ಬೆಂಗಳೂರು: ವಿಧಾನಸಭಾ ಸದಸ್ಯರ ಸದಸ್ಯತ್ವವನ್ನು ನೇರವಾಗಿ ರದ್ದು ಮಾಡುವ ಅಧಿಕಾರ ಸ್ಪೀಕರ್ಗೆ ಇಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಅವರ ಶಾಸಕ ಸ್ಥಾನ ರದ್ದುಪಡಿಸುವ ಕುರಿತು ಮನವಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ. ಖಾದರ್, ಯಾವುದೇ ಸದಸ್ಯರ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್ಗೆ ಇಲ್ಲ ಎಂದು ಹೇಳಿದರು.
ನಿಯಮದ ಪ್ರಕಾರ ಯಾರಾದರೂ ಶಿಕ್ಷೆಗೆ ಒಳಪಟ್ಟರೆ ಅವರು ಸ್ವಯಂ ಅನರ್ಹರಾಗುತ್ತಾರೆ. ಸದಸ್ಯತ್ವ ರದ್ದಾಗುವುದು ಸ್ವಯಂಚಾಲಿತ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಸ್ಪೀಕರ್ ನೇರ ಪಾತ್ರವಿಲ್ಲ ಎಂದು ವಿವರಿಸಿದರು.
ಈ ಕುರಿತು ಕಾರ್ಯದರ್ಶಿಗೆ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದೇನೆ. ನಮ್ಮಿಂದ ಮಾಹಿತಿ ನೀಡುವುದು ಮಾತ್ರ ಸಾಧ್ಯ. ಕಾನೂನು ಪ್ರಕಾರ ಸದಸ್ಯತ್ವ ತನ್ನಿಂದ ತಾನೇ ರದ್ದಾಗುತ್ತದೆ ಎಂದು ತಿಳಿಸಿದರು.
ನ್ಯಾಯಾಲಯದಿಂದ ತಡೆ ಆದೇಶ ಸಿಕ್ಕರೆ ಸದಸ್ಯತ್ವ ಮತ್ತೆ ಪುನಃಸ್ಥಾಪನೆಯಾಗುತ್ತದೆ. ನಮ್ಮ ಕೆಲಸ ಮಾಹಿತಿ ನೀಡುವುದಷ್ಟೇ ಎಂದು ಹೇಳಿದರು.ಇದನ್ನು ಓದಿ –ತಿರುಪತಿಗೆ ತಿಂಗಳಿಗೆ 2 ಲಕ್ಷ ಕೆಜಿ ನಂದಿನಿ ತುಪ್ಪ ಪೂರೈಕೆ: ಡಿ.ಕೆ. ಸುರೇಶ್
ಈ ವಿಷಯದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಎಂಬ ತಾರತಮ್ಯ ಇಲ್ಲ. ಕಾನೂನು ಪ್ರಕಾರವೇ ಕ್ರಮ ಜರುಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.








