ಯಾ ದೇವಿ ಸರ್ವಭೂತೇಷು ಮಾ ಕೂಷ್ಮಾಂಡಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ನವರಾತ್ರಿಯ ಒಂಬತ್ತು ದಿನ ದೇವಿಯ ಒಂದೊಂದು ಅವತಾರವನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿ ಆರಾಧನೆ ನವರಾತ್ರಿಯ ನಾಲ್ಕನೇ ದಿನ ಮಾಡಲಾಗುತ್ತದೆ. ಕೂಷ್ಮಾಂಡ ದೇವಿ ನವದುರ್ಗೆಯರಲ್ಲಿ ನಾಲ್ಕನೆಯವಳು. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡ ಎನ್ನುತ್ತಾರೆ.
ಈ ದೇವಿಗೆ ಕುಂಬಳಕಾಯಿ ಅತ್ಯಂತ ಪ್ರಿಯ. ತನ್ನ ಸುಮಧುರ ಮುಗ್ಧ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತದೆ.
ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಅಂತೇ ಭೂಮಿ, ಗ್ರಹಗಳು, ಸೂರ್ಯ, ನಕ್ಷತ್ರಗಳು ಮತ್ತು ಗೆಲಕ್ಸಿಗಳನ್ನು ಅಸ್ತಿತ್ವಕ್ಕೆ ತರಲಾಯಿತು ಆದ್ದರಿಂದ ಇವಳೇ ಸೃಷ್ಟಿಯ ಆದಿಸ್ವರೂಪ ಶಕ್ತಿಯಾಗಿದ್ದಾಳೆ.
ದುರ್ಗಾ ದೇವಿಯ ಕೂಷ್ಮಾಂಡ ದೇವಿಯ ರೂಪವು ವಿಶಿಷ್ಟವಾಗಿದ್ದು, ಅವಳು 8 ತೋಳುಗಳನ್ನು ಹೊಂದಿದ್ದಾಳೆ. ಈ ಕಾರಣಕ್ಕಾಗಿ ಅವಳಿಗೆ ಪೂಜೆ ಮಾಡುವುದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ದೇವಿಗೆ ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದೂ ಅವಳನ್ನು ವರ್ಣಿಸಲಾಗುತ್ತದೆ. ಜೊತೆಗೆ ಆಕೆ ತನ್ನ ಕೈಯಲ್ಲಿ ಜಪಮಾಲೆಯನ್ನು ಹಿಡಿದು, ಸಿಂಹದ ಮೇಲೆ ಸವಾರಿ ಮಾಡಿಕೊಂಡು ಬರುತ್ತಾಳೆ.
ನವರಾತ್ರಿಯ ನಾಲ್ಕನೇ ದಿನ ತಾಯಿಯನ್ನು ಮೆಚ್ಚಿಸಲು ಬೂದು ಕುಂಬಳಕಾಯಿಯನ್ನು ದಾನ ಮಾಡಲಾಗುತ್ತದೆ. ಈಕೆಯನ್ನು ಶ್ರದ್ಧೆಯಿಂದ ಪೂಜಿಸಿದರೆ ಕಷ್ಟ ಪರಿಹರಿಸುತ್ತಾಳೆ. ಭಕ್ತರ ಅಜ್ಞಾನವನ್ನೂ ದೂರ ಮಾಡುತ್ತಾಳೆ. ಕೂಷ್ಮಾಂಡ ದೇವಿಯ ಆರಾಧನೆಯ ಪೂಜಾ ಫಲಗಳು ಅತ್ಯಂತ ವಿಶೇಷ. ಕೂಷ್ಮಾಂಡ ದೇವಿ ಆರಾಧನೆಯಿಂದ ರೋಗಗಳಿಂದ ಮುಕ್ತಿ ಪಡೆಯಬಹುದು.
