ನವದೆಹಲಿ, ಜೂನ್ 25: ಬೆಂಗಳೂರು ನಗರದಲ್ಲಿ ರಸ್ತೆ ದಟ್ಟಣೆ ನಿವಾರಣೆಗೆ ಭೂಗತ ಟನಲ್ ರಸ್ತೆ ಹಾಗೂ ಪೆರಿಫೆರಲ್ ರಿಂಗ್ರೋಡ್ ನಿರ್ಮಾಣ ಸೇರಿದಂತೆ ರಾಜ್ಯದ ಪ್ರಮುಖ ಹೆದ್ದಾರಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜತೆ ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಅತ್ಯಾಧುನಿಕ ಮೂಲಸೌಕರ್ಯದ ಅವಶ್ಯಕತೆ: ಬೆಂಗಳೂರು ನಗರವು ವೇಗವಾಗಿ ವಿಸ್ತರಿಸುತ್ತಿರುವುದರಿಂದ ಜನಸಂಖ್ಯೆ, ವಾಹನದ ದಟ್ಟಣೆ ದಿನೇದಿನೆ ಹೆಚ್ಚುತ್ತಿದೆ. ಈ ಹಿನ್ನೆಲೆ, ಶಾಶ್ವತ ಪರಿಹಾರವಾಗಿ ಟನಲ್ ರಸ್ತೆ ಜಾಲ ಹಾಗೂ ಪೆರಿಫೆರಲ್ ರಿಂಗ್ರೋಡ್ ನಿರ್ಮಾಣ ಅತ್ಯಾವಶ್ಯಕವಾಗಿದೆ ಎಂದು ಕುಮಾರಸ್ವಾಮಿ ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟರು. ಈ ಯೋಜನೆಗಳು ದಟ್ಟಣೆಯ ದಡವಾಣಿ ನಿವಾರಣೆ ಹಾಗೂ ನಗರ ಸಂಚಾರ ವ್ಯವಸ್ಥೆಗೆ ದೀರ್ಘಕಾಲೀನ ಪರಿಹಾರ ಒದಗಿಸಲಿದೆ.
ಶಿರಾಡಿ ಘಾಟ್ ಕಾಮಗಾರಿಗೆ ತ್ವರಿತ ಕ್ರಮ:
ಬೆಂಗಳೂರು – ಮಂಗಳೂರು ಸಂಪರ್ಕದ ಪ್ರಮುಖ ರಸ್ತೆವಾದ ಶಿರಾಡಿ ಘಾಟ್ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಕುಮಾರಸ್ವಾಮಿ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದರು. ಕಾಮಗಾರಿ ವಿಳಂಬದಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿದೆ.
ಇದನ್ನು ಓದಿ –ರಾಜ್ಯದಲ್ಲಿ ಭಾರಿ ಮಳೆ ಅಬ್ಬರ: ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಇತರ ಪ್ರಮುಖ ಹೆದ್ದಾರಿ ಅಭಿವೃದ್ದಿ ಯೋಜನೆಗಳು:
- ರಾಷ್ಟ್ರೀಯ ಹೆದ್ದಾರಿ 75 (ಕುಣಿಗಲ್ ವಿಭಾಗ) – ಮೇಲ್ದರ್ಜೆಗೆ ತರಲು ಪ್ರಸ್ತಾವ.
- ಚನ್ನರಾಯಪಟ್ಟಣ – ಮಕುಟ (ರಾಜ್ಯ ಹೆದ್ದಾರಿ 8) – ಹೊಸ ರಾಷ್ಟ್ರೀಯ ಹೆದ್ದಾರಿ ರೂಪದಲ್ಲಿ ಅಭಿವೃದ್ಧಿ.
- ಜೇವರ್ಗಿ – ಶೋರಾಪುರ ಮಾರ್ಗ – ನಾಲ್ಕು ಪಥದ ಹೆದ್ದಾರಿಯಾಗಿ ವಿಸ್ತರಣೆ.
- ಶಿರೂರು ಘಾಟ್ (ಅಂಕೋಲಾ), ಶಿರಾಡಿ ಘಾಟ್ (ಹಾಸನ-ಸಕಲೇಶಪುರ-ಮಂಗಳೂರು), ಬರ್ಗಿ ಘಾಟ್ (ಕುಮಟಾ) – ಭೂಕುಸಿತಕ್ಕೆ ಶಾಶ್ವತ ಪರಿಹಾರ.
- ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು – ಜೋಗಿಹಳ್ಳಿ ಮೇಲು ಸೇತುವೆ ನಿರ್ಮಾಣ.
- ಮಂಡ್ಯ – ಗೆಜ್ಜಲಗೆರೆ ಗೇಟ್ ರೈಲ್ವೆ ಓವರ್ಬ್ರಿಡ್ಜ್ ನಿರ್ಮಾಣ (NH-275).
- ಪಾಂಡವಪುರಕ್ಕೆ ಬೈಪಾಸ್ ರಸ್ತೆ (NH 275–150A) – ಯೋಜನಾ ವರದಿ ಸಿದ್ಧತೆ.