ಆಹಾರ ಸೇವನೆಯಲ್ಲಿ ಮತ್ತು ಜೀವನ ಕ್ರಮದಲ್ಲಿ ಉಂಟಾಗುವ ಬದಲಾವಣೆ ಅಶಕ್ತರ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಅಂತೆಯೇ ಅವರ ದೈನಂದಿನ ಚಟುವಟಿಕೆಗಳ ಮೇಲೂ ಇದು ಕೆಟ್ಟ ಪರಿಣಾಮವನ್ನು ಬೀರಿ ನಿಸ್ತೇಜಗೊಳಿಸಬಹುದು. ಈ ನಿಶ್ಯಕ್ತಿಯನ್ನು ಪರಿಹರಿಸುವುದಕ್ಕಾಗಿಯೇ ಪ್ರಕೃತಿಯ ವರದಾನವೊಂದು ನೀಡಿದೆ ಅದುವೇ ತಂಪುಬೀಜಗಳು ಇವು ದೇಹವನ್ನು ಚೈತನ್ಯಶೀಲವನ್ನಾಗಿ ಮಾಡಲು ಬಹಳ ಉಪಕಾರಿಯಾಗಿದೆ.
ತುಳಸಿ ಬೀಜಗಳಂತೆ ಕಾಣುವ ಕಾಮ ಕಸ್ತೂರಿಗೆ ‘ಸಬ್ಜಾ’ ಅಥವಾ ‘ತುಕ್ಮಾರಿಯಾ ಸೀಡ್ಸ್’ ಎಂಬ ಹೆಸರೂ ಇದೆ.
ಸಂಸ್ಕೃತದಲ್ಲಿ ಇದಕ್ಕೆ ಕಠಿಂಜರ ಅಥವ ಪರ್ಣಾಸವೆಂದು ಹೆಸರು ‘ಕಠಿನಂ ಜರಯತಿ’ ಎಂದರೆ ಎಂತಹ ಕಠಿಣ ಮನಸ್ಕರನ್ನೂ ಬದಲಾಯಿಸುವ ವಿಶಿಷ್ಟ ಸುಗಂಧವುಳ್ಳ ಗಿಡವಿದು.ಈ ಬೀಜ ಬಣ್ಣದಲ್ಲಿ ಕಪ್ಪಾಗಿರುತ್ತದೆ. ಈ ಬೀಜಗಳು ಪೌಷ್ಠಿಕಾಂಶದಿಂದ ಕೂಡಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಅಂಶವಿದೆ. ಆದ್ದರಿಂದಲೇ ಅನೇಕ ವರ್ಷಗಳಿಂದ ತುಳಸಿ ಬೀಜಗಳನ್ನು ಮನೆಮದ್ದಾಗಿ ಬಳಸಲಾಗುತ್ತಿದೆ. ಈ ಬೀಜಗಳನ್ನು ನೀರಿಗೆ ಹಾಕಿ ಕುಡಿಯುವುದು ಸಾಮಾನ್ಯ. ಇದರಿಂದ ದೇಹಕ್ಕೆ ಉತ್ತಮ ಶಕ್ತಿ, ತಂಪು ನೀಡಲಿದೆ. ಈ ಬೀಜದಲ್ಲಿ ವಿಟಮಿನ್ ಎ, ಬಿ, ಇ ಮತ್ತು ಕೆ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಅಂಶಗಳಿವೆ. ಹೀಗಾಗಿ ರಾತ್ರಿ ನೆನೆಸಿ ಇಟ್ಟು ಬೆಳಗ್ಗೆ ಕುಡಿಯುತ್ತಾರೆ. ಇವುಗಳ ಎಲೆಗಳು ಸುಗಂಧ ದ್ರವ್ಯ ತಯಾರಿಕೆಗೂ ಬಳಕೆಯಾಗುತ್ತದೆ.
