ಬೆಂಗಳೂರು, ಜೂನ್ 21: ಈ ಬಾರಿ ಮುಂಗಾರು ಮಳೆ ಕಳೆದ ವರ್ಷಕ್ಕಿಂತ ಉತ್ತಮವಾಗಿರುವ ಲಕ್ಷಣಗಳಿದ್ದು, ರಾಜ್ಯದ ಹಲವೆಡೆ ಮುಂದಿನ 6 ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ವರ್ಷ ಮಳೆಯು ಜೂನ್ 4ರಂದು ಭಾರತಕ್ಕೆ ಪ್ರವೇಶಿಸಿದರೆ, ಈ ಬಾರಿ ಮುಂಗಾರು ಮಾರುತವು ಮೇ ತಿಂಗಳಲ್ಲಿಯೇ ಆರಂಭವಾಗಿದೆ. ಇದರಿಂದಾಗಿ ಕರ್ನಾಟಕದ ಹಲವು ಭಾಗಗಳಲ್ಲಿ ಕಳೆದ 15 ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ.
ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ತಜ್ಞರು ವ್ಯಕ್ತಪಡಿಸಿದ್ದಾರೆ. ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಲಿರುವುದರಿಂದ ರೈತರು ಮತ್ತು ಕೃಷಿ ಚಟುವಟಿಕೆಗಳಿಗೆ ಇದು ಬಹಳ ಅನುಕೂಲವಾಗಲಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಗೆ ಹೊಂದಿಕೊಂಡ ಮಲೆನಾಡು ಭಾಗಗಳು ಹಾಗೂ ಕೆಲವು ಒಳನಾಡು ಜಿಲ್ಲೆಗಳಲ್ಲಿ ಸಹ ಮಳೆಯಾಗುವ ಸಾಧ್ಯತೆ ಇದೆ. ಮುಂಗಾರು ಸರಿಯಾಗಿ ಆರಂಭವಾಗುವ ಮುನ್ನವೇ ಹಲವೆಡೆ ಮಳೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಸಹ ಜೂನ್ 26ರವರೆಗೆ ಮಳೆ ಮುಂದುವರಿಯಲಿದೆ.ಇದನ್ನು ಓದಿ –ಪ್ಯಾರಿಸ್ ಡೈಮಂಡ್ ಲೀಗ್ : ಬಂಗಾರ ಗೆದ್ದ ನೀರಜ್ ಚೋಪ್ರಾ
ಹವಾಮಾನ ತಜ್ಞರ ಅಂದಾಜು ಪ್ರಕಾರ ಈ ಬಾರಿ ಮುಂಗಾರು ಅತ್ಯಂತ ಲಾಭದಾಯಕವಾಗಲಿದ್ದು, ರಾಜ್ಯದ ನೀರಾವರಿ, ಕೃಷಿ ಮತ್ತು ಭೂಮಿಯ ತಂಪಿಗಾಗಿ ಸಹಕಾರಿಯಾಗಲಿದೆ.