ಮುಂಬೈ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸಂಸ್ಥೆಯ ಮಹಾರಾಷ್ಟ್ರದ ನಾಸಿಕ್ ಘಟಕದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ರನ್ನು ಪೊಲೀಸರು ಬಂಧಿಸಿದ್ದಾರೆ.
ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಆಕೆಯನ್ನು ಛತ್ರಪತಿ ಸಂಭಾಜಿನಗರದಲ್ಲಿ ಜಂಟಿ ಕಾರ್ಯಾಚರಣೆಯ ಮೂಲಕ ಪತ್ತೆ ಹಚ್ಚಿ ಬಂಧಿಸಲಾಗಿದೆ.
ಈ ಪ್ರಕರಣ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಸಹೋದರನ ಪರವಾಗಿ ಮಹಿಳೆಯನ್ನು ಮತಾಂತರಕ್ಕೆ ಒತ್ತಾಯಿಸಿದ ಆರೋಪ ನಿದಾ ಖಾನ್ ಮೇಲೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಚ್ಆರ್ ಮುಖ್ಯಸ್ಥೆ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ನಾಸಿಕ್ ಎಸ್ಐಟಿ, ಛತ್ರಪತಿ ಸಂಭಾಜಿನಗರ ಪೊಲೀಸ್ ಕಮಿಷನರೇಟ್ ಹಾಗೂ ಅಪರಾಧ ವಿಭಾಗದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ನಾರೇಗಾಂವ್ ಪ್ರದೇಶದ ಫ್ಲಾಟ್ನಲ್ಲಿ ತಂಗಿದ್ದ ನಿದಾ ಖಾನ್ರನ್ನು ಬಂಧಿಸಿದರು. ಕಳೆದ ನಾಲ್ಕು ದಿನಗಳಿಂದ ಆಕೆ ತನ್ನ ಕುಟುಂಬದವರೊಂದಿಗೆ ಅಲ್ಲೇ ತಂಗಿದ್ದಳು. ಬಂಧನದ ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ನಾಸಿಕ್ಗೆ ಕರೆದೊಯ್ಯಲಾಗಿದೆ.
ತಾನು ಗರ್ಭಿಣಿ ಎಂದು ಹೇಳಿಕೊಂಡು ನಿರೀಕ್ಷಣಾ ಜಾಮೀನು ಕೋರಿದ್ದರೂ, ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಅದನ್ನು ನಿರಾಕರಿಸಿತು.
ನಿದಾ ಖಾನ್ 2021ರ ಡಿಸೆಂಬರ್ನಲ್ಲಿ ಪ್ರೊಸೆಸ್ ಅಸೋಸಿಯೇಟ್ ಆಗಿ ಸಂಸ್ಥೆಗೆ ಸೇರಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಏಪ್ರಿಲ್ 9ರಂದು ಕಂಪನಿಯು ಆಕೆಯನ್ನು ಅಮಾನತುಗೊಳಿಸಿತು. ಆಕೆಯ ಆಂತರಿಕ ವ್ಯವಸ್ಥೆ ಹಾಗೂ ನೆಟ್ವರ್ಕ್ ಪ್ರವೇಶವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಈ ಪ್ರಕರಣವು ನಾಸಿಕ್ ಘಟಕದ ಮಹಿಳಾ ಉದ್ಯೋಗಿಯೊಬ್ಬರ ದೂರಿನಿಂದ ಬೆಳಕಿಗೆ ಬಂದಿತು. ಸಹೋದ್ಯೋಗಿ ದಾನಿಶ್ ಶೇಖ್ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಮಹಿಳೆ ಆರೋಪಿಸಿದ್ದರು. ನಂತರ ಆತ ಈಗಾಗಲೇ ವಿವಾಹಿತನಾಗಿದ್ದುದನ್ನು ಮುಚ್ಚಿಟ್ಟಿದ್ದಾನೆ ಎಂಬುದು ತಿಳಿದುಬಂದಿದೆ.
ಇದಲ್ಲದೆ, ನಿದಾ ಖಾನ್ ದೂರುದಾರ ಮಹಿಳೆಗೆ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ಮತಾಂತರಕ್ಕೆ ಒತ್ತಡ ಹೇರಿದ್ದಾಳೆ ಎಂಬ ಆರೋಪವಿದೆ. ಪ್ರಕರಣ ಮುಂದುವರಿದಂತೆ ಇನ್ನೂ ಹಲವು ಮಹಿಳಾ ಉದ್ಯೋಗಿಗಳು ಮಾನಸಿಕ ಮತ್ತು ಲೈಂಗಿಕ ಕಿರುಕುಳದ ಆರೋಪಗಳನ್ನು ಮುಂದಿಟ್ಟಿದ್ದಾರೆ.ಇದನ್ನು ಓದಿ –ಹೆಣ್ಣು ಮಗುವಿಗೆ ಜನ್ಮ ನೀಡಿದ ಸೂರ್ಯಕುಮಾರ್ ಯಾದವ್ ದಂಪತಿ
ಈ ನಡುವೆ ಸಂಸ್ಥೆಯು ಸ್ಪಷ್ಟನೆ ನೀಡಿ, ನಿದಾ ಖಾನ್ ಎಚ್ಆರ್ ಮ್ಯಾನೇಜರ್ ಆಗಿರಲಿಲ್ಲ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಆಕೆಯ ಯಾವುದೇ ಪಾತ್ರವಿರಲಿಲ್ಲ ಎಂದು ತಿಳಿಸಿದೆ. ಜೊತೆಗೆ ಈ ಕುರಿತು ಸಂಸ್ಥೆಯ ಆಂತರಿಕ ವಿಭಾಗಕ್ಕೆ ಯಾವುದೇ ಅಧಿಕೃತ ದೂರು ಬಂದಿರಲಿಲ್ಲ ಎಂದೂ ಹೇಳಿದೆ.








