ಎಷ್ಟೋ ಸಲ ಅನಿಸುತ್ತದೆ ಕಾಲಚಕ್ರ ಮತ್ತೇ ತಿರುಗಿ ಹಳೆಯ ವಸ್ತುಗಳು ಹೊರಗೆ ಬಂದಿವೆ ಅಂತ! ಹಿತ್ತಾಳೆ, ತಾಮ್ರ, ಮಣ್ಣಿನ ಪಾತ್ರೆಯನ್ನು ಬಳಸುತ್ತಿದ್ದಾರೆ ಜನ ಆರೋಗ್ಯದ ದೃಷ್ಟಿಯಿಂದ, ಹಳೆಯ ಕಾಲದ ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಯನ್ನು ಮನೆಯಲ್ಲಿ ಸ್ಥಳವಿಲ್ಲವೆಂದು ಕೇಜಿಯ ಲೆಕ್ಕದಲ್ಲಿ ಮಾರಿದವರು ಈಗ ಪರಿತಪಿಸುತ್ತಿದ್ದಾರೆ , ಈಗ ಒಂದು ಟ್ರೆಂಡ್ ಶುರುವಾಗಿದೆ ಮತ್ತೇ ಹಳೆಯ ಫ್ಯಾಷನ್ ಇಷ್ಟಪಡುತ್ತಿದ್ದಾರೆ ಜನರು ..
ಇಷ್ಟಾದರೂ ಸಿನಿಮಾ ಮಾತ್ರ ತನ್ನ ಒಂದು ಖದರ್ ಅನ್ನು ಪ್ರಬುದ್ಧತೆ,ಸುಂದರತೆಯನ್ನು ಮತ್ತೇ ಪಡೆಯುತ್ತಿಲ್ಲವಲ್ಲ ಎಂದೆನಿಸಿ ಮನಸ್ಸಿಗೆ ಖೇದವೆನಿಸುತ್ತದೆ! ಏಕೆಂದರೆ ಒಂದು ಕಾಲದ ಹಳೆಯ ಹಾಡುಗಳು, ಕಥೆಗಳು ಎಷ್ಟು ಚೆಂದ, ಇವು ನಮ್ಮ ಕನ್ನಡ ಸಿನಿಮಾದ ಹಾಡುಗಳು ಎಂದು ಹೇಳಲು ಮನಸ್ಸು ಹೆಮ್ಮೆಯಿಂದ ಬೀಗುತ್ತದೆ ಈಗಲೂ! ಆ ಜಮಾನಾ ಕಳೆದು ಹೋಯ್ತಾ ಅಂತ ಕಳವಳ ಉಂಟಾಗುತ್ತದೆ ಒಂದೊಂದು ಸಲ!
ಬಿಸಿಲಾದರೇನು ಮಳೆಯಾದರೇನು, ಜೊತೆಯಾಗಿ ಇಂದು ನಾನಿಲ್ಲವೇನು! ಎನ್ನುವ ಹಾಡಿನಲ್ಲಿ ಎಷ್ಟು ಚೆಂದದ ಪ್ರೀತಿಯ ಅಭಯ ಹಸ್ತವಿತ್ತು! ಅದೇ ರೀತಿ ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು,ನಗುತಾದ ಭೂತಾಯಿ ಮನಸು, ಅಂತ ಹಾಡಿದ ಹಾಡಿನ ಮಾಧುರ್ಯಕ್ಕೆ ನಿಜ ಜೀವನದಲ್ಲಿ ಬೇರ್ಪಟ್ಟ ಎಷ್ಟೋ ಜೋಡಿಗಳು ಮತ್ತೇ ಒಲವಿನಿಂದ ಒಂದಾಗಿರಬಹುದು!