ತುಳಸಿ ಬೀಜಗಳಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿದ್ದು, ಇವುಗಳನ್ನು ಸಾಮಾನ್ಯವಾಗಿ ಸಿಹಿತಿಂಡಿ ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತದೆ. ಆಯುರ್ವೇದ ಮತ್ತು ಪ್ರಾಚೀನ ಚೀನೀ ಔಷಧದ ಭಾಗವಾಗಿ ಸಹ ಇದನ್ನು ಶಿಫಾರಸು ಮಾಡಲಾಗುತ್ತದೆ. ಸಬ್ಜಾ ಬೀಜಗಳು ಎಂದೂ ಕರೆಯಲ್ಪಡುವ ತುಳಸಿ ಬೀಜಗಳು ಜೀರ್ಣಕ್ರಿಯೆ, ತೂಕ ನಷ್ಟ, ಕೆಮ್ಮು ಮತ್ತು ಶೀತ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಇನ್ನೂ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಎತ್ತಿ ತೋರಿಸಿದೆ.
ಅಮೆರಿಕದ ಸಾಂಬಾರ ಪದಾರ್ಥಗಳ ವ್ಯಾಪಾರ ಸಂಘಟನೆ ನೀಡಿರುವ ವರದಿ ಪ್ರಕಾರ ಕಾಮಕಸ್ತೂರಿಯಲ್ಲಿ ಶೇ ೬.೧ರಷ್ಟು ತೇವಾಂಶ, ಶೇ ೧೧.೯ರಷ್ಟು ಪ್ರೋಟಿನ್, ಶೇ ೩.೬ರಷ್ಟು ಕೊಬ್ಬು, ಶೇ ೨೦.೫ರಷ್ಟು ನಾರು, ಶೇ ೪೧.೨ರಷ್ಟು ಕಾರ್ಬೋಹೈಡ್ರೇಟ್, ಶೇ ೧೬.೭ರಷ್ಟು ಬೂದಿ ಅಂಶಗಳಿವೆ.ಒಂದುಟೀ ಚಮಚ ಬೀಜಗಳನ್ನು ಒಂದು ಬಟ್ಟಲು ನೀರಿನಲ್ಲಿ ನೆನೆ ಹಾಕುವುದು.ಬೆಳಿಗ್ಗೆ ಈ ಬೀಜಗಳು ಲೋಳಿ ಸರದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ. ಇದರಲ್ಲಿ ಸ್ವಲ್ಪಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸಿದಾಗ ಶರೀರಕ್ಕೆತಂಪು ನೀಡುವುದು.
- ಈ ಬೀಜಗಳು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆಯುರ್ವೇದದಲ್ಲಿ ಅಧಿಕ ರಕ್ತದೊತ್ತಡಕ್ಕೆ ಪರಿಹಾರವಾಗಿ ತುಳಸಿ ಬೀಜಗಳನ್ನು ಬಳಸಲಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಎರಡೂ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆದರೆ ತುಳಸಿ ಬೀಜಗಳು ಹೆಚ್ಚಿನ ಲಿಪಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಒಟ್ಟಿನಲ್ಲಿ ಹೃದಯದ ಆರೋಗ್ಯ ಕಾಪಾಡುವಲ್ಲಿ ತುಳಸಿ ಬೀಜಗಳು ಪ್ರಮುಖ ಪಾತ್ರವಹಿಸುತ್ತವೆ.
- ಈ ಬೀಜಗಳು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಅಭಿವೃದ್ಧಿಪಡಿಸಲು ಹಾಗೂ ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸಲು ಸಹಕಾರಿಯಾಗಿವೆ. ಅತಿಯಾದ ಗ್ಯಾಸ್ಟಿಕ್ ಸಮಸ್ಯೆ ಇರುವವರು ಕಾಮಕಸ್ತೂರಿ ಬೀಜಗಳನ್ನು ನಿಯಮಿತವಾಗಿ ಸೇವಿಸಬೇಕು. ಇದು ಎದೆಯುರಿ ಮತ್ತು ವಾಕರಿಕೆ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
- ದೇಹದ ತೂಕ ಕಳೆದುಕೊಳ್ಳಲು ನಿಯಮಿತವಾಗಿ ಸಬ್ಜಾ ಬೀಜಗಳನ್ನು ಸೇವಿಸಬೇಕು ಅಥವಾ ನೀರಿನಲ್ಲಿ ಬೆರೆಸಿ ಕುಡಿಯಬೇಕು. ನಿಮ್ಮ ದೇಹದ ತೂಕ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ದಾರಿಮಾಡಿ ಕೊಡುತ್ತದೆ. ಹೀಗಾಗಿ ನೀವು ನಾರಿನಾಂಶ ಹೆಚ್ಚಾಗಿರುವ ಕಾಮಕಸ್ತೂರಿ ಬೀಜಗಳನ್ನು ಸೇವಿಸಿದರೆ ಪರಿಹಾರ ದೊರೆಯುತ್ತದೆ.
