಭಾವಿಸಿ ತಮ್ಮ ತಲೆಯ ಮೇಲೆ ಹೊತ್ತು ಮನೆಗೆ ತರುತ್ತಿದ್ದ ಸಮಯದಲ್ಲಿ ಅವುಗಳನ್ನು ನೋಡಿದ ಮಧುವರಸ ಮಂತ್ರಿಗಳು ಪಾದರಕ್ಷೆಗಳನ್ನು ನೋಡಿ ಏನಾಯ್ತು ಎಂದು ಕೇಳಿದರು. ಬಸವಣ್ಣನವರಿಗಾಗಿ ಮಾಡಿ ತಂದ ಪಾದರಕ್ಷೆಗಳನ್ನು ಅವರು ತೊಡಲು ನಿರಾಕರಿಸಿದರು ಎಂಬುದನ್ನು ತಿಳಿದಾಗ ತಾನು ಅವುಗಳನ್ನು ಮೆಟ್ಟಲೇಬೇಕು ಎಂಬ ಅಪೇಕ್ಷೆ ಹುಟ್ಟಿ ಹರಳಯ್ಯನವರು ಪರಿಪರಿಯಾಗಿ ಬೇಡ ಎಂದು ಬೇಡಿಕೊಂಡರೂ ಕೂಡ ಮಧುವರಸರು ಅವುಗಳನ್ನು ಮೆಟ್ಟಿದರು. ಕೂಡಲೇ ಅವರ ಮೈಯೆಲ್ಲಾ ಬೆಂಕಿ ಮೆಟ್ಟಿದಂತೆ ಉರಿ ಆರಂಭವಾಯಿತು. ಕುದಿಯುವ ಸುಣ್ಣವನ್ನು ಸುರಿದಂತೆ ಎಣ್ಣೆ ಕಾಸಿ ಕಣ್ಣೊಳಗೆ ಸುರಿದಂತೆ ಡೊಣ್ಣೆ ಮುಳ್ಳುಗಳು ನೆಟ್ಟಂತೆ ಮಧುವರಸರಿಗೆ ಭಾಸವಾಯಿತು. ಅದೆಷ್ಟೇ ಮದ್ದು ತಿಂದರೂ ನೀರು ಕುಡಿದರೂ ಮೈ ಉರಿ ಹೋಗಲೇ ಇಲ್ಲ…. ಕೊನೆಗೆ ಮನೆಗೆ ನೀರು ತಂದು ಹಾಕುವ ಮಾದೇವಿ ಹರಳಯ್ಯನವರ ಮನೆಯಲ್ಲಿ ಚಪ್ಪಲಿ ಮಾಡಲು ಚರ್ಮ ಹದ ಮಾಡಲು ನೆನೆ ಹಾಕುವ ಕುಂಡದಿಂದ ನೀರನ್ನು ಒಯ್ದು ನೀಡಲು ಅದರಿಂದ ಸ್ನಾನ ಮಾಡಿದ ವಧುವರಸದ ಮೈ ಉರಿ ಮಾಯವಾಯಿತು.
ದೇಹಕ್ಕಾದ ತೊಂದರೆಯಿಂದ ಮುಕ್ತರಾದ ಮಧುವರಸರು ಕೆಲಸದ ಮಹದೇವಿಯನ್ನು ಕರೆದು ಈ ಕುರಿತು ಕೇಳಲು ಆಕೆ ನಿಜವನ್ನು ಬಾಯಿಬಿಟ್ಟಳು. ತಾವು ಮಾಡಿದ ತಪ್ಪಿನ ಅರಿವಾಗಿ ಮಧುವರಸರಿಗೆ ಪಶ್ಚಾತ್ತಾಪವಾಯಿತು. ಪರಿಪೂರ್ಣವಾಗಿ ಹೃದಯ ಪರಿ ವರ್ತನೆಯಾಗಿದ್ದ ಮಧುವರಸರು ಹರಳಯ್ಯನವರಲ್ಲಿ ಕ್ಷಮೆ ಯಾಚಿಸಿದರಲ್ಲದೇ ತಾವು ಕೂಡ ಶರಣ ಧರ್ಮವನ್ನು ಸ್ವೀಕರಿಸಿದರು.
ಮುಂದೆ ಮಧುವರಸ ಮಂತ್ರಿಗಳು ತಮ್ಮ ಮಗಳು ಲಾವಣ್ಯವತಿಯನ್ನು ಹರಳಯ್ಯನವರ ಮಗ ಶೀಲವಂತನಿಗೆ ಕೊಟ್ಟು ಮದುವೆ ಮಾಡಲು ಇಚ್ಛೆಸಿದರು ಇದಕ್ಕೆ ಹರಳಯ್ಯನವರು ಒಪ್ಪಿಗೆಯನ್ನಿತ್ತರು… ಈ ವರ್ಣಸಂಕರ ವಿವಾಹವು ಶರಣ ಧರ್ಮವನ್ನು ಇನ್ನಿಲ್ಲದಂತೆ ಎತ್ತಿ ಹಿಡಿಯುತ್ತದೆ ಎಂಬ ಆಶಯದಿಂದ ಲಾವಣ್ಯವತಿ ಹಾಗೂ ಶೀಲವಂತರ ವಿವಾಹಕ್ಕೆ ಮಾಡಲಾಯಿತು.
ಆದರೆ ಇದೇ ವಿವಾಹವು ಅನಿರೀಕ್ಷಿತ ಘಟನೆಗಳು ಹಾಗೂ ಕಲ್ಯಾಣದ ಕ್ರಾಂತಿಗೆ ಕಾರಣವಾಗಿ ಬಿಜ್ಜಳ ಮಹಾರಾಜನ ವಧೆಯಾಯಿತು. ಬಿಜ್ಜಳ ಮಹಾರಾಜನ ಮಗಳು ಸೋವಿದೇವ ವರ್ಣಸಂಕರ ವಿವಾಹಕ್ಕೆ ಕಾರಣವಾದ ಹರಳಯ್ಯ ಹಾಗೂ ಮಧುವರಸರನ್ನು ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿದನು. ಸಮ ಸಮಾಜದ ಕನಸು ಕಂಡ ಶರಣ ಬಂಧುಗಳ ಬಲಿ ದಾನವಾಯಿತು.
ಶರಣ ತತ್ವಕ್ಕಾಗಿ ಜೀವತೆತ್ತ ಧೀರತೆಯ ದೃವತಾರೆ ಹುತಾತ್ಮ ಹರಳಯ್ಯನವರಿಗೆ ಶರಣು ಶರಣಾರ್ಥಿ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್