ತನು ನಿನ್ನದು, ಈ ಮನ ನಿನ್ನದು, ನನಗಾಗಿ ಇಂದೇನಿದೆ ಈ ಜೀವ ಎಂದೆಂದು ನಿನದಾಗಿದೆ ಎನ್ನುವ ಒಲವ ತುಂಬಿದ ಸಮರ್ಪಣಾ ಭಾವದ ಈ ಹಾಡು ಒಂದು ಸ್ಪೂರ್ತಿಯನ್ನು ತುಂಬಿರಬಹುದು ಪ್ರೇಮದ ಕಾಣಿಕೆಯಾಗಿ! ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ! ಎಂದು ಹಾಡಿದ ಹಾಡು ಮದುವೆಯಾದ ಹೊಸ ಜೋಡಿಯ ಮನಸ್ಸಿಗೆ ಹಿತವಾದ ಮುದ ಕೊಟ್ಟಿರಬಹುದು! ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ , ಕಣ್ಣಲ್ಲಿ ತುಂಬಿರುವೆ ಎಂದಾಗ ಮೌನದ ಮಾತಿಗೆ ಪ್ರೀತಿಯ ಲೇಪನ! ಹಾಡು,ಹಾಡು ಹಳೆಯದಾದರೇನು ಭಾವ ನವನವೀನ ಅಲ್ಲವೇ! ದೂರದ ಊರಿಂದ ಹಮ್ಮೀರ ಬಂದಾ, ಜರತಾರಿ ಸೀರೆ ತಂದಾ,ಅದರೊಳಗೆ ಇಟ್ಟಿನಿ ಈ ನನ್ನ ಮನಸನ್ನ ಜೋಪಾನ ಜಾಣೆ ಎಂದಾ, ಎನ್ನುವ ಹಾಡು ಹೃದಯದ ಬಡಿತ ಜಾಸ್ತಿ ಮಾಡುತಿತ್ತು ಯುವತಿಯರಿಗೆ! ಬಣ್ಣಾ ನನ್ನ ಒಲವಿನ ಬಣ್ಣ, ನನ್ನ ಬದುಕಿನ ಬಣ್ಣ ಎನ್ನುವ ಹಾಡು ಪ್ರೀತಿಯ ಬಣ್ಣವನ್ನು ಬಂಧಿಸಿಟ್ಟಿತ್ತು ಹುಡುಗಿಯರ ಕಣ್ಣಂಚಿನಲ್ಲಿ!
ಅದೇ ರೀತಿ ನಿಧಾನವಾಗಿ ಜನಗಳ ಅಭಿರುಚಿ ಬದಲಾದಂತೆ, ಸಾಹಿತ್ಯದಲ್ಲಿ, ರಾಗ ಸಂಯೋಜನೆಯಲ್ಲಿ, ಹಿನ್ನೆಲೆ ಸಂಗೀತದಲ್ಲಿ ಸಾಕಷ್ಟು ಬದಲಾವಣೆ ಕಂಡರೂ, ಹಾಡಿನ ಮಾಧುರ್ಯತೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿಲ್ಲ! ಹಾಡಲ್ಲಿ ಇರುವ ಆ ಒಂದು ಪದಗಳ ಗೌಪ್ಯತೆಯನ್ನು ಅರ್ಥಮಾಡಿಕೊಂಡಾಗ ಮನಸ್ಸು ಪ್ರೀತಿಯ ಮಾಯಾಲೋಕದಲ್ಲಿ ತೇಲಾಡಿದ ಭಾವ!
ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು, ಎನ್ನುವ ಸುಂದರ ಹಾಡು ಮೈಮನದಲ್ಲಿ ನವಿರಾದ ಕಂಪನ ತಂದಿರಬಹುದು ಹೊಸ ಜೋಡಿಯಾಗುವ ಕನಸು ಕಾಣುತ್ತಿರುವ ತರುಣ ತರುಣಿಯರಿಗೆ !
ಅದೇ ರೀತಿಯ ಇನ್ನೊಂದು ಹಾಡು, ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಎನ್ನುವ ಈ ಹಾಡಿನ ಮಾಧುರ್ಯವಂತೂ ನೋವಿನಲ್ಲೂ ಪ್ರೀತಿಯ ಆ ಸೆಳೆತವನ್ನು ತಂದು ಸವಿ ಜೇನು ಸವಿದಂಥ ರೀತಿಗೆ ಫಿದಾ ಆದವರಿಲ್ಲ! ಒಂದೊಂದು ಹಾಡುಗಳು ಎಷ್ಟು ದಿನ, ವರ್ಷಗಳ ನಂತರ ಗುನುಗಿಸಿದರೂ ಮನಸ್ಸಿಗೆ ಒಂದು ರೀತಿಯ ಹಿತವಾದ ತಂಪಾದ ಬೆಳದಿಂಗಳಂತೆ! ಇಂತಹ ನೂರಾರು ಎವರ್ಗ್ರೀನ್ ಹಾಡು ಕನ್ನಡದಲ್ಲಿ ಹುಟ್ಟಿವೆ!