ದೇವಿಯು ಸೂರ್ಯನ ಶಕ್ತಿಯ ಮೂಲ. ಅವಳಿಲ್ಲದೆ, ಸೂರ್ಯನ ಬೆಳಕು ಮತ್ತು ಶಕ್ತಿಯು ಮಸುಕಾಗುತ್ತದೆ ಮತ್ತು ಕುಂದುತ್ತದೆ ಮತ್ತು ಶಕ್ತಿಹೀನವಾಗುತ್ತದೆ ಎಂದು ನಂಬಲಾಗಿದೆ. ಭಗವಂತನಾದ ಸೂರ್ಯ ಸೃಷ್ಟಿಗೆ ಜೀವ ಕೊಡುತ್ತಾನೆ, ಆದರೆ ದೇವಿಯೇ ಅದಕ್ಕೆ ಕಾರಣಳಾದವಳು. ಅವಳ ಶಕ್ತಿಯೇ ಸೂರ್ಯನನ್ನು ಪ್ರಕಾಶಿಸಲು ಸಾಧ್ಯವಾಗುವಂತೆ ಮಾಡುತ್ತದೆ.
ಕೂಷ್ಮಾಂಡ ದೇವಿಯನ್ನು ಅರ್ಚಿಸಲು ಅತೀ ಪವಿತ್ರವಾದ ಹೂವೆಂದರೆ ಕೆಂಪು ಬಣ್ಣದ ಹೂಗಳು. ಈ ಹೂಗಳಿಂದ ದೇವಿಯನ್ನು ಅರ್ಚಿಸಿ ನಂತರ ಷೋಡಶೋಪಚಾರ ಪೂಜೆ ಮಾಡಬೇಕು.
ಜ್ಯೋತಿಷ್ಯದಲ್ಲಿ ಕೂಷ್ಮಾಂಡ ದೇವಿ:
ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುತ್ತದೆ.
ಆಧ್ಯಾತ್ಮಿಕದಲ್ಲಿ ಕೂಷ್ಮಾಂಡ ದೇವಿ:
ಕುಂಡಲಿನಿಯನ್ನು ಜಾಗೃತಗೊಳಿಸಲು ಬಯಸುವವರು ನವರಾತ್ರಿಯ ಮೂರನೇ ದಿನದಂದು ಅಂದರೆ ಇಂದು ತಾಯಿ ಕೂಷ್ಮಾಂಡಳನ್ನು ಪೂಜಿಸಬೇಕು, ನಂತರ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನದ ಮೂಲಕ ದೇವಿಯನ್ನು ಒಲಿಸಿಕೊಳ್ಳಬೇಕು. ಈ ರೀತಿಯಾಗಿ, ಪ್ರಯತ್ನಗಳನ್ನು ಮಾಡುವ ಸಾಧಕರಿಗೆ ಕೂಷ್ಮಾಂಡ ದೆವಿಯು ಯಶಸ್ಸನ್ನು ಕರುಣಿಸುತ್ತಾಳೆ. ಈ ಕಾರಣದಿಂದಾಗಿ ವ್ಯಕ್ತಿಯು ಎಲ್ಲಾ ರೀತಿಯ ಭಯದಿಂದ ಮುಕ್ತನಾಗುತ್ತಾನೆ ಮತ್ತು ತಾಯಿಯ ಅನುಗ್ರಹವನ್ನು ಪಡೆಯುತ್ತಾನೆ. ಆದ್ದರಿಂದ, ಈ ದಿನದಂದು ತಾಯಿಯ ಸ್ವಭಾವವನ್ನು ಶುದ್ಧ ಹೃದಯದಿಂದ ಮನಸ್ಸಿನಲ್ಲಿ ಇಟ್ಟುಕೊಂಡು ಪೂಜೆಯನ್ನು ಮಾಡಬೇಕು. ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ರೋಗಗಳು ನಾಶವಾಗುತ್ತವೆ. ತಾಯಿಯ ಮೇಲಿನ ಭಕ್ತಿಯು ಉತ್ತಮ ಜೀವನ, ಕೀರ್ತಿ, ಶಕ್ತಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.
ಕೂಷ್ಮಾಂಡ ದೇವಿಯ ಅನುಗ್ರಹ ಪಡೆಯಲು ಮಂತ್ರ : ಓಂ ಏಂ ಹ್ರೀಂ ಕ್ಲೀಂ ಕೂಷ್ಮಾಂಡೈ ನಮಃ”

ಕಿರಣ ಜೋಶಿ
ಬೆಂಗಳೂರು








