ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ದಾಳಿ ಬಳಿಕ ಮಾತನಾಡಿದ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್, ಈ ದಾಳಿಗೂ ತಮ್ಮ ತಂದೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಲಪಾಡ್, ಇಡಿ ದಾಳಿ ತಮ್ಮ ಹಾಗೂ ತಮ್ಮ ಸಹೋದರ ಉಮರ್ ಹ್ಯಾರಿಸ್ ನಲಪಾಡ್ ಅವರನ್ನು ಗುರಿಯಾಗಿಸಿಕೊಂಡು ನಡೆದಿದೆ ಎಂದು ಆರೋಪಿಸಿದರು. 2021ರಲ್ಲಿ ಇಸಿಐಆರ್ (ECIR) ದಾಖಲಾಗಿದ್ದರೂ, 2026ರಲ್ಲಿ ದಾಳಿ ನಡೆಸಿರುವುದು ಪ್ರಶ್ನಾರ್ಹ ಎಂದು ಅವರು ಹೇಳಿದರು. “ಯಾರಾದರೂ ಅಪರಾಧ ಮಾಡಿದ್ದರೆ ಆರು ವರ್ಷಗಳ ಕಾಲ ಕಾಯ್ದು ನಂತರ ದಾಳಿ ಮಾಡುತ್ತಾರಾ?” ಎಂದು ಪ್ರಶ್ನಿಸಿದರು.
ತಮ್ಮ ತಂದೆಗೆ ಸಚಿವ ಸ್ಥಾನ ಸಿಗದಂತೆ ತಡೆಯಲು ರಾಜಕೀಯ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಅವರು ಆರೋಪಿಸಿದರು. “ನಾವು ಹ್ಯಾರಿಸ್ ಅವರ ಮಕ್ಕಳು ಎಂಬ ಕಾರಣಕ್ಕೆ ನಮ್ಮ ಮನೆ ಮೇಲೆ ದಾಳಿ ನಡೆದಿದೆ. ಈ ಪ್ರಕರಣಕ್ಕೂ ನಮ್ಮ ತಂದೆಗೂ ಯಾವುದೇ ಸಂಬಂಧವಿಲ್ಲ,” ಎಂದು ಅವರು ಹೇಳಿದರು.
ಬಿಟ್ಕಾಯಿನ್ ಪ್ರಕರಣ ಕುರಿತು 2020ರಲ್ಲಿ ಬಿಜೆಪಿಯೇ ಯಾವುದೇ ಅಕ್ರಮಗಳಿಲ್ಲ ಎಂದು ಹೇಳಿತ್ತು ಹಾಗೂ ಎಸ್ಐಟಿ ತನಿಖೆಯಲ್ಲೂ ಏನೂ ಪತ್ತೆಯಾಗಿಲ್ಲ ಎಂದು ನಲಪಾಡ್ ತಿಳಿಸಿದರು. ಆದರೂ ಈಗ ತಮ್ಮ ಕುಟುಂಬವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಕಿಡಿಕಾರಿದರು.
ಇಡಿ ಅಧಿಕಾರಿಗಳು ಸುಮಾರು 21 ಗಂಟೆಗಳ ಕಾಲ ಶೋಧ ನಡೆಸಿ ಕೇವಲ ಎರಡು ಮೊಬೈಲ್ಗಳನ್ನು ಮಾತ್ರ ವಶಕ್ಕೆ ಪಡೆದಿದ್ದು, ಯಾವುದೇ ಹಣ ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.ಇದನ್ನು ಓದಿ –ಏ.23-24ಕ್ಕೆ ರಾಜ್ಯದಲ್ಲಿ CET ಪರೀಕ್ಷೆ
ಈ ವೇಳೆ ಭಾವುಕರಾದ ನಲಪಾಡ್, “ನಾನು ಒಳ್ಳೆಯ ಮಗನಾಗಲು ಸಾಧ್ಯವಾಗಿಲ್ಲ. ಯಾವಾಗಲೂ ನನ್ನಿಂದಲೇ ತಂದೆ-ತಾಯಿಗೆ ಸಮಸ್ಯೆ ಆಗಿದೆ” ಎಂದು ಅಳಲು ತೋಡಿಕೊಂಡರು. ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿ ಕುಟುಂಬಕ್ಕೆ ಒಳ್ಳೆಯ ಹೆಸರು ತರಲು ಪ್ರಯತ್ನಿಸುತ್ತಿದ್ದೇನೆ, ಆದರೆ ನಿರಂತರವಾಗಿ ಪ್ರಕರಣಗಳ ಮೂಲಕ ನಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.