ಇನ್ನು ನಮ್ಮ ಕರುನಾಡು ಅಭಿಮಾನ ಪಡುವಂತಹ ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಗಂಧದ ಗುಡಿ, ಅಂದದ ನುಡಿ, ಶ್ರೀಗಂಧದ ಗುಡಿ ಎನ್ನುವ ಹಾಡು ಎಷ್ಟು ಸುಮಧುರ! ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಎಂದಾಗ ಮನಸ್ಸು ಹೂವಿನಂತೆ ಹಗುರ! ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದಾಗ ಹೌದು ಖಂಡಿತ ಎನಿಸುತ್ತದೆ! ಕನ್ನಡ ನಾಡಿನ ಜೀವ ನದಿ ಕಾವೇರಿ ಎಂದಾಗ ನೀರನ್ನು ಕಣ್ಣಿಗೊತ್ತಿಕೊಳ್ಳುವ ಭಕ್ತಿಯ ಭಾವನೆ, ಕನ್ನಡ ನಾಡಿನ ವೀರರ ಮಣಿಯಾ ಗಂಡು ಭೂಮಿಯ ವೀರ ನಾರಿಯಾ ಚರಿತೆಯ ನಾನು ಹಾಡುವೆ ಎನ್ನುವ ಹಾಡು ಹೆಣ್ಣು ಮಕ್ಕಳಿಗೆ ಹೆಮ್ಮೆಯ ಕಿರೀಟ ತೊಡಿಸಿದ ಹಾಗೆ! ಕರು ನಾಡು ತಾಯಿ ಸದಾ ಚಿನ್ಮಯಿ ಆಹಾ ಎಷ್ಟು ಚೆಂದ! ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಎನ್ನುವ ಹಾಡು ಕೇಳಿದರೆ ಮನ ತುಂಬಿ ಬರುತ್ತದೆ ದೇಶ ಭಕ್ತಿಯಿಂದ !
ಹೀಗೆ ಬೇಕಾದಷ್ಟು ದೇಶ ಹಾಗು ನಾಡ ಭಕ್ತಿಯ ಹಾಡು ಕೇಳಿ ಮನಸ್ಸು ಧನ್ಯತೆಯನ್ನು ಅನುಭವಿಸಿತ್ತು!
ಆದರೆ ಈಗಿನ ಚಿತ್ರದಲ್ಲಿ ಆ ಮಾಧುರ್ಯವಿಲ್ಲ , ಹಾಡಿನಲ್ಲಿ ಪ್ರೀತಿಯ ನವಿರಾದ ಸೆಳೆತವಿಲ್ಲ, ಕಥೆಯಂತೂ ನಿಂತ ನೀರಿನಂತೆ, ಅದಕ್ಕೆ ಅರ್ಥವೇ ಇರುವುದಿಲ್ಲ, ಅಬ್ಬರದ ಹಾಡು, ಅಬ್ಬರದ ಫೈಟಿಂಗ್ ಇಷ್ಟೇ, ಕಥೆಯ ಮಾತಿನಲ್ಲಿ( ಡೈಲಾಗ್ ) ತೂಕವಿರುವುದಿಲ್ಲ, ಬಟ್ಟೆಯ ಪರಿಜ್ಞಾನವಿಲ್ಲ, ಆಗೀನ ಕ್ಲಬ್ ಡ್ಯಾನ್ಸರ್ ಈಗೀನ ಹೀರೊಯಿನ್ ಅನಿಸುತ್ತೆ !ಡಬಲ್ ಮೀನಿಂಗ್ ಮಾತು, ಅತಿ ಕೆಟ್ಟ ಹಾಸ್ಯ!
