ಬೆಂಗಳೂರು:ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಬ್ರಾಹ್ಮಣರು ಸಾಫ್ಟ್ ಟಾರ್ಗೆಟ್ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದ್ದಾರೆ.
ಬಿಜೆಪಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಂಹ ಅವರು, ಬ್ರಾಹ್ಮಣರ ಸಂಖ್ಯೆ ಬಹಳ ಕಡಿಮೆ ಇದೆ. ಅವರು ಪ್ರತಿರೋಧ ತೋರುವುದಿಲ್ಲ ಎಂಬ ಭಾವನೆ ಸಿದ್ದರಾಮಯ್ಯ ಅವರಿಗಿದೆ ಎಂದರು.
ಉಡುಪಿಯ ಹಿಜಾಬ್ ವಿಚಾರ ಬಂದಾಗ ಸಿದ್ದರಾಮಯ್ಯ ಪ್ರಬಲವಾಗಿ ಪ್ರತಿಪಾದಿಸಿದರು. ಈಗ ಯಾಕೆ ಜನಿವಾರ ಪ್ರಕರಣದಲ್ಲಿ ಸಿದ್ದರಾಮಯ್ಯ ಸುಮ್ಮನಿದ್ದಾರೆ? ಜನಿವಾರದಲ್ಲಿ ಏನಾದ್ರೂ ಲೋಪ ಕಾಣುತ್ತಿದ್ಯಾ ಎಂದು ಪ್ರಶ್ನಿಸಿದರು.
ಜಾತಿ ಜನಗಣತಿಯಲ್ಲೂ ಬ್ರಾಹ್ಮಣರ ಸಂಖ್ಯೆ ಕಡಿಮೆ ತೋರಿಸಲಾಗಿದೆ, ಅವರೇನೂ ಹೇಳಲ್ಲ ಅಂತನಾ? ಜನಿವಾರವೇ ಒಂದು ಸಮಸ್ಯೆ ಅಂತ ಅನ್ಕೊಂಡು ಜನಿವಾರವನ್ನೇ ತೆಗೆಸುವ ಕೆಲಸ ಆಗಿದೆ. ಇದು ಹಿಂದೂಗಳ ಮೇಲಿನ ಆಕ್ರಮಣ. ಹಿಂದೂ ಸಮಾಜ ಒಟ್ಟಾಗಿ ಜನಿವಾರ ಪ್ರಕರಣ ವಿರೋಧಿಸಬೇಕು ಎಂದು ಹೇಳಿದರು.
ಒಕ್ಕಲಿಗರು, ಲಿಂಗಾಯತರಿಗೆ ತಮ್ಮ ಸಮುದಾಯ ಸಂಖ್ಯೆ ಕಡಿಮೆಯಾಗಿದೆ ಅಂತ ಸಿಟ್ಟಿದೆ. ದಲಿತ ನಾಯಕರು ತಮ್ಮ ಸಂಖ್ಯೆ ಒಂದು ಕೋಟಿ ಆಗಿದೆ ಅಂತ ಒಳಗೊಳಗೇ ಖುಷಿ ಆಗಿರಬಹುದು. ಆದರೆ ಈ ಹಿಂದೆಯೇ ಅಹಿಂದ ಪ್ರಾರಂಭಿಸಿ ಸಿದ್ದರಾಮಯ್ಯ ಹಿಂದೂಗಳನ್ನು ಒಡೆದಿದ್ದರು. ಈಗ ಅಧಿಕಾರದಲ್ಲಿ ಮುಂದುವರೆಯಲು ಸಮಸ್ತ ಹಿಂದೂ ಧರ್ಮ ಒಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.ಇದನ್ನು ಓದಿ –ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಪ್ರಕಟ!
ಇನ್ನಾದರೂ ಜಾತಿ ಜಾತಿ ಎನ್ನುವುದನ್ನು ಬಿಟ್ಟು ಹಿಂದೂಗಳು ಸಿದ್ದರಾಮಯ್ಯನವರ ಅವರ ಕುರ್ಚಿ ತಂತ್ರ ಅರ್ಥ ಮಾಡಿಕೊಳ್ಳಬೇಕು. ಇನ್ನೂ ನಾನು ಗೌಡ, ಲಿಂಗಾಯತ, ಒಬಿಸಿ, ಎಸ್ಸಿ, ಎಸ್ಟಿ, ಕುರುಬ ಅನ್ನುವ ಮನಸ್ಥಿತಿಯಿಂದ ಹೊರಗೆ ಬರಬೇಕು. ಜಾತಿ ಆಧಾರದಲ್ಲಿ ಅಪಸ್ವರ ಎತ್ತಲು ಹೋಗಬಾರದು. ಹಿಂದೂ ಸಮಾಜದ ಪ್ರತಿನಿಧಿಗಳ ರೀತಿ ಸಮಯದಾಯಗಳ ನಾಯಕರು ಮಾತಾಡಬೇಕು ಎಂದು ಅಭಿಪ್ರಾಯಪಟ್ಟರು.