ಬೆಂಗಳೂರು, ಜೂನ್ 9: ದೇಶದಾದ್ಯಂತ ಮುಂಗಾರು ಪ್ರವೇಶಿಸಿದ್ದರಿಂದ, ಹಲವೆಡೆ ಮಳೆಯ ಆರ್ಭಟ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಜೋರಾಗಲಿದ್ದುದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 12ರ ವರೆಗೆ ವಿವಿಧ ರಾಜ್ಯಗಳಲ್ಲಿ ಬಿರುಗಾಳಿ, ಗುಡುಗು ಹಾಗೂ ಮಿಂಚಿನೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆಯ ಪ್ರಕಾರ, ಕೆಲ ರಾಜ್ಯಗಳಲ್ಲಿ ಭಾರೀ ಮಳೆಯಾದರೆ, ಇನ್ನು ಕೆಲವಾಚೆ ಸಾಧಾರಣ ಮಳೆಯಾಗಲಿದೆ. ಕೆಲವೆಡೆ ಮಾತ್ರ ಬಿಸಿಲಿನ ವಾತಾವರಣ ಮುಂದುವರೆಯಲಿದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಗರಿಷ್ಠ ತಾಪಮಾನ 2–4 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ದೆಹಲಿ, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಕೆಲವು ಪ್ರದೇಶಗಳಲ್ಲಿ 5 ದಿನಗಳವರೆಗೆ ತಾಪಮಾನ 40 ಡಿಗ್ರಿ ಸೆ.ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ದಾಖಲಾಗಬಹುದು.
ಜೂನ್ 12ರ ವರೆಗೆ ಪಶ್ಚಿಮ, ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು, ಪ್ರವಾಸ ಯೋಜನೆಗಳನ್ನು ಮರುಪರಿಶೀಲಿಸಬೇಕು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ನವದೆಹಲಿಯ ಹವಾಮಾನ ಸ್ಥಿತಿ:
ಮೇ 16ರಿಂದ ತಾಪಮಾನ ಏರಿಕೆಯಾಗುತ್ತಿರುವ ನವದೆಹಲಿಯಲ್ಲಿ ಜನತೆ ತೀವ್ರ ತಾಪದಿಂದ ಕಂಗೆಟ್ಟಿದ್ದಾರೆ. ಜೂನ್ 9 ಮತ್ತು 10 ರಂದು ಬಿಸಿಲು ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಜೂನ್ 12ರ ನಂತರ ಹವಾಮಾನದಲ್ಲಿ ಬದಲಾವಣೆ ಸಂಭವಿಸಬಹುದು. ಜೂನ್ 13ರಿಂದ ಇಳಿಮುಖ ತಾಪಮಾನ ಹಾಗೂ ಸಾಧಾರಣ ಮಳೆಯಾಗಲಿದೆ. ಮಳೆಯಾದರೆ 2–3 ಡಿಗ್ರಿ ಸೆಲ್ಸಿಯಸ್ ತಾಪಮಾನ ಇಳಿಯುವ ಸಾಧ್ಯತೆಯೂ ಇದೆ.
ಉತ್ತರ ಮತ್ತು ಪೂರ್ವ ಭಾರತದಲ್ಲಿ:
ಉತ್ತರ ಪ್ರದೇಶದ ಹಲವೆಡೆ ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯಾಗಲಿದೆ. ಆದರೆ ಗುರುವಾರದಿಂದ ಪೂರ್ವ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಶನಿವಾರ ಬಿಹಾರದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯೂ ಇದೆ.ಇದನ್ನು ಓದಿ –ಕೃಷಿಹೊಂಡದಲ್ಲಿ ಈಜಲು ಹೋಗಿ ಇಬ್ಬರು ಯುವಕರ ದುರ್ಮರಣ
ದಕ್ಷಿಣ ಭಾರತದ ಪರಿಸ್ಥಿತಿ:
ಮುಂಗಾರು ಎಂಟ್ರಿಯಿಂದ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಈಗಾಗಲೇ ಮಳೆ ಸುರಿಯುತ್ತಿದೆ. ಮುಂದಿನ ದಿನಗಳಲ್ಲೂ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಮತ್ತು ಕೇರಳದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.