ಇದಕ್ಕಾಗಿ ನಾವು ಸಾವಿರಾರು ರೂಪಾಯಿ ದಂಡ ಬಡಿದು ಮಾಲ್ ಗೆ ಹೋಗಿ ಹೊರಗೆ ಸಿಗುವ ನಲವತ್ತು ರೂಪಾಯಿಯ ಪಾಪ್ಕಾರ್ನ್ ಗೆ ಮುನ್ನೂರು ರೂಪಾಯಿ ಕೊಟ್ಟು, ಸ್ವಲ್ಪವೂ ಮುದವಿಲ್ಲದ ಸಿನಿಮಾದ ಅಬ್ಬರಕ್ಕೆ ತಲೆನೋವು ಬರಿಸಿಕೊಂಡು ಮನೆಯಲ್ಲಿ ಅಡುಗೆ ಮಾಡುವ ಮೂಡಿಲ್ಲದೆ ಹೊರೆಗೆ ತಿಂದು ಬರುವ ಅನಿವಾರ್ಯತೆ!
ಅದರ ಬದಲು ಮುನ್ನೂರು,ನಾನ್ನೂರು ರೂಪಾಯಿ ಕೊಟ್ಟರೆ ತಿಂಗಳು ಪೂರ್ತಿ ನೋಡುವ ನೆಟ್ ಫ್ಲಿಕ್ಸ್, ಪ್ರೈಮ್ ವೀಡಿಯೋ ಮುಂತಾದ ಆನ್ಲೈನ್ ಮಾಧ್ಯಮಗಳೇ ಸರಿ ನಮಗೆ! ಇಷ್ಟ ಆದ್ರೆ ನೋಡ್ತೀವಿ, ಕಷ್ಟವಾದರೆ ಬಿಡ್ತೀವಿ ಅಷ್ಟೇ ಅಲ್ವಾ ಸಿಂಪಲ್!
ಮುಂದಿನ ದಿನಗಳಲ್ಲಾದರೂ ಕನ್ನಡ ಸಿನಿಮಾ ನೋಡಲು ಥೀಯೇಟರ್ ಹೋದರೆ ಹಳೆಯ ಕಾಲ ಮತ್ತೆ ಬಂದಿತು ಅನಿಸುವಂತಿರಬೇಕು, ಕುಟುಂಬದವರೆಲ್ಲರೂ ಕುಳಿತು ಮುಜುಗರ ಪಡದೆ ಖುಷಿ ಖುಷಿಯಿಂದ ಚಿತ್ರ ವೀಕ್ಷಿಸುವಂತಿರಬೇಕು!
ಆಗಿನ ನಟಿಯರು ತುಂಬು ಸೆರಗು ಹೊದ್ದು ಮುಖದಲ್ಲಿ ತೋರಿಸುವ ನಾಚಿಕೆಯಿಂದ ಕೆಂಪಾದರೆ ರಸಿಕರ ಮನ ಕೆಂಪಾದವೋ ಎಲ್ಲಾ ಕೆಂಪಾದವೋ! ಎನ್ನುವಂತೆ ಹೂವು ಅರಳಿದ ಹಾಗೆ ತನು ಮನಕ್ಕೆ ಚೆಂದದ ಭಾವ, ಸಿನಿಮಾ ನೋಡಿ ಸಂತೃಪ್ತಿಯಿಂದ, ಸಂತೋಷದಿಂದ ತಮ್ಮ ಮನೆ ಸೇರಿಕೊಳ್ಳುತಿದ್ದರು ಅದೇ ಗುಂಗಿನಲ್ಲಿ ವೀಕ್ಷಕರು!
ಈಗ ಹೀರೊಯಿನ್ ಅರ್ಧಂಬರ್ಧ ಬಟ್ಟೆ ಹಾಕಿ ಕುಣಿದರೆ ಮಾತ್ರ ಸಿನಿಮಾ ಹಿಟ್ ಆಗುತ್ತದೆ ಎನ್ನುವ ಅಪನಂಬಿಕೆ!