- ಈ ಬೀಜಗಳು ಮೂಳೆಗಳ ಮತ್ತು ಮಾಂಸಖಂಡಗಳ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಈ ಬೀಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ದೇಹ ನಮ್ಮದಾಗುವ ಹಾಗೆ ಮಾಡುತ್ತದೆ.
- ಆಂಟಿ-ಆಕ್ಸಿಡೆಂಟ್ ಅಂಶ ಹೆಚ್ಚಾಗಿರುವ ಕಾಮಕಸ್ತೂರಿ ಬೀಜಗಳನ್ನು ಸೇವಿಸುವುದರಿಂದ ಚರ್ಮದ ಆರೋಗ್ಯ ಹೆಚ್ಚುತ್ತದೆ. ಮೊಡವೆಗಳು ಹಾಗೂ ದದ್ದುಗಳು ನಿವಾರಣೆಯಾಗುತ್ತವೆ. ಇದರ ಜೊತೆಗೆ ಚರ್ಮದ ಕಾಂತಿಯು ದುಪ್ಪಟ್ಟಾಗುತ್ತದೆ.
- ಜೀರ್ಣಾಂಗ ವ್ಯವಸ್ಥೆಯ ಅಸಮತೋಲನ ಮತ್ತು ದೇಹದಲ್ಲಿ ಅತಿಯಾದ ಉಷ್ಣಾಂಶ ಕಂಡು ಬಂದಾಗ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಅಂತವರು ಕಾಮಕಸ್ತೂರಿ ಬೀಜಗಳನ್ನು ಸೇವಿಸಬೇಕು. ಇದರಲ್ಲಿ ನಾರಿನಂಶ ಹೆಚ್ಚಾಗಿದ್ದು, ನೈಸರ್ಗಿಕ ರೂಪದಲ್ಲಿ ಕರುಳಿನ ಕಲ್ಮಶಗಳು ಹೊರಗೆ ಬರುತ್ತವೆ.
- ಪ್ರತಿನಿತ್ಯ ಕಾಮಕಸ್ತೂರಿ ಎಲೆಗಳ ರಸವನ್ನು ದೇಹಕ್ಕೆ ಹಚ್ಚಿಕೊಂಡರೆ ದುರ್ಗಂಧ ನಿವಾರಣೆಯಾಗುತ್ತದೆ.ಗಂಟಲು ಬೇನೆಯಾಗಿದ್ದರೆ ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ, ಜೇನುತುಪ್ಪದಲ್ಲಿ ಬೆರೆಸಿ ನೆಕ್ಕುವುದರಿಂದ ಗುಣಕಾಣುತ್ತದೆ. ಮೂಗಿನಿಂದ ನೀರು ಸುರಿಯುವುದು, ಶೀತ ಮತ್ತು ಜ್ವರಕ್ಕೆ ಕಾಮಕಸ್ತೂರಿ ಎಲೆಗಳ ಕಷಾಯ ಮಾಡಿ 1/4 ಒಳಲೆ ಕಷಾಯಕ್ಕೆ ಸ್ವಲ್ಪಜೇನು ಸೇರಿಸಿ ಕುಡಿಸುವುದರಿಂದ ಉಪಶಮನವಾಗುತ್ತದೆ.
ಕಾಮ ಕಸ್ತೂರಿ ಬೀಜಗಳ ಸೇವನೆ ಹೇಗೆ
ಸಾಮಾನ್ಯವಾಗಿ ಸೂಪರ್ ಫುಡ್ ಎಂದು ಕರೆಯುವ ಈ ಬೇಜಗಳು ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚಿನ ಜನಪ್ರಿಯತೆ ಪಡೆದಿದ್ದು, ಹಲವರ ಡಯಟ್ನಲ್ಲಿ ಸೇರಿದೆ.

