ಬೆಂಗಳೂರು: ರಾಯರ ಭಕ್ತರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಸಂತಸದ ಸುದ್ದಿ ಸಿಕ್ಕಿದೆ. ಮಂತ್ರಾಲಯಕ್ಕೆ ನೇರ ರೈಲು ಸಂಪರ್ಕದ ಬೇಡಿಕೆ ಬಹುಕಾಲದಿಂದ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಕಾಕಿನಾಡ–ಮೈಸೂರು ನಡುವಿನ ಬಹುನಿರೀಕ್ಷಿತ ಬೈ-ವೀಕ್ಲಿ ಎಕ್ಸ್ಪ್ರೆಸ್ ರೈಲು ಸೇವೆಗೆ ಅಧಿಕೃತ ಅನುಮೋದನೆ ದೊರೆತಿದ್ದು, ಮೇ 1, 2026ರಿಂದ ಸಂಚಾರ ಆರಂಭವಾಗಲಿದೆ.
ಈ ಹೊಸ ರೈಲು ಸೇವೆಯಿಂದ ಮೈಸೂರು, ಬೆಂಗಳೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮಂತ್ರಾಲಯ ರೋಡ್ಗೆ ನೇರ ಸಂಪರ್ಕ ಸಿಗಲಿದೆ. ಇದರಿಂದ ರಾಯರ ಭಕ್ತರಿಗೆ ಪ್ರಯಾಣ ಸುಲಭವಾಗಲಿದ್ದು, ವ್ಯಾಪಾರ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ.
ರೈಲು ಸಂಖ್ಯೆ 17289/17290ರ ಈ ವಿಶೇಷ ಎಕ್ಸ್ಪ್ರೆಸ್ ರೈಲು ವಾರದಲ್ಲಿ ಎರಡು ಬಾರಿ ಸಂಚರಿಸಲಿದೆ. ಮಾರ್ಗ ಮಧ್ಯೆ ಒಟ್ಟು 33 ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.ಇದನ್ನು ಓದಿ –ನಾಳೆ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ನಿರ್ಮಲಾ ಸೀತಾರಾಮನ್ ಭೇಟಿ
ಈ ರೈಲು ಸೇವೆಯಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಧಾರ್ಮಿಕ ಹಾಗೂ ವಾಣಿಜ್ಯ ಸಂಪರ್ಕಕ್ಕೂ ಹೊಸ ದಾರಿ ತೆರೆದಂತಾಗಿದೆ.