ಈ ಸಿನಿಮಾದ ಕಥೆಯಲ್ಲಿ ಯಾವ ವಿಷಯವಿತ್ತು, ತಾತ್ಪರ್ಯವಿತ್ತು,
ಎನ್ನುವ ಗೊಂದಲ ಮನಸ್ಸಿಗೆ ಹುಟ್ಟುತ್ತದೆ ! ಸಿನಿಮಾ ಹೇಗಿತ್ತು ಅಂತ ಯಾರಾದರೂ ಕೇಳಿದರೆ ಒಂದು ಸಲ ನೋಡಿದರೆ ನೋಡಬಹುದೇನೋ !ಎಂದು ಅನುಮಾನ ವ್ಯಕ್ತಪಡಿಸುತ್ತೇವೆ ಪೂರ್ತಿಯಾಗಿ ಸರಿಯಿಲ್ಲ ಎಂದು ಹೇಳಲು ಸಂಕೋಚಪಟ್ಟು ಕೊಳ್ಳುವ ಮನಸ್ಥಿತಿ
ಆಗಿನ ಕಾಲದ ಲಕ್ಷ್ಮಿ, ಸರಿತಾ, ಗೀತಾ, ಮಾಧವಿ, ಆರತಿ,ಮಹಾಲಕ್ಷ್ಮಿ, ಸುಹಾಸಿನಿ ಇವರುಗಳ ಅದ್ಭುತ ನಟನೆ ಕಣ್ಣಲ್ಲೇ ತೋರುವ ಸುಂದರ ಹಾವಭಾವ ನೋಡಿದರೆ ಸಾಕು ಜನ ಅಲ್ಲೇ ಫಿದಾ ಆಗಿ ಸಿಳ್ಳೆ ಹಾಕುತ್ತಿದ್ದರು ಅಂತಹ ನಟಿ ನಟಿಯರು ಅವರು, ಆಗಿನ ಮಾತಿನ ವೈಖರಿ, ಕೋಗಿಲೆ ಧ್ವನಿಯಂತೆ ಕೇಳುವ ಆ ಸುಮಧುರ ಗಾನ, ಅತಿ ಮಧುರ ಹಿನ್ನೆಲೆ ಸಂಗೀತ ಈಗ ಮರುಕಳಿಸಬಾರದೆ ಎಂದೆನಿಸುತ್ತದೆ!
ಸನಾದಿ ಅಪ್ಪಣ್ಣ, ಗಂಧದ ಗುಡಿ, ನಾಗರಹಾವು, ಮಾನಸ ಸರೋವರ, ಬಂಧನ, ಪ್ರೇಮಲೋಕ, ರಾಮಾಚಾರಿ, ನಮ್ಮೂರ ಮಂದಾರ ಹೂವೇ, ಸ್ಪರ್ಶ, ಮಿಲನ ಹೀಗೆ ಇನ್ನು ಎಷ್ಟೋ ಸಿನಿಮಾಗಳು ಎಷ್ಟು ಸೂಪರ್ ಹಿಟ್ ಆದವು ಒಂದು ಕಾಲದಲ್ಲಿ ನೆನಪಿಸಿ ಕೊಳ್ಳುತ್ತಾ ಹೋದರೆ ಬೇಕಾದಷ್ಟಿವೆ ಅಲ್ಲವೇ! ಸಿನಿಮಾದ ಹೆಸರುಗಳೇ ಮನಸ್ಸಿಗೆ ಉಲ್ಲಾಸ ತರುತ್ತವೆ ಒಂಥರಾ!
ಮುಂದಿನ ದಿನಗಳಲ್ಲಿ ನಮ್ಮ ಕನ್ನಡ ಸಿನಿಮಾ ಇದು ಎಂದು ನಾವು ಅಭಿಮಾನದಿಂದ ನುಡಿಯುವ ಭಾಗ್ಯ ಮತ್ತೇ ನಮಗೆ ಸಿಗಲಿ, ಒಳ್ಳೆಯ ನಟಿ ನಟಿಯರಿಗೆ ಅವಕಾಶಗಳು ಸಿಗಲಿ, ಕನ್ನಡದ ಶುದ್ಧ ಉಚ್ಚಾರಣೆಯ ಸೊಗಸಿರಲಿ, ಹಿನ್ನೆಲೆ ಸಂಗೀತ ಮಾಧುರ್ಯ ತುಂಬಲಿ,ಗಾಯನ ಇಂಪಾಗಿ, ನಟನೆ ಮೃದುವಾದ ವೀಣೆ ನುಡಿಸಲಿ, ಚೆಂದದ ವಸ್ತ್ರ ವಿನ್ಯಾಸಕರು ಬೆಳಕಿಗೆ ಬರಲಿ ಎಂದು ಆಶಿಸುತ್ತಾ ಆ ಕಾಲ ಮತ್ತೇ ಆದಷ್ಟು ಬೇಗನೆ ಕೂಡಿ ಬರಲಿ ಎಂದು ಮನಸ್ಸು ಬಯಸುತ್ತಿದೆ.

ಸ್ನೇಹಾ ಆನಂದ್








