- ಅಧ್ಯಕ್ಷೆ, ಕಾರ್ಯದರ್ಶಿ ಮನೆ ಮುಂದೆ ಹಾಲು ಸುರಿದು ಗ್ರಾಮಸ್ಥರ ಪ್ರತಿಭಟನೆ
ಮಂಡ್ಯ: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಡೈರಿ ಅಧ್ಯಕ್ಷೆ ಹಾಗೂ ಕಾರ್ಯದರ್ಶಿಯ ಮನೆ ಮುಂದೆ ಹಾಲು ಸುರಿದು ಪ್ರತಿಭಟನೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಐಕನಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮಸ್ಥರ ಪ್ರಕಾರ, ಐಕನಹಳ್ಳಿಕೊಪ್ಪಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಕಳೆದ ಕೆಲವು ತಿಂಗಳಿನಿಂದ ಹಣಕಾಸು ವ್ಯವಹಾರಗಳಲ್ಲಿ ಗಂಭೀರ ಅಕ್ರಮಗಳು ನಡೆಯುತ್ತಿದ್ದು, ಇದರ ಪರಿಣಾಮವಾಗಿ ಷೇರುದಾರರು ಮತ್ತು ಹಾಲು ಉತ್ಪಾದಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ. ಸಂಘದ ಆರ್ಥಿಕ ಸ್ಥಿತಿಗೂ ದೊಡ್ಡ ಹೊಡೆತ ಬಿದ್ದಿದ್ದು, ಸಂಸ್ಥೆಯ ವಿಶ್ವಾಸಾರ್ಹತೆಯ ಮೇಲೆಯೂ ಅನುಮಾನ ವ್ಯಕ್ತವಾಗಿದೆ.
ಈ ಕುರಿತು ಗ್ರಾಮಸ್ಥರು ಹಲವು ಬಾರಿ ಆಡಳಿತ ಮಂಡಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗದ ಕಾರಣ ಕೊನೆಗೆ ಅವರು ಕೋಪಗೊಂಡು ಡೈರಿ ಅಧ್ಯಕ್ಷೆ ರಾಧಾ ಹಾಗೂ ಕಾರ್ಯದರ್ಶಿ ಯಶೋಧಾ ಅವರ ಮನೆ ಮುಂದೆ ಹಾಲು ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮಸ್ಥರು ಸಂಘದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತಕ್ಷಣ ತನಿಖೆ ನಡೆಸಿ, ದುರುಪಯೋಗ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಜೊತೆಗೆ, ಸಂಘದ ಹಣವನ್ನು ದುರುಪಯೋಗ ಮಾಡಿದವರು ಮತ್ತೆ ಸಂಘಕ್ಕೆ ಮರುಪಾವತಿಸಬೇಕೆಂದು ಬೇಡಿಕೊಂಡಿದ್ದಾರೆ.ಇದನ್ನು ಓದಿ –ಮುಂದಿನ 6 ತಿಂಗಳಲ್ಲಿ ಪೆಟ್ರೋಲ್ ದರದಷ್ಟೇ ಇವಿ ಬೆಲೆ: ನಿತಿನ್ ಗಡ್ಕರಿ
ಸ್ಥಳೀಯರು ಸರ್ಕಾರ ಮತ್ತು ಹಾಲು ಮಹಾಮಂಡಳಿಯಿಂದ ಕೂಡ ತನಿಖೆ ನಡೆಸಿ ಸತ್ಯ ಹೊರತರುವಂತೆ ಮನವಿ ಮಾಡಿದ್ದಾರೆ. ಈ ಘಟನೆ ಗ್ರಾಮದಲ್ಲಿ ದೊಡ್ಡ ಚರ್ಚೆಯಾಗಿ ಮಾರ್ಪಟ್ಟಿದ್ದು, ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.








