ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿಂದ ಕ್ರಿಕೆಟ್ ದೇವರು ಎಂದೇ ಆರಾಧಿಸಲ್ಪಡುವ ದಂತಕಥೆ ಸಚಿನ್ ತೆಂಡೂಲ್ಕರ್. ಶತಮಾನದ ಸಾಧನೆ,ನೂರಾರು ದಾಖಲೆಗಳು ಮತ್ತು ಭಾರತರತ್ನದಂತಹ ಅತ್ಯುನ್ನತ ಗೌರವಗಳು ಅವರ ಮುಡಿಗೇರಿವೆ. ಆದರೆ,ಇತ್ತೀಚೆಗೆ ಆಂಧ್ರ ವಿಶ್ವವಿದ್ಯಾಲಯದ ಶತಮಾನೋತ್ಸವದ ವೇದಿಕೆಯ ಮೇಲೆ ಅವರು ತೋರಿದ ಒಂದು ನಡೆ, ಅವರ ಬ್ಯಾಟಿಂಗ್ಗಿಂತಲೂ ಹೆಚ್ಚು ಸ್ಫೂರ್ತಿದಾಯಕವಾಗಿತ್ತು. ಮುಖ್ಯಮಂತ್ರಿಗಳಿಂದ ವೇಂಕಟೇಶ್ವರ ಸ್ವಾಮಿಯ ಮೂರ್ತಿಯನ್ನು ಸ್ವೀಕರಿಸುವ ಮುನ್ನ, ಸಚಿನ್ ತಮ್ಮ ಪಾದರಕ್ಷೆಗಳನ್ನು ಕಳಚಿ ಪಕ್ಕಕ್ಕಿಟ್ಟು ಮೌನವಾಗಿ ನಮಿಸಿದರು. ಆ ಕ್ಷಣ ಸಾರಿದ ಸಂದೇಶವೊಂದೇ ಸಾಧನೆಗಿಂತ ಸಂಸ್ಕಾರ ಶ್ರೇಷ್ಠ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲುವಿನ ಬೆನ್ನತ್ತಿರುವ ಯುವ ಪೀಳಿಗೆಗೆ ಈ ಸನ್ನಿವೇಶವು ಒಂದು ದಿವ್ಯ ದರ್ಶನ.ಯಶಸ್ಸಿನ ಉತ್ತುಂಗದಲ್ಲಿರುವಾಗ ಮನುಷ್ಯನಿಗೆ ಅಹಂಕಾರ ಆವರಿಸುವುದು ಸಹಜ. ಆದರೆ, ಸಚಿನ್ ಅವರು ಅಷ್ಟೊಂದು ಎತ್ತರಕ್ಕೆ ಬೆಳೆದಿದ್ದರೂ,ಸಂಪ್ರದಾಯ ಮತ್ತು ದೈವಿಕತೆಯ ಮುಂದೆ ತಮ್ಮ ವಿನಯವನ್ನು ಪ್ರದರ್ಶಿಸಿದರು. ನಾವು ಎಷ್ಟೇ ಎತ್ತರಕ್ಕೆ ಹಾರಿದರೂ ನಮ್ಮ ಪಾದಗಳು ನೆಲದ ಮೇಲಿರಬೇಕು ಎಂಬ ಜೀವನ ಸತ್ಯಕ್ಕೆ ಅವರು ಕನ್ನಡಿ ಹಿಡಿದರು.
ಯುವ ಕಣ್ಮಣಿಗಳೇ ಗಮನಿಸಿ
ಕೇವಲ ಪದವಿಗಳು ಅಥವಾ ಬ್ಯಾಂಕ್ ಬ್ಯಾಲೆನ್ಸ್ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಬದಲಾಗಿ,ನೀವು ನೀಡುವ ಗೌರವ ಮತ್ತು ಪಾಲಿಸುವ ಸಂಸ್ಕಾರಗಳು ನಿಮ್ಮನ್ನು ಮಹಾಪುರುಷರನ್ನಾಗಿ ಮಾಡುತ್ತವೆ. ಆಧುನಿಕತೆಯ ಹೆಸರಿನಲ್ಲಿ ನಮ್ಮ ಬೇರುಗಳನ್ನು ಕತ್ತರಿಸಿಕೊಳ್ಳುವುದು ಪ್ರಗತಿಯಲ್ಲ. ಸಚಿನ್ ಅವರ ಈ ಸರಳತೆ ನಮಗೆ ಕಲಿಸುವುದು ಏನೆಂದರೆ ವಿನಯವೇ ನಿಜವಾದ ವಿಜಯದ ಸಂಕೇತ.
ನೀವು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ,ಆ ಸಾಧನೆಯ ಶಿಖರದಲ್ಲೂ ತಲೆಬಾಗುವ ಗುಣ ನಿಮ್ಮದಾಗಿರಲಿ.ಅಹಂಕಾರವನ್ನು ಕಳಚಿ ಸಂಸ್ಕಾರವನ್ನು ಮೈಗೂಡಿಸಿಕೊಂಡಾಗ ಮಾತ್ರ ನೀವು ಸಮಾಜದಲ್ಲಿ ಅಳಿಸಲಾಗದ ಛಾಪು ಮೂಡಿಸಲು ಸಾಧ್ಯ. ನೆನಪಿಡಿ,ಯಶಸ್ಸು ತಾತ್ಕಾಲಿಕ, ಆದರೆ ಸಂಸ್ಕಾರವಂತ ವ್ಯಕ್ತಿತ್ವ ಶಾಶ್ವತ.

ಡಾ.ಸುಧಾಕರ.ಜಿ.ಲಕ್ಕವಳ್ಳಿ.








