- ಒಳಮೀಸಲಾತಿ ನಿಯಮದಡಿ ನೇಮಕ
ಕಲಬುರಗಿ: ಒಳಮೀಸಲಾತಿ ವಿವಾದ ಬಗೆಹರಿದಿರುವುದರಿಂದ ಒಂದು ವಾರದಲ್ಲಿ 8 ಸಾವಿರ ಪೊಲೀಸ್ ಕಾನ್ಸ್ಟೆಬಲ್ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 545 ಪಿಎಸ್ಐಗಳು ಇಲಾಖೆಗೆ ಸೇರ್ಪಡೆಯಾಗಿದ್ದಾರೆ. ಹೊಸದಾಗಿ 600 ಪಿಎಸ್ಐಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಖಾಲಿ ಇರುವ ಹುದ್ದೆಗಳ ಪೈಕಿ 8 ಸಾವಿರ ಕಾನ್ಸ್ಟೆಬಲ್ಗಳ ನೇಮಕಾತಿ ಶೀಘ್ರವೇ ನಡೆಯಲಿದೆ. 56,834 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಈಗಾಗಲೇ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.
ಅದರಲ್ಲಿ ಕಾನ್ಸ್ಟೆಬಲ್ ಹುದ್ದೆಗಳೂ ಸೇರಿವೆ ಎಂದು ಹೇಳಿದರು.ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯಕ್ಕೆ ತಕ್ಕಂತೆ ಹೊಸ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗುವುದು. ಪ್ರಸಕ್ತ ವರ್ಷ ರಾಜ್ಯದಲ್ಲಿ 12 ಪೊಲೀಸ್ ಠಾಣೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಸೈಬರ್ ಅಪರಾಧ ಹೆಚ್ಚಳ
ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡುವ ಪ್ರಕರಣಗಳ ಬಗ್ಗೆ ಇಲಾಖೆ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಅದಕ್ಕಾಗಿಯೇ ಸೈಬರ್ ಅಪರಾಧಗಳ ಮೇಲ್ವಿಚಾರಣೆಗಾಗಿ ಡಿಜಿಪಿ ಹುದ್ದೆಯನ್ನು ಸೃಷ್ಟಿಸಲಾಗಿದೆ. 24 ಸಾವಿರ ಪ್ರಕರಣಗಳ ಪೈಕಿ 10 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಪೊಲೀಸರಿಗೂ ಸೈಬರ್ ಅಪರಾಧಗಳ ಬಗ್ಗೆ ತಾಂತ್ರಿಕ ತರಬೇತಿ ನೀಡಲಾಗುತ್ತಿದೆ ಎಂದು ಸಚಿವ ಪರಮೇಶ್ವರ್ ಮಾಹಿತಿ ನೀಡಿದರು.ಇದನ್ನು ಓದಿ –ಅನ್ನ-ನೀರಿಗೆ ಹಾಹಾಕಾರ, ಅಪಮೃತ್ಯು ಹೆಚ್ಚಳ: ಕೋಡಿಮಠ ಶ್ರೀಗಳ ಭವಿಷ್ಯವಾಣಿ
ಸಚಿವರು ತಮ್ಮ ಇಲಾಖೆ ಕೆಲಸಕ್ಕೆ ದೆಹಲಿಗೆ ಹೋದಾಗ ಎಐಸಿಸಿ ಕಚೇರಿಗೂ ಭೇಟಿ ಕೊಡುತ್ತಾರೆ. ಕಾಂಗ್ರೆಸ್ ಕಚೇರಿ ನಮ್ಮ ಪಾಲಿಗೆ ದೇವಸ್ಥಾನವಿದ್ದಂತೆ. ಇಲಾಖೆ ಕೆಲಸದ ಜೊತೆಗೆ ರಾಜಕೀಯ ಮಾಡುವುದರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದರು.