ಅನೇಕರು ಇದನ್ನು ತಿನ್ನುವ ವಿಧಾನದಲ್ಲಿ ಹಲವು ಪ್ರಯೋಗ ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಮಟ್ಟದ ಒಮೆಗಾ-3 ಆಮ್ಲ ಇದ್ದು, ಇದನ್ನು ಹಾಗೇ ಕೂಡ ತಿನ್ನುತ್ತಾರೆ. ಇಲ್ಲ ನೀರು, ಹಣ್ಣಿನ ರಸದೊಂದಿಗೆ ಬೆರಸಿ ತಿನ್ನುತ್ತಾರೆ. ಆದರೆ ಇದೀಗ ವಿಜ್ಞಾನಿಗಳು ಇದನ್ನು ರುಬ್ಬಿ ತಿನ್ನುವುದರಿಂದ ಇದರ ಫೈಬರ್ ಪ್ರಯೋಜನ ಸಿಗುತ್ತದೆ ಎಂದಿದ್ದಾರೆ. ಕಾಮ ಕಸ್ತೂರಿ ಬೀಜಗಳನ್ನು ಪುಡಿ ಮಾಡಿ ತಿಂದಾಗ ಫೈಬರ್ ಪೋಷಕಾಂಶಗಳು ದೇಹ ಸೇರುತ್ತದೆ. ಈ ಬೀಜಗಳು ಮೆಟಾಬಾಲೈಟ್ಗಳನ್ನು ಉತ್ಪಾದಿಸುತ್ತದೆ. ಇದರಿಂದ ಕರುಳಿನ ಕೋಶಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.
ಎಷ್ಟು ಸೇವಿಸಬೇಕು
ಸಾಮಾನ್ಯವಾಗಿ ವಯಸ್ಕರು ದಿನಕ್ಕೆ 1 ರಿಂದ 2 ಟೀ ಚಮಚ (ಸುಮಾರು 10-15 ಗ್ರಾಂ) ಕಾಮಕಸ್ತೂರಿ ಬೀಜಗಳನ್ನು (ಸಬ್ಜಾ ಬೀಜ) ಸೇವಿಸುವುದು ಸುರಕ್ಷಿತ. ನೀವು ಮೊದಲ ಬಾರಿ ಸೇವಿಸುತ್ತಿದ್ದರೆ, ಅಲ್ಪ ಪ್ರಮಾಣದಲ್ಲಿ ಪ್ರಾರಂಭಿಸುವುದು ಉತ್ತಮ. ಬೀಜಗಳನ್ನು ನೇರವಾಗಿ ಸೇವಿಸದೆ, ಯಾವಾಗಲೂ ನೀರಿನಲ್ಲಿ ಅಥವಾ ಇತರ ಪಾನೀಯಗಳಲ್ಲಿ (ಲಿಂಬೆ ಪಾನಕ, ಮೊಸರು, ಜ್ಯೂಸ್) ಕನಿಷ್ಠ 15-30 ನಿಮಿಷ ನೆನೆಸಿಟ್ಟು ಬಳಸುವುದು ಅತ್ಯಗತ್ಯ. ಹೆಚ್ಚು ಫೈಬರ್ ಇರುವುದರಿಂದ, ಇದನ್ನು ಸೇವಿಸುವಾಗ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಕಿಡ್ನಿ ಸಮಸ್ಯೆ ಅಥವಾ ಅಲರ್ಜಿ ಇದ್ದರೆ ಸೇವನೆಗೆ ಮುನ್ನ ವೈದ್ಯರನ್ನು ಸಂಪರ್ಕಿಸಿ.
ಸೂಚನೆ : ಯಾವುದೇ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದುಗಳನ್ನು ಮಾತ್ರ ಅವಲಂಬಿಸದೆ, ಅಗತ್ಯವಿದ್ದಲ್ಲಿ ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು.

ಸೌಮ್ಯ ಸನತ್.








