ಚಾಮರಾಜನಗರ: ಕಳೆದ ಒಂದೂವರೆ ತಿಂಗಳಿನಿಂದ ತನ್ನ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡು ಏಳು ಗ್ರಾಮಗಳ ಜನರಲ್ಲಿ ಭಾರೀ ಆತಂಕ ಮೂಡಿಸಿದ್ದ ತಾಯಿ ಹುಲಿ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ.
ಆದರೆ ಅದರ ನಾಲ್ಕು ಮರಿ ಹುಲಿಗಳು ನಾಪತ್ತೆಯಾಗಿರುವುದು ಅರಣ್ಯ ಇಲಾಖೆಗೆ ಹೊಸ ಸವಾಲಾಗಿ ಪರಿಣಮಿಸಿದೆ.
ಕಾಡಿನಿಂದ ಬಹುದೂರ ಇರುವ ಗ್ರಾಮ ಪ್ರದೇಶದಲ್ಲಿ, ರೈತರೊಬ್ಬರ ತೋಟದಲ್ಲಿ ತಾಯಿ ಹುಲಿ ಹಾಗೂ ಅದರ ನಾಲ್ಕು ಪಡ್ಡೆ ಮರಿಗಳು ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದ್ದವು. ಈ ಐದು ಹುಲಿಗಳ ಸಂಚಾರದ ದೃಶ್ಯ ತೋಟದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಬಳಿಕ ಅರಣ್ಯ ಇಲಾಖೆ ನೂರಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಐದು ಸಾಕಾನೆಗಳೊಂದಿಗೆ ಹತ್ತು ದಿನಗಳ ಕಾಲ ಹುಲಿ ಸೆರೆ ಕಾರ್ಯಾಚರಣೆ ನಡೆಸಿತ್ತು.
ಕಾರ್ಯಾಚರಣೆಯ ವೇಳೆ ಸುಮಾರು ಎಂಟು ದಿನಗಳ ಹಿಂದೆ ಮತ್ತೊಂದು ಗಂಡು ಹುಲಿ ಸೆರೆಸಿಕ್ಕಿತ್ತು. ಆದರೆ ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳು ಚಳ್ಳೆಹಣ್ಣು ತಿನ್ನಿಸಿ ನಾಪತ್ತೆಯಾಗಿದ್ದರಿಂದ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.
ನಿನ್ನೆ ಬೆಳಗ್ಗೆ ಬುಲೆಟ್ ಮಾದಪ್ಪ ಎಂಬ ರೈತರಿಗೆ ಸೇರಿದ ಬಾಳೆ ತೋಟದಲ್ಲಿ ಅಳವಡಿಸಿದ್ದ ಬೃಹತ್ ಬೋನಿಗೆ ತಾಯಿ ಹುಲಿ ಸೆರೆಯಾಗಿದೆ. ಬೋನಿನಲ್ಲಿ ಕಟ್ಟಿದ್ದ ಹಸುವನ್ನು ಹುಲಿ ಕೊಂದುಹಾಕಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಕುಮಾರಸ್ವಾಮಿ ಎಂಬುವರ ತೋಟದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಬೆಳಗಿನ ಜಾವ ಹುಲಿಯೊಂದು ಸಂಚರಿಸುತ್ತಿರುವ ದೃಶ್ಯವೂ ದಾಖಲಾಗಿದೆ. ಬೋನಿಗೆ ಸಿಕ್ಕಿರುವ ಹುಲಿ ಅದೇನಾ ಎಂಬುದು ವೈಜ್ಞಾನಿಕ ಪರಿಶೀಲನೆಯಿಂದ ದೃಢಪಡಬೇಕಿದೆ.ಇದನ್ನು ಓದಿ –ಗ್ರೇಟರ್ ಮೈಸೂರು ಗೆ ಅಧಿಸೂಚನೆ
ತಾಯಿ ಹುಲಿ ಸೆರೆಯಾದ ಬಳಿಕ ಮರಿ ಹುಲಿಗಳನ್ನು ಕೂಡ ಶೀಘ್ರ ಪತ್ತೆಹಚ್ಚಿ ಸೆರೆಹಿಡಿಯಬೇಕು. ಇಲ್ಲವಾದರೆ ರೈತರು ಮತ್ತು ಗ್ರಾಮಸ್ಥರು ನಿತ್ಯ ಆತಂಕದಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ಎದುರಾಗಲಿದೆ .